ಗ್ರಾಪಂ ಚುನಾವಣೆ ಸ್ಪರ್ಧಿಸಲು ಅಗತ್ಯ ದಾಖಲೆಗಾಗಿ ತಾಲೂಕು ಕಚೇರಿಗೆ ಮುಗಿಬಿದ್ದ ಸ್ಪರ್ಧಿಗಳು
Team Udayavani, Dec 8, 2020, 1:38 PM IST
ಕನಕಪುರ: ಗ್ರಾಪಂ ಚುನಾವಣೆಗೆ ಸೋಮವಾರದಿಂದ ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ಆರಂಭಗೊಂಡಿದ್ದು, ಸ್ಪರ್ಧಿಗಳು ಅಗತ್ಯ ದಾಖಲೆಗಾಗಿ ತಾಲೂಕುಕಚೇರಿಗೆ ಮುಗಿಬಿಳುತ್ತಿದ್ದಾರೆ.
ತಾಲೂಕಿನ 43 ಗ್ರಾಪಂನ ಹಾರೋಹಳ್ಳಿ ಗ್ರಾಪಂ ಅನ್ನು ಪಪಂ ಆಗಿ ಮೇಲ್ದರ್ಜೆ ಗೇರಿಸಿದ ಹಿನ್ನೆಲೆಯಲ್ಲಿಹಾರೋಹಳ್ಳಿ, ಕಗ್ಗಲಹಳ್ಳಿ, ಟಿ.ಹೊಸಹಳ್ಳಿ, ಕೊಳ್ಳಿಗನಹಳ್ಳಿ, ದ್ಯಾವಸಂದ್ರ, ಆಡಳಿತ ಮಂಡಳಿ ಅವಧಿ ಮುಗಿಯದ ಉಯ್ಯಂಬಹಳ್ಳಿ ಮತ್ತು ನಲ್ಲಹಳ್ಳಿ ಗ್ರಾಪಂ ಹೊರತುಪಡಿಸಿ, ಉಳಿದ 36 ಗ್ರಾಪಂಗೆ ಚುನಾವಣೆ ನಿಗದಿ ಆಗಿದೆ. ಸ್ಪರ್ಧಾಕಾಂಕ್ಷಿಗಳು ಅಗತ್ಯ ದಾಖಲೆ ಪಡೆಯಲು ತಾಲೂಕುಕಚೇರಿಗೆ ಮುಗಿಬಿದ್ದಿದ್ದಾರೆ.
ಯುವಕರು ಆಕಾಂಕ್ಷಿಗಳು: ಇತ್ತೀಚಿಗೆ ಯುವಕರು ವಿವಿಧ ಪಕ್ಷಗಳಲ್ಲಿ ಗುರುತಿಸಿಕೊಂಡು ಚುನಾವಣೆ ಗಳಲ್ಲಿ ಸ್ಪರ್ಧಿಸಲು ಆಕಾಂಕ್ಷಿಗಳಾಗಿದ್ದಾರೆ. ತಾಲೂಕಿನಲ್ಲಿ ಕಾಂಗ್ರೆಸ್ ಹೆಚ್ಚಿನ ಪ್ರಾಬಲ್ಯ ಹೊಂದಿದ್ದು, ಸಂಸದ ಡಿ.ಕೆ. ಸುರೇಶ್ ಚುನಾವಣಾ ಪೂರ್ವಭಾವಿ ಸಭೆನಡೆಸಿ, ಪಕ್ಷ ಬಲಪಡಿಸುವ ಜೊತೆಗೆ ಚುನಾವಣೆಗೆ ಸ್ಪರ್ಧಿಸಲು ಯುವ ಸಮೂಹಕ್ಕೆ ಹೊಸ ಮುಖಗಳಿಗೆ ಆದ್ಯತೆ ನೀಡಲು ಕಾಂಗ್ರೆಸ್ ಮುಖಂಡರಿಗೆ ಕರೆ ನೀಡಿದರು. ಈ ಹಿನ್ನೆಲೆಯಲ್ಲಿ ಯುವಕರು ಸ್ಪರ್ಧಿಸಲು ಉತ್ಸುಕರಾಗಿದ್ದು, ಅಗತ್ಯ ದಾಖಲೆ ಪಡೆಯಲು ನಾಮುಂದು ತಾಮುಂದು ಎಂದು ತಾಲೂಕು ಕಚೇರಿಗೆ ಭೇಟಿ ನೀಡುತ್ತಿದ್ದಾರೆ.
ಹೆಚ್ಚಿನ ಸಿಬ್ಬಂದಿ ನೇಮಕ: ಕನಕಪುರ ಕೇಂದ್ರ ಕಚೇರಿ ಹೊರತುಪಡಿಸಿ ಹೋಬಳಿ ಕೇಂದ್ರಗಳಲ್ಲಿ ಆದಾಯಮತ್ತು ಜಾತಿ ಪ್ರಮಾಣ ಪತ್ರ ಲಭ್ಯವಿಲ್ಲ. ಹೀಗಾಗಿ ಚುನಾವಣೆಗೆ ಸ್ಪರ್ಧಿಸಲು ಗುರುತಿನ ಚೀಟಿ ಜಾತಿ -ಆದಾಯ ಪ್ರಮಾಣ ಪತ್ರದ ದಾಖಲೆ ಸೇರಿ ಅಗತ್ಯ ದಾಖಲೆಗಳಿಗಾಗಿ ತಾಲೂಕು ಕಚೇರಿಗೆ ಭೇಟಿ ನೀಡುತ್ತಿದ್ದಾರೆ. ಸಕಲ ಸಿದ್ಧತೆ ನಡೆಸಿಕೊಂಡಿರುವ ತಾಲೂಕು ಆಡಳಿತ ಚುನಾವಣೆ ಇಲಾಖೆ ಮತ್ತು ಜಾತಿಮತ್ತು ಆದಾಯ ಪ್ರಮಾಣ ಪತ್ರ ವಿತರಿಸುವ ಕಚೇರಿಗೂ ಹೆಚ್ಚಿನ ಸಿಬ್ಬಂದಿ ನೇಮಕ ಮಾಡಿದೆ.