ಶಾಸಕರೇ, ಈ ಶಾಲೆ ಅವಸ್ಥೆ ಕಣ್ತೆರೆದು ನೋಡಿ
ಕರ್ನಾಟಕ ಪಬ್ಲಿಕ್ ಶಾಲೆ ಆವರಣದಲ್ಲಿ ಮಳೆ ಬಂದರೆ ಅವಾಂತರ
Team Udayavani, Jun 10, 2019, 12:12 PM IST
ಕುದೂರಿನ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿರುವ ಸೂಕ್ತ ನಿರ್ವಹಣೆ ಕಾಣದ ಗಬ್ಬು ನಾರುತ್ತಿರುವ ಚರಂಡಿ.
ಕುದೂರು: ಶೈಕ್ಷಣಿಕ ವರ್ಷಾಂಭದಲ್ಲೇ ಗ್ರಾಪಂ ಮತ್ತು ಶಿಕ್ಷಣ ಇಲಾಖೆ ಅಸಡ್ಡೆಯಿಂದ ಶಾಲಾ , ಕಾಲೇಜು ವಿದ್ಯಾರ್ಥಿಗಳಿಗೆ ಅನಾರೋಗ್ಯದ ಭೀತಿ ಎದುರಾಗಿದೆ.
ಎಲ್ಲಾ ಶಾಲಾ ಕಾಲೇಜುಗಳಲ್ಲಿ ಹಸಿರು ತಳಿರು ತೋರಣಗಳನ್ನು ಕಟ್ಟಿ ಮಕ್ಕಳಿಗೆ ಸಿಹಿ ಊಟ ಬಡಿಸಿ ಸ್ವಾಗತಿಸಿದರೆ ಕುದೂರಿನ ಕರ್ನಾಟಕ ಪಬ್ಲಿಕ್ ಶಾಲೆ ಇದಕ್ಕೆ ಅಪವಾದದಂತಿದೆ. ಶಾಲೆಯ ಅಂಗಳ ಮಳೆ ಬಂತೆಂದರೆ ಕೆರೆಯತಾಗುತ್ತದೆ. ಇದರಲ್ಲಿ ಜಡ ಸಸ್ಯಗಳು ಬೆಳೆದು ಕಸಕಡ್ಡಿ ಕೊಳೆತು ದುರ್ನಾತ ಬೀರುತ್ತದೆ.
ಸಮಸ್ಯೆ: ಕುದೂರಿನ ಕರ್ನಾಟಕ ಪಬ್ಲಿಕ್ ಶಾಲೆ ಮತ್ತು ಪದವಿ ಪೂರ್ವ ಕಾಲೇಜು ಮಳೆ ಬಂತೆಂದರೆ ಕೆಸರುಗದ್ದೆಯಂತಾಗುತ್ತದೆ. ಇದರಲ್ಲಿ ಬೇಡದ ಗಿಡಗಂಟಿಗಳು ಬೆಳೆದು ಕೊಳೆತು ದುರ್ನಾತ ಬೀರುತ್ತಿವೆ.
ಕೊಳೆತ ನೀರಿನಲ್ಲಿ ಸೊಳ್ಳೆಗಳು ಉತ್ಪತ್ತಿಯಾಗುವ ಜೊತೆಗೆ ವಿಷಪೂರಿತ ಜಂತುಹುಳುಗಳು ಕಾಣಿಸಿಕೊಳ್ಳುತ್ತಿವೆ. ಇಷ್ಟೆಲ್ಲಾ ಅವಾಂತರವಿದ್ದರೂ ಸೂಕ್ತ ಚರಂಡಿ ನಿರ್ಮಿಸಿ ಶಾಲಾ ಆವರಣ ಸ್ವಚ್ಛಗೊಳಿಸಬೇಕು ಎನ್ನುವ ಮನಸ್ಥಿತಿ ಗ್ರಾಪಂಗೆ ಇಲ್ಲವಾಗಿದೆ. ಇದರಿಂದಾಗಿ ಶಾಲಾ ಮಕ್ಕಳು ಅನಾರೋಗ್ಯದ ಭೀತಿ ಎದುರಿಸುವಂತಾಗಿದೆ.
ಚರಂಡಿ ಸಮಸ್ಯೆ: ಶಾಲೆ ಆವರಣದಲ್ಲಿ ಚರಂಡಿ ಅವ್ಯವಸ್ಥೆಯಾಗಿದೆ. ಇದನ್ನು ಸರಿಪಡಿಸಬೇಕಾದದ್ದು ಗ್ರಾಪಂ ಕರ್ತವ್ಯ. ಆದರೆ ಗ್ರಾಪಂ ಅಧಿಕಾರಿಗಳಾಗಲಿ, ಅಧ್ಯಕ್ಷರಾಗಲಿ ಇತ್ತ ಗಮನ ಹರಿಸುತ್ತಿಲ್ಲ. ಉಪನ್ಯಾಸಕರು ತಮ್ಮ ಕೈಲಾಗುವ ಸಮಸ್ಯೆಗಳನ್ನು ಬಗೆ ಹರಿಸಿಕೊಳ್ಳಬಹುದು. ಆದರೆ. ಮೈದಾನ ಸಮತಟ್ಟು, ಚರಂಡಿ ಸಮಸ್ಯೆ ಮುಂತಾದವುಗಳನ್ನು ಉನ್ನತ ಮಟ್ಟದಲ್ಲಿ ಕೈಗೊಳ್ಳುವ ಕಾರ್ಯ. ಈ ಬಗ್ಗೆ ಹಲವು ಬಾರಿ ಗ್ರಾಪಂಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಕೂಡಲೇ ಗ್ರಾಪಂ ಅಧಿಕಾರಿಗಳು ಎಚ್ಚೆತ್ತು ಸಮಸ್ಯೆ ಬಗೆಹರಿಸಬೇಕು ಎಂದು ಕಾಲೇಜು ಸಿಬ್ಬಂದಿ ಮನವಿ ಮಾಡಿದ್ದಾರೆ,
ಕ್ರೀಡೆಗೂ ಹಿನ್ನಡೆ: ಗ್ರಾಮೀಣ ಭಾಗದಲ್ಲಿ ಹೆಚ್ಚಿನ ಕ್ರೀಡಾಪಟುಗಳಿದ್ದು ಅವರಿಗೆ ಸೂಕ್ತ ತರಬೇತಿ ಅವಶ್ಯಕತೆಯಿದೆ. ಸರಿಯಾಗಿ ನಿರ್ವಹಣೆ ಕಾಣದ ಮೈದಾನದಿಂದ ಕ್ರೀಡಾ ಚಟುವಟಿಕೆಗೆ ಹಿನ್ನಡೆಯಾಗಿದೆ. ಗ್ರಾಮೀಣ ಪ್ರತಿಭೆಗಳಿಗೆ ಸರಿಯಾದ ತರಬೇತಿ ಪಡೆಯಲು ಸಾಧ್ಯವಾಗದೆ ಕಮರಿ ಹೋಗುತ್ತಿದ್ದಾರೆ. ಮಳೆ ಬಂದರೆ ನೀರು ತುಂಬಿ ಕೆರೆಯಂತೆ ಮಾರ್ಪಾಡಾಗುತ್ತದೆ. ಇದರಿಂದ ಮೈದಾನದಲ್ಲಿ ಕ್ರೀಡಾಭ್ಯಾಸ ಹೇಗೆ ಸಾಧ್ಯ ಎಂಬುದು ಕ್ರೀಡಾಭಿಮಾನಿಗಳ ಪ್ರಶ್ನೆಯಾಗಿದೆ.