ನಡಾವಳಿ ಬರೆಯುವವರ ಕೈಚಳಕಕ್ಕೆ ದಂಗಾದ ಸಾರ್ವಜನಿಕರು!
Team Udayavani, Apr 20, 2022, 3:57 PM IST
ಕುದೂರು: ಇಲ್ಲಿನ ಗ್ರಾಪಂ ಸಾಮಾನ್ಯ ಸಭೆಯಲ್ಲಿ ನಡೆದ ಚರ್ಚಿತ ವಿಷಯದ ದಿಕ್ಕನ್ನು ಬದಲಾಯಿಸಿ ತಮಗೆ ಇಷ್ಟ ಬಂದ ಹಾಗೇ ಬರೆದುಕೊಂಡಿದ್ದು ಈಗ ಕುದೂರು ಗ್ರಾಮ ಪಂಚಾಯಿತಿ ಸದಸ್ಯರನ್ನು ದಂಗು ಬಡಿಯುವಂತೆ ಮಾಡಿದೆ.
ಕುದೂರು ಗ್ರಾಮ ಪಂಚಾಯಿತಿಯಲ್ಲಿ ಕಳೆದ ಮಾ. 11ರಂದು ನಡೆದ ಸಾಮಾನ್ಯ ಸಭೆಯ ನಡಾವಳಿ ಗ್ರಾ.ಪಂ.ಸದಸ್ಯರ ಕೈ ಸೇರಲು ಬರೋಬ್ಬರಿ ಒಂದು ತಿಂಗಳು ತೆಗೆದುಕೊಂಡಿದೆ. ಸಭೆಯಲ್ಲಿ ಗ್ರಾಮದ ಎಚ್.ಕೆ.ವಿಜಯಕುಮಾರ್ ಗ್ರಾಪಂ ಸ್ವತ್ತನ್ನು ಕಬಳಿಸಿದ್ದಾರೆ ಎಂದು ಚರ್ಚೆ ನಡೆದು ಈ ವಿಷಯಕ್ಕೆ ಸಂಬಂಧಿಸಿದಂತೆ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಗಮನಕ್ಕೆ ತರಬೇಕೆಂದು ಸಭೆಯಲ್ಲಿ ತೀರ್ಮಾನವಾಗಿತ್ತು.
ನಡಾವಳಿ ಬರೆಯುವಾಗ ಇದರ ಜೊತೆಗೆ ಎಚ್.ಕೆ. ವಿಜಯಕುಮಾರ್ ಅವರಿಂದ ಯಾವ ಶುಲ್ಕವನ್ನು ಪಡೆಯದೇ, ಅವರ ಬಳಿಯಿರುವ ವಿವಾದಿತ ಸ್ವತ್ತಿಗೆ ದಾಖಲೆಗಳನ್ನು ಗ್ರಾಮ ಪಂಚಾಯತ್ಗೆ ನೀಡಬೇಕೆಂದು ಸಭೆಯಲ್ಲಿ ಎಲ್ಲಾ ಸದಸ್ಯರು ಸರ್ವಾನುಮತದಿಂದ ಅನು ಮೋದಿಸಿದರು ಎಂದು ಬರೆದು ನಡಾವಳಿಯಲ್ಲಿ ಅಧ್ಯಕ್ಷರು ಹಾಗೂ ಅಧಿಕಾರಿಗಳ ಸಹಿ ಹಾಕಿರುವುದು ಕಂಡುಬಂದಿದೆ.
ಈ ಅಕ್ರಮದ ಹಿಂದೆ ಯಾರಿದ್ದಾರೆ ಎಂಬ ಚರ್ಚೆ ಈಗ ಕುದೂರು ಗ್ರಾಮ ಪಂಚಾಯಿತಿಯಲ್ಲಿ ಶುರುವಾಗಿದೆ.
