ನೀರಿನ ಘಟಕ ಸ್ಥಾಪನೆಗೆ ಭೂಮಿಪೂಜೆ
Team Udayavani, Dec 15, 2019, 6:09 PM IST
ರಾಮನಗರ: ಗ್ರಾಮ ಪಂಚಾಯ್ತಿಗಳೇ ಕಡಿಮೆ ವೆಚ್ಚದಲ್ಲಿ ನಿರ್ವಹಿಸಲು ಸಾಧ್ಯ ವಾಗುವಂತಹ ಶುದ್ದ ಕುಡಿಯುವ ನೀರಿನ ಘಟಕಗಳನ್ನು ತಾಲೂಕು ಪಂಚಾಯ್ತಿ ಸ್ಥಾಪಿಸಲು ಮುಂದಾಗಿದೆ.
ತಾಲೂಕಿನ ಬಿಡದಿ ಹೋಬಳಿ ಬನ್ನಿಕುಪ್ಪೆ (ಬಿ) ವ್ಯಾಪ್ತಿಯ ಅಂಕನಹಳ್ಳಿ, ಬೋರೆ ಹಳ್ಳಿ, ಮುತ್ತುರಾಯನ ಗುಡಿ ಪಾಳ್ಯ, ಬೆತ್ತಂಗೆರೆ ಮತ್ತು ರಾಯನ ಪುರ ಗ್ರಾಮಗಳಲ್ಲಿ ಈ ಘಟಕಗಳನ್ನು ತಾಪಂ ಅಧ್ಯಕ್ಷ ಗಾಣಕಲ್ ನಟರಾಜು ತಮ್ಮ ಸದಸ್ಯ ಅನುದಾನದಲ್ಲಿ ಸ್ಥಾಪಿಸಿದ್ದಾರೆ. ತಲಾ ಘಟಕಕ್ಕೆ 3.5 ಯಿಂದ 4 ಲಕ್ಷ ರೂ ವೆಚ್ಚವಾಗಲಿದೆ ಎಂದು ಅವರು ತಿಳಿಸಿದ್ಧಾರೆ.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರೇ ಹೆಚ್ಚು ವಾಸಿಸುವ ಮುತ್ತುರಾಯನಪುರ ಹಾಗೂ ಮುತ್ತು ರಾಯನಗುಡಿಪಾಳ್ಯ ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸುವ ತಮ್ಮ ಉದ್ದೇಶ ಇದೀಗ ಸಾರ್ಥವಾಗಲಿದೆ. ಎಂದು ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ. ಬೇರೆಡೆ ಸ್ಥಾಪಿಸಿರುವ ಶುದ್ಧ ಕುಡಿಯುವ ನೀರಿನ ಘಟಕಗಳಿಗೂ ಇದೀಗ ಸ್ಥಾಪನೆಯಾಗಿರುವ ಘಟಕಗಳ ವ್ಯತ್ಯಾಸಗಳ ಬಗ್ಗೆ ಮಾತನಾಡಿದ ಅವರು ಈ ಘಟಕಗಳು ಸಣ್ಣ ಪ್ರಮಾಣದ್ದಾಗಿದ್ದು, ಸುಮಾರು 1 ಸಾವಿರ ಲೀಟರ್ ನೀರನ್ನು ಶೇಖರಿಸಿಟ್ಟುಕೊಳ್ಳುವ ಸಾಮರ್ಥ್ಯ ಇವೆ. ಗ್ರಾಮಗಳಲ್ಲಿ ಜನಸಂಖ್ಯೆಯನ್ನು ಆಧರಿಸಿ ಈ ಘಟಕಗಳನ್ನು ಸ್ಥಾಪಿಸಿರುವುದಾಗಿ, ಮೇಲಾಗಿ ಈ ಘಟಕಗಳನ್ನು ಗ್ರಾಮ ಪಂಚಾಯ್ತಿಗಳು ತಮಗಿರುವ ಇತಿ ಮಿತಿಯಲ್ಲೇ ನಿರ್ವಹಿಸ ಬಹುದಾಗಿದೆ ಎಂದರು. ತಾಪಂ ಅನುದಾನದಲ್ಲೇ ಈ ಘಟಕ ಗಳನ್ನು ಸ್ಥಾಪಿಸುತ್ತಿರುವುದಾಗಿ , ತಲಾ 25 ಲೀಟರ್ ನೀರಿಗೆ 5 ರೂ ಪಾವತಿ ಸಬೇಕಾಗಿದೆ ಎಂದು ಮಾಹಿತಿ ನೀಡಿದರು. ಸ್ವಚ್ಚವಾಗಿ ಇಟ್ಟುಕೊಂಡು ನಿರ್ವಹಣೆಗೆ ಗ್ರಾಮಸ್ಥರು ಸಹಕರಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.