ಮೇಕೆದಾಟು: ಷರತ್ತುಬದ್ಧ ಅನುಮತಿಗೆ ಆಕ್ರೋಶ
ಕೇಂದ್ರದ ನಡೆಯನ್ನು ರಾಜ್ಯದ ನಾಯಕರು ವಿರೋಧಿಸಿಲ್ಲ; ಮೇಕೆದಾಟು ಯೋಜನೆ ಜಾರಿಗೆ ಇಚ್ಛಾಶಕ್ತಿ ಕೊರತೆ
Team Udayavani, Aug 7, 2021, 3:24 PM IST
ಸಾಂದರ್ಭಿಕ ಚಿತ್ರ.
ರಾಮನಗರ: ಮೇಕೆದಾಟು ಜಲಾಶಯ ನಿರ್ಮಾಣಕ್ಕೆ ವಿಸ್ತೃತ ಯೋಜನಾ ವರದಿ (ಡಿ.ಪಿ.ಆರ್) ಸಿದ್ಧಪಡಿಸಲು ಕೇಂದ್ರ ಸರ್ಕಾರ ಷರತ್ತು ಬದ್ಧ ಅನುಮತಿ ನೀಡಿತ್ತು ಎಂಬ ವಿಚಾರವನ್ನು ರಾಜ್ಯದ ಯಾವ ರಾಜಕಾರಣಿಯೂ ಜನರ ಮುಂದೆ ಇಡಲಿಲ್ಲವೇಕೆ? ಎಂದು ಜಿಲ್ಲೆಯ ಜನತೆ ಪ್ರಶ್ನಿಸಿದ್ದಾರೆ.
ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ, ಬಿ.ಎಸ್.ಯಡಿಯೂರಪ್ಪ, ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮುಂತಾದ
ಘಟಾನುಘಟಿ ನಾಯಕರೇ ಈ ವಿಚಾರವನ್ನು ಮುಚ್ಚಿಟ್ಟಿದ್ದು ಏಕೆ? ಮೇಕೆದಾಟು ಜಲಾಶಯ ನಿರ್ಮಾಣಕ್ಕೆ ತಮಿಳುನಾಡು, ಕೇರಳ, ಪಾಂಡಿಚರಿ ರಾಜ್ಯಗಳ ಅನುಮತಿಯೂ ಬೇಕು ಎಂಬ ಷರತ್ತು ವಿಧಿಸಿದ್ದ ಕೇಂದ್ರದ ನಡೆಯನ್ನು ರಾಜ್ಯದ ನಾಯಕರು ವಿರೋಧಿಸಲಿಲ್ಲ, ಖಂಡಿಸಲಿಲ್ಲ ಎಂದು ಜಿಲ್ಲೆಯ ಜನತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೇಕೆದಾಟು ಬ್ಯಾಲೆನ್ಸಿಂಗ್ ರಿಸರ್ವಾಯರ್ ನಿರ್ಮಾಣಕ್ಕೆ ಸುಪ್ರೀಂ ಕೋರ್ಟ್ ಮತ್ತು ಕಾವೇರಿ ನ್ಯಾಯ ಮಂಡಳಿಯ ಯಾವ ತೀರ್ಪುಗಳನ್ನು
ಉಲ್ಲಂಘಿಸುವುದಿಲ್ಲ ಎಂಬ ಪರಿಜ್ಞಾನ ಕೇಂದ್ರ ಅಧಿಕಾರಿಗಳು ಮತ್ತು ಆಡಳಿತಗಾರರಿಗಿದೆ. ಆದರೂ, ಇತರ ರಾಜ್ಯಗಳ ಅನುಮತಿ ಬೇಕು ಎಂದು ಕೇಳಿರುವುದು ರಾಜ್ಯದ ಅವಶ್ಯಕತೆಯನ್ನು ಕೇಂದ್ರ ಗಂಭೀರವಾಗಿ ಪರಿಗಣಿಸಿಲ್ಲ, ಬೇಕಂತಲೇ ರಾಜ್ಯಕ್ಕೆ ತೊಂದರೆಕೊಡುತ್ತಿದೆ ಎಂದು ಜನರು ಹರಿಹಾಯ್ದಿದ್ದಾರೆ.
ಜೆಡಿಎಸ್,ಕಾಂಗ್ರೆಸ್ ಸುಮ್ಮನಿರುವುದೇಕೆ?: ರಾಜ್ಯ ಸರ್ಕಾರದ ಮಹತ್ವಾಂಕ್ಷಿ ಯೋಜನೆಗೆ ಕೇಂದ್ರ ಸರ್ಕಾರವೇ ಷರತ್ತುಗಳನ್ನು ಒಡ್ಡಿರುವ ವಿಚಾರ ಗೊತ್ತಿದ್ದರೂ, ರಾಜ್ಯದ ನಾಯಕರು ಪ್ರತಿಕ್ರಿಯಿಸದೆ ಇರುವ ಹಿಂದಿನ ಮರ್ಮವೇನು? ಕೇಂದ್ರದಲ್ಲೂ ಬಿಜೆಪಿ ಅಧಿಕಾರಿದಲ್ಲಿರುವುದರಿಂದ ರಾಜ್ಯ ಬಿಜೆಪಿ ಸುಮ್ಮನಿದೆ. ಆದರೆ, ಜೆಡಿಎಸ್ ಮತ್ತು ಕಾಂಗ್ರೆಸ್ ಮುಖ್ಯಮಂತ್ರಿಗಳು ಮತ್ತು ಸಚಿವರು ಸುಮ್ಮನಾಗಿದ್ದೇಕೆ? ಎಂದು ಪ್ರಶ್ನಿಸಿರುವ ಜಿಲ್ಲೆಯ ಜನತೆ ಬಿಜೆಪಿ ಸೇರಿದಂತೆ ಯಾವ ಪಕ್ಷಕ್ಕೂ ಮೇಕೆದಾಟು ಯೋಜನೆಯ ಇಚ್ಛಾಶಕ್ತಿಯ ಕೊರತೆ ಇದೆ ಎಂದು ಬೇಸರ ವ್ಯಕ್ತ ಪಡಿಸಿದ್ದಾರೆ.