ಬಿಲ್ ಕಲೆಕ್ಟರ್ಗಳ ಮೇಲೆ ಒತ್ತಡ: ಕುದೂರು ಗ್ರಾಮ ಪಂಚಾಯಿತಿಯಲ್ಲಿ ಬಿಲ್ ಕಲೆಕ್ಟರ್ ಸಭೆಯ ನಡಾವಳಿಯನ್ನು ಬರೆಯುತ್ತಿದ್ದು, ಅವರಿಗೆ ಸಭೆಯ ದಿನವೇ ಸಭೆಯಲ್ಲಿನ ಚರ್ಚೆಗಳನ್ನು ಹಾಗೂ ತೀರ್ಮಾನಗಳನ್ನು ಬರೆಯಲು ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಅಧಿಕಾರಿಗಳು ಬಿಡುವುದಿಲ್ಲ. ಸಭೆ ನಡೆದ ಮೂರು ನಾಲ್ಕು ಹಾಗೂ ಕೆಲವೊಮ್ಮೆ ವಾರ, ತಿಂಗಳುಗಟ್ಟಲೆ ಸಮಯ ತೆಗೆದುಕೊಂಡು ತಮಗೆ ಬೇಕಾದ ರೀತಿಯಲ್ಲಿ ಸಭೆಯ ತೀರ್ಮಾನಗಳನ್ನು ನಡಾವಳಿಯಲ್ಲಿ ಬಿಲ್ಕಲೆಕ್ಟರ್ಗಳಿಗೆ ಒತ್ತಡವೇರಿ ಬರೆಸುತ್ತಾರೆ ಎಂದು ಗ್ರಾ.ಪಂ.ಸದಸ್ಯರೇ ಆರೋಪ ಮಾಡುತ್ತಿದ್ದಾರೆ.
ತನಿಖೆ ಅಗತ್ಯ: ಕುದೂರು ಗ್ರಾಪಂ ವ್ಯಾಪ್ತಿಯಲ್ಲಿನ ಎಚ್.ಕೆ.ವಿಜಯಕುಮಾರ್ ಎಂಬುವವರು ತಮ್ಮ ಜಮೀನಿನ ಭೂಪರಿವರ್ತನೆ ಮಾಡಿಸಿಕೊಂಡು ಗ್ರಾಮ ಪಂಚಾಯಿತಿಯಲ್ಲಿ ಖಾತೆ ಮಾಡಿಸಿ ಮಾರ್ಚ್ವರೆಗೆ 3,27665 ರೂ. ಕಂದಾಯ ಬಾಕಿ ಉಳಿಸಿಕೊಂಡಿದ್ದಾರೆ. ಅಂತಹದರಲ್ಲಿ ಅವರಿಂದ ಯಾವುದೇ ಶುಲ್ಕವನ್ನು ವಸೂಲಿ ಮಾಡದೇ ದಾಖಲೆಗಳನ್ನು ನೀಡಬೇಕೆಂಬ ವಿಷಯ ಚರ್ಚೆಯೇ ಆಗಿಲ್ಲ. ಅಧ್ಯಕ್ಷರು ಹೇಗೆ ಸಹಿ ಹಾಕಿದ್ದಾರೆ. ಈ ಅಕ್ರಮದಲ್ಲಿ ನಡಾವಳಿ ಬರೆಯುವವರ ಕೈಚಳಕವಿದೆಯೋ ಅಥವಾ ಹೇಳಿ ಕೊಟ್ಟು ಬರೆಸುವವರ ಚಾಣಾಕ್ಷತನ ವಿದೆಯೋ ಎಂಬುದು ತನಿಖೆ ಮಾಡಿದರಷ್ಟೇ ತಿಳಿಯುತ್ತದೆ ಎಂದು ಗ್ರಾಮ ಪಂಚಾಯತ್ ಸದಸ್ಯ ಬಾಲಕೃಷ್ಣ ಹೇಳುತ್ತಾರೆ.
