ಭೀಭತ್ಸ ಘಟನೆ : ಬೆನ್ನಿಗೆ ಇರಿದ ಚೂರಿ ಸಮೇತ ಆಸ್ಪತ್ರೆಗೆ ಬಂದ ಗಟ್ಟಿಗ!
Team Udayavani, Jul 11, 2017, 12:41 PM IST
ರಾಮನಗರ: ಜಿಲ್ಲೆಯ ಚನ್ನಪಟ್ಟಣದ ಸಾತನೂರು ಕ್ರಾಸ್ ಬಳಿ ಮಂಗಳವಾರ ಬೆಳ್ಳಂಬೆಳಗ್ಗೆ ದುಷ್ಕರ್ಮಿಗಳು ವ್ಯಕ್ತಿಯೊಬ್ಬನನ್ನು ಅಟ್ಟಾಡಿಸಿಕೊಂಡು ಬೆನ್ನಿಗೆ ಚೂರಿಯಿಂದ ಇರಿದ ಭೀಭತ್ಸ ಘಟನೆ ನಡೆದಿದೆ.
ಬಿಎಸ್ ಸ್ಟ್ರೀಟ್ ನಿವಾಸಿ ಅಬ್ದುಲ್ ವಾಹಿದ್ ಎಂಮಾತನ ಮೇಲೆ 6 ಮಂದಿ ದುಷ್ಕರ್ಮಿಗಳು ದಾಳಿ ನಡೆಸಿ ಚೂರಿಯಿಂದ ಇರಿದಿದ್ದಾರೆ. ಚೂರಿ ಬೆನ್ನಿನ ಮಧ್ಯಭಾಗದಲ್ಲಿ ಸಿಕ್ಕಿ ಹಾಕಿಕೊಂಡು ತೀವ್ರ ರಕ್ತಸ್ರಾವವಾಗಿದೆ. ದುಷ್ಕರ್ಮಿಗಳಿಂದ ತಪ್ಪಿಸಿಕೊಂಡ ವಾಹಿದ್ ಸ್ಥಳೀಯ ಆಸ್ಪತ್ರೆಗೆ ತೆರಳಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಆಸ್ಪತ್ರೆಗೆ ತೆರಳಿದ ವಾಹಿದ್ ಉಸಿರಾಡಲು ಆಗುತ್ತಿಲ್ಲಾ.. ಚೂರಿ ತೆಗೆಯಿರಿ ಎಂದು ಅಂಗಲಾಚಿದ್ದಾರೆ. ದೃಶ್ಯವನ್ನು ಕಂಡು ಆಸ್ಪತ್ರೆಯ ಸಿಬಂದಿಗಳು ಸೇರಿದಂತೆ ಎಲ್ಲರೂ ಬೆಚ್ಚಿ ಬಿದ್ದಿದ್ದಾರೆ. ಏನೂ ಮಾಡುವುದೆಂದು ತೋಚದೆ ವೈದ್ಯರಿಗೆ ಕರೆ ಮಾಡಿ ತುರ್ತಾಗಿ ಕರೆಸಿಕೊಂಡಿದ್ದಾರೆ. ಸಕಾಲಕ್ಕೆ ಬಂದ ವೈದ್ಯರು ಕೂಡಲೇ ಚಿಕಿತ್ಸೆ ನೀಡಿ ಚೂರಿಯನ್ನು ಹೊರತೆಗೆದಿದ್ದಾರೆ.
ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.