ಮ್ಯಾಂಗೋ ಪಿಕ್ಕಿಂಗ್ ಟೂರಿಸಂ ಯಶಸ್ವಿ
ತೋಟಗಾರಿಕೆ ಇಲಾಖೆ ಆಯೋಜನೆ
Team Udayavani, May 20, 2019, 3:37 PM IST
ರಾಮನಗರ: ತೋಟಗಾರಿಕೆ ಇಲಾಖೆಯಿಂದ ಆಯೋಜಿಸಿದ್ದ ಮ್ಯಾಂಗೋ ಪಿಕ್ಕಿಂಗ್ ಟೂರಿಸಿಂಗೆ ಬೆಳೆಗಾರರು ಹಾಗೂ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ದೊರೆತಿದ್ದು, ಕಾರ್ಯಕ್ರಮ ಯಶಸ್ವಿಯಗಿದೆ. ತಾಲೂಕಿನ ಬಿಳಗುಂಬದ ವಾಸು ಎಂಬುವರ ತೋಟ ಮತ್ತು ಚನ್ನಪಟ್ಟಣದ ಕನ್ನಮಂಗಲದಲ್ಲಿ ಕಮ ಲಮ್ಮ ಅವರ ತೋಟದಲ್ಲಿ ಮ್ಯಾಂಗೊ ಪಿಕ್ಕಿಂಗ್ ಟೂರಿಸಂ ಹಮ್ಮಿಕೊಳ್ಳಲಾಗಿತ್ತು. ಬೆಂಗಳೂರು ನಗರದಿಂದ ತಲಾ ಒಂದು ಕೆಎಸ್ಆರ್ಟಿಸಿ ಬಸ್ಸುಗಳಲ್ಲಿ ಗ್ರಾಹಕರು ತೋಟಗಳಿಗೆ ಭೇಟಿ ಕೊಟ್ಟಿದ್ದರು. ಪುಟ್ಟ ಮಕ್ಕಳು, ಕುಟುಂಬ ಸಮೇತ ಬಂದಿದ್ದ ರಾಜಧಾನಿಯ ನಿವಾಸಿಗಳು ಖುದ್ದುತಮಗಿಷ್ಟವಾದ ಹಣ್ಣುಗಳನ್ನು ಆಯ್ದು ಕೊಂಡರು. ಮಾವಿನ ತೋಟದ ಅನುಭವ ಪಡೆದುಕೊಂಡರು.
ಬೆರಗು ಕಂಗಳಿಂದ ವೀಕ್ಷಿಸಿದ ಪ್ರವಾಸಿಗರು: ನಗರದ ಬಿಳಗುಂಬ ಗ್ರಾಮದಲ್ಲಿ ಪ್ರಗತಿ ಪರ ರೈತ ವಾಸು ಅವರ ತೋಟಕ್ಕೆ ಆಗಮಿಸಿದ್ದ ಪ್ರವಾಸಿಗರು, ಅಲ್ಲಿದ್ದ ನೂರಾರು ಮಾವಿನ ಮರಗಳನ್ನು ಕಂಡು ಬೆರಗಾದರು. ಬದಾಮಿ,ಸೇಂದೂರಾ, ಆಲ್ಫಾನ್ಸ್, ಅಮರಪಲ್ಲಿ ಮುಂತಾಗಿ 18 ವಿವಿಧ ತಳಿಗಳ ಮಾವಿನ ಹಣ್ಣುಗಳು ಕಂಡ ವಿಸ್ಮಿತರಾದರು. ಕಾಯಿ ಮಾಗಿಸುವ ವಿಧಾನದ ಬಗ್ಗೆ ಅರಿವು ಮೂಡಿಸಿಕೊಂಡರು. ಅನೇಕ ಮಕ್ಕಳು ಮಾವಿನ ಮರವನ್ನು ಚಿತ್ರದಲ್ಲಿ ಮಾತ್ರ ನೋಡಿದ್ದಾಗಿ ತಿಳಿಸಿದರು. ರೈತ ವಾಸು ಪ್ರವಾಸಿಗರಿಗೆ ಖುದ್ದು ತಮ್ಮ ತೋಟವನ್ನು ಪರಿಚಯಿಸಿದರು. ಈಥೈಲೀನ್ ಬಳಸಿ ಹಣ್ಣು ಮಾಗಿಸುವ ವಿಧಾನದ ಪ್ರಾತ್ಯಕ್ಷಿಕೆ ತೋರಿಸಿಕೊಟ್ಟರು.
ತೋಟದಲ್ಲೆಲ್ಲ ಅಡ್ಡಾಡಿದ ಪ್ರವಾಸಿಗರಿಗೆ ದಿನ ಕಳೆದಿದ್ದೇ ಗೊತ್ತಾಗಲಿಲ್ಲ. ತಮಗಿಷ್ಟವಾದ ತಳಿಯ ಮಾವಿನ ಹಣ್ಣಿನ ರುಚಿಯನ್ನು ಸವಿದ ಪ್ರವಾಸಿಗರು ಕೇಜಿಗಟ್ಟಲೆಹಣ್ಣನ್ನು ಖರೀದಿಸಿದರು. ನೋಡಿ ಹೋಗಣ ಅಂತ ಬಂದ್ವಿ, ರುಚಿಕರ ಮಾವಿಗೆ ಮಾರು ಹೋಗಿ ಅಂದುಕೊಂಡಿದ್ದಕ್ಕಿಂತ ಹೆಚ್ಚು ಪ್ರಮಾಣದಲ್ಲಿ ಹಣ್ಣು ಖರೀದಿಸಿದ್ದಾಗಿ ಕೆಲವರು ಪ್ರತಿಕ್ರಿಯಿಸಿದರು. ಜಿಪಂ ಸಿಇಒ ಮುಲ್ಲೆ„ ಮುಹಿಲನ್, ತೋಟಗಾರಿಕೆ ಉಪನಿರ್ದೇಶಕ ಗುಣವಂತ್, ಸಹಾಯಕ ತೋಟಗಾರಿಕೆ ಅಧಿಕಾರಿ ಸಿದ್ದಗಂಗಯ್ಯ, ಪ್ರವಾಸಿಗರನ್ನು ಬರ ಮಾಡಿಕೊಂಡರು. ಗ್ರಾಹಕರು, ರೈತರ ನಡುವೆ ನೇರ ಸಂಬಂದ ಬೆಸೆಯುವ ಉದ್ದೇಶ, ರಾಸಾಯನಿಕ ಮುಕ್ತ ತಾಜಾ ಹಣ್ಣುಗಳನ್ನು ಖರೀದಿಸಲು ಅವಕಾಶ ಕಲ್ಪಿಸುವುದು ಮ್ಯಾಂಗೋ ಪಿಕ್ಕಿಂಗ್ ಟೂರಿಸಂ ಉದ್ದೇಶ ಎಂದರು.