ರಾಮನಗರದಲ್ಲೇ ನಡೆಯಲಿದೆ ನಿಖಿಲ್- ರೇವತಿ ಕಲ್ಯಾಣ
Team Udayavani, Apr 15, 2020, 5:52 PM IST
ರಾಮನಗರ: ನಿಖಿಲ್ ಕುಮಾರಸ್ವಾಮಿ ಮತ್ತು ರೇವತಿ ಅವರ ಮದುವೆ ಇದೇ ಏಪ್ರಿಲ್ 17ರಂದು ರಾಮನಗರ ತಾಲೂಕು ಬಿಡದಿ ಹೋಬಳಿ ಕೇತಿಗಾನಹಳ್ಳಿಯಲ್ಲಿ ತಮ್ಮ ತೋಟದಲ್ಲಿ ನೆರೆವೇರಿಸಲು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಕುಟುಂಬ ನಿರ್ಧರಿಸಿದೆ.
ಇದ್ದಕ್ಕೆ ಬೇಕಾದ ಏರ್ಪಾಟುಗಳು ಸಹ ಆರಂಭವಾಗಿದೆ. ಬೆಂಗಳೂರನ್ನು ರೆಡ್ ಜೋನ್ ಎಂದು ಘೋಷಿಸಿರುವ ಹಿನ್ನೆಲೆಯಲ್ಲಿ ಕೇತಿಗಾನಹಳ್ಳಿಯಲ್ಲಿ ಸರಳವಾಗಿ ಮದುವೆ ಮಾಡುವುದಾಗಿ ಅವರು ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದ್ದಾರೆ.
ರಾಮನಗರ ಜಿಲ್ಲೆಯಲ್ಲಿ ಕೋವಿಡ್ 19 ಪ್ರಕರಣ ಪತ್ತೆಯಾಗಿಲ್ಲ ಎಂಬುದು ಅದೃಷ್ಟ. ಮದುವೆಗೆ ಸರ್ಕಾರದಿಂದ ಅನುಮತಿ ಪಡೆಯಲಾಗಿದೆ. ವಧು-ವರರ ಕುಟುಂಬ ಸದಸ್ಯರು ಮಾತ್ರ ಮದುವೆಯಲ್ಲಿ ಭಾಗಿಯಾಗಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಈ ಮೊದಲು ನಿಖಿಲ್ ರೇವತಿ ಮದುವೆಯನ್ನು ಇಲ್ಲಿನ ಜಾನಪದ ಲೋಕದ ಬಳಿಯ ವಿಶಾಲವಾದ ಸ್ಥಳದಲ್ಲಿ ಅದ್ದೂರಿಯಾಗಿ ಮಾಡಲು ನಿರ್ಧರಿಸಿ ಮದುವೆ ಮಂಟಪ ಸ್ಥಾಪನೆಗೂ ಎಚ್.ಡಿ.ಕೆ ಕುಟುಂಬ ಮುಂದಾಗಿತ್ತು. ಆದರೆ ಕೋವಿಡ್ 19 ಕಾರಣ ಲಾಕ್ ಡೌನ್ ಹಿನ್ನೆಲೆಯಲ್ಲಿ ರದ್ದು ಮಾಡಿ ಬೆಂಗಳೂರಿನ ತಮ್ಮ ಮನೆಯಲ್ಲೇ ಮದುವೆ ನೆರೆವೇರಿಸಲು ನಿಶ್ಚಯಿಸಿದ್ದರು. ಇದೀಗ ಮತ್ತೆ ರಾಮನಗರದಲ್ಲೇ ಮದುವೆ ನಡೆಯುತ್ತಿದೆ.