ನಿಯಮ ಹೇಳುವುದೇನು: ಗ್ರಾ.ಪಂ.ನಿಯಮದ ಪ್ರಕಾರ ಸಾಮಾನ್ಯ ಸಭೆಯಲ್ಲಿಯೇ ನಡಾವಳಿ ಯನ್ನು ಬರೆದು ಮುಗಿಸಬೇಕು. ಮೂರು ದಿನಗಳಲ್ಲಿ ಅದರ ನಕಲು ಪ್ರತಿಯನ್ನು ತಾಲೂಕು ಕಾರ್ಯನಿರ್ವಹಣಾಧಿಕಾರಿ ಕಚೇರಿ ತಲುಪಿಸಬೇಕು. ಕ್ಲಿಷ್ಟಕರ ಚರ್ಚೆಗಳು ಸಭೆಯಲ್ಲಿ ನಡೆದಾಗ ಪರ ವಿರೋಧಗಳು ವ್ಯಕ್ತವಾದರೆ ಅಂತಹ ಸಂದರ್ಭಗಳಲ್ಲಿ ಪರ ವಿರೋಧ ವ್ಯಕ್ತಪಡಿಸಿದ ಸದಸ್ಯರ ಸಹಿಯನ್ನು ಪ್ರತ್ಯೇಕವಾಗಿ ಪಡೆದು ನಡಾವಳಿ ಪುಸ್ತಕದಲ್ಲಿ ಚರ್ಚಿತ ವಿಷಯಯನ್ನು ನಮೂದಿಸುವುದು ಕಡ್ಡಾಯ. ಸದಸ್ಯರು ಸಭೆಯ ನಡಾವಳಿಯನ್ನು ಅಂದೇ ಕೇಳಿದರೆ ಕೊಡಬೇಕಿರುವುದು ಗ್ರಾ.ಪಂ. ಅಧ್ಯಕ್ಷರ ಹಾಗೂ ಪಿಡಿಒ ರವರ ಕರ್ತವ್ಯ ಎಂದು ಜಿಲ್ಲೆಯ ಗ್ರಾಪಂ ಅಭಿವೃದ್ಧಿ ಅಧಿಕಾರಿಯೊಬ್ಬರು ಹೇಳುತ್ತಾರೆ.
ಎ.ಕೆ.ವಿಜಯಕುಮಾರ್ ಸ್ವತ್ತಿಗೆ ಸಂಬಂಧಿಸಿದಂತೆ ಅವರಿಂದ ಯಾವ ಶುಲ್ಕವನ್ನು ಪಡೆಯದೇ ಅವರಿಗೆ ಗ್ರಾ.ಪಂ.ನಿಂದ ದಾಖಲೆಗಳನ್ನು ನೀಡಬೇಕೆಂದು ಸಭೆಯಲ್ಲಿ ಚರ್ಚೆಯೇ ಆಗಿಲ್ಲ. ಆದರೆ ನಡಾವಳಿ ಪುಸ್ತಕ ಬರೆಯುವಾಗ ಹೇಗೆ ಬರೆದರು, ಯಾರು ಬರೆದರು ಎಂದು ನನಗೆ ತಿಳಿದಿಲ್ಲ. – ಭಾಗ್ಯಮ್ಮ, ಕುದೂರುಗ್ರಾ.ಪಂ.ಅಧ್ಯಕ್ಷೆ
-ಕೆ.ಎಸ್.ಮಂಜುನಾಥ್ ಕುದೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Belagavi Lok sabha: ಧರ್ಮಯುದ್ಧಕ್ಕಿಂತ ಮೊದಲೇ ದಿಂಗಾಲೇಶ್ವರ ಶ್ರೀ ಶಸ್ತ್ರತ್ಯಾಗ!
Hubballi: ಮೂವರು ನಕಲಿ ಸಿಐಡಿ ಅಧಿಕಾರಿಗಳ ಬಂಧನ… ಮೊಬೈಲ್, ಬೈಕ್ ವಶ
ತಾಳಿಭಾಗ್ಯ ಯೋಜನೆ ತಂದ ‘ಕಾಂಗ್ರೆಸ್’ ಕಿತ್ತುಕೊಳ್ಳುವ ಕೆಲಸ ಎಂದೂ ಮಾಡಲ್ಲ: H.K. Patil
Mumbai Airport: ನ್ಯೂಡಲ್ಸ್ ಪ್ಯಾಕೇಟ್ ನೊಳಗೆ ಕೋಟ್ಯಂತರ ಮೌಲ್ಯದ ವಜ್ರ ಕಳ್ಳಸಾಗಣೆ!
ʼದುರ್ಗಿʼಯಾಗಿ ಚಂದನವನಕ್ಕೆ ಕಾಲಿಟ್ಟ ಕಾಲಿವುಡ್ ಬೆಡಗಿ: ಡಾಲಿ ಜೊತೆ ರೊಮ್ಯಾನ್ಸ್