ಬಸ್ ನಿಲ್ದಾಣಕ್ಕೆ ಮಾರುಕಟ್ಟೆ ಸ್ಥಳಾಂತರ: ರೈತರ ಆಕ್ರೋಶ
Team Udayavani, Apr 10, 2020, 9:58 AM IST
ರಾಮನಗರ: ಸಿಬಿ ಗೂಡು ಹರಾಜಿಗೆ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ಮಾಡಿದ ವ್ಯವಸ್ಥೆಯನ್ನು ವಿರೋಧಿಸಿ ರೈತರು ಕೆಲಕಾಲ ಪ್ರತಿಭಟನೆ ನಡೆಸಿದ ನಂತರ ರೇಷ್ಮೆ ಗೂಡು ಮಾರುಕಟ್ಟೆಯಲ್ಲೇ ಹಾರಾಜಿಗೆ ಅಧಿಕಾರಿಗಳು ವ್ಯವಸ್ಥೆ ಮಾಡಿದ ಘಟನೆ ನಡೆಯಿತು.
ಬೆಳಗ್ಗೆ ಮಾರುಕಟ್ಟೆಗೆ ಗೂಡು ಹೊತ್ತು ತಂದ ರೈತರನ್ನು ಪ್ರವೇಶ ದ್ವಾರದ ಬಳಿಯೇ ತಡೆ ಹಿಡಿಯಲಾಯಿತು. ಮಿಶ್ರ ತಳಿಯ ಗೂಡು ಹರಾಜನ್ನು ಕೆಎಸ್ ಆರ್ ಟಿಸಿ ಬಸ್ ನಿಲ್ದಾಣಕ್ಕೆ ಸ್ಥಳಾಂತರಿಸಿದ್ದು, ಅಲ್ಲಿಗೆ ತೆರಳುವಂತೆ ಅಧಿಕಾರಿಗಳು ಸೂಚಿಸಿದರು.
ಅರ್ಧದಷ್ಟು ರೈತರು ಬಸ್ ನಿಲ್ದಾಣಕ್ಕೆ ತೆರಳಿದರೆ, ಉಳಿದ ರೈತರು ಇಲ್ಲಿಯೇ ಹರಾಜಿಗೆ ಅವಕಾಶ ನೀಡುವಂತೆ ಪಟ್ಟು ಹಿಡಿದರು. ಕಡೆಗೆ ಹಳೆಯ ಮಾರುಕಟ್ಟೆಯಲ್ಲೇ ಎರಡೂ ತಳಿಯ ಗೂಡು ಹರಾಜಿಗೆ ಅವಕಾಶ ನೀಡಲಾಯಿತು.