ಇದನ್ನೂ ಓದಿ:ಗೂಡ್ಸ್ ವಾಹನ ಮತ್ತು ಬೈಕ್ ನಡುವೆ ಅಪಘಾತ : ಬೈಕ್ ಸವಾರನಿಗೆ ಗಾಯ
ಜಲ ಸಂಪನ್ಮೂಲ ಸಚಿವರಾಗಿದ್ದ ಡಿ.ಕೆ.ಶಿವಕುಮಾರ್ ಅವರ ಅವಧಿಯಲ್ಲಿ ಮೇಕೆದಾಟು ಜಲಾಶಯ ನಿರ್ಮಾಣದ ಸ್ಥಳವನ್ನು ಗುರುತಿಸಿದ್ದರು. ತದ ನಂತರ ಜಾರಕಹೋಳಿಯವರು ಮೇಕೆದಾಟಿಗೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿ,ಕೇಂದ್ರ ಸರ್ಕಾರ ಅಧಿಕಾರಿಗಳು ಸಚಿವರ ಬಳಿ ಚರ್ಚಿಸಲು ತೆರಳುತ್ತಿರುವುದಾಗಿ ಹೇಳಿದರು. ಯಾವೊಂದು ಸಂದರ್ಭದಲ್ಲೂ ಯಾವೊಬ್ಬ ಸಚಿವರು ಡಿಪಿಆರ್ ಸಿದ್ಧಪಡಿಸಿಲು ಷರತ್ತು ಬದ್ಧ ಅನುಮತಿ ಸಿಕ್ಕಿದೆ ಎಂದು ಹೇಳಲಿಲ್ಲ. ಲಕ್ಷಾಂತರ ರೂ. ವೆಚ್ಚಮಾಡಿ ಡಿಪಿಆರ್ ಸಿದ್ಧಪಡಿಸಿ ಕಳುಹಿಸಲಾಗಿದೆ. ಕೇಂದ್ರ ಸರ್ಕಾರ ತಮಿಳುನಾಡು ಮತ್ತು ಇತರ ರಾಜ್ಯಗಳು ಒಪ್ಪಿಗೆ ನೀಡಲಿಲ್ಲ ಎಂಬ ಕಾರಣಕ್ಕೆ ಡಿ.ಪಿ.ಆರ್ ಕಡೆ ಗಮನ ಹರಿಸುತ್ತಿಲ್ಲ ಎಂದು ಜಿಲ್ಲೆಯ ಜನರು ಅಸಮಾಧಾನ ಹೊರಹಾಕಿದ್ದಾರೆ. ರಾಜ್ಯದ ಎಲ್ಲಾ ರಾಜಕಾರಣಿಗಳು ತಮ್ಮ ಪಕ್ಷ ಬೇಧವನ್ನು ಬದಿಗೊತ್ತಿ ತಕ್ಷಣ ಕೇಂದ್ರದ ಕುತಂತ್ರವನ್ನುಖಂಡಿಸಬೇಕು.
ತಮಿಳುನಾಡಿಗೆ ಸೇರಬೇಕಾದ್ದ ನೀರನ್ನು ಹೊರತುಪಡಿಸಿ,ಸಮುದ್ರದ ಪಾಲಾಗುತ್ತಿರುವ ನೀರನ್ನು ಮೇಕೆದಾಟಿನಲ್ಲಿ ಹಿಡಿದಿಟ್ಟುಕೊಂಡು ಬೆಂಗ
ಳೂರು ನಗರ, ರಾಮನಗರ,ಕೋಲಾರ ಜಿಲ್ಲೆಗಳ ಜನರ ನೀರಿನ ಸಮಸ್ಯೆ ನೀಗಿಸಲು ಉದ್ದೇಶಿಸಿರುವ ಯೋಜನೆ.ಇಲ್ಲಿ ತಮಿಳುನಾಡಿಗೆ ತೊಂದರೆಕೊಡುವ ಯಾವ ಉದ್ದೇಶವೂ ಯೋಜನೆಯಲ್ಲಿಲ್ಲ. ಆದರೂ,ಕೇಂದ್ರ ಸರ್ಕಾರಕಾವೇರಿ ಕೊಳ್ಳದ ಎಲ್ಲಾ ರಾಜ್ಯಗಳ ಅನುಮತಿ
ಬೇಕು ಎಂದು ಹೇಳಿರುವುದು ಹಾಸ್ಯಾಸ್ಪದ.
-ಸಂಪತ್, ಮೇಕೆದಾಟು ಹೋರಾಟ ಸಮಿತಿ,
ರಾಮನಗರ ಜಿಲ್ಲೆ