ರೈತರಿಗೆ ಎಣ್ಣೆ ಕಾಳು ಬೇಸಾಯ ತರಬೇತಿ
Team Udayavani, Aug 2, 2020, 9:17 AM IST
ಮಾಗಡಿ: ತಾಲೂಕಿನ ಚಂದೂರಾಯನಹಳ್ಳಿ ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ಎಣ್ಣೆಕಾಳು ಬೆಳೆಗಳಸುಧಾರಿತ ಬೇಸಾಯ ಕ್ರಮಗಳ ಬಗ್ಗೆ ಜೂಮ್ ಆ್ಯಪ್ ಬಳಸಿ ಅಂತರ್ಜಾಲ ತರಬೇತಿ ನೀಡಲಾಯಿತು.
ನೆಲಗಡಲೆ ಮತ್ತು ಎಳ್ಳು ಬೆಳೆಯಲ್ಲಿ ಬರುವ ಸುಧಾರಿತ ತಳಿಗಳು ಮತ್ತು ಬಿತ್ತನೆ ಬೀಜದ ಆಯ್ಕೆ, ಬೀಜೋಪಚಾರ, ಸಾಲು ಬಿತ್ತನೆ, ಸಮಗ್ರ ಪೋಷಕಾಂಶ ನಿರ್ವಹಣೆ ಬಗ್ಗೆ ಕೇಂದ್ರದ ವಿಜ್ಞಾನಿ ಡಾ. ಎಂ.ಎಸ್.ದಿನೇಶ್ ಮಾಹಿತಿ ನೀಡಿದರು. ರಾಮನಗರ ಜಿಲ್ಲೆಯಲ್ಲಿ ಎಳ್ಳು ಪ್ರಮುಖ ಪೂರ್ವ ಮುಂಗಾರು ಬೆಳೆಯಾಗಿದ್ದು, ಈ ವರ್ಷ ಉತ್ತಮ ಬೆಳೆ ಬಂದಿದೆ. ಕೃವಿವಿ ಶಿಫಾರಸ್ಸು ಮಾಡಿದ ಸುಧಾರಿತ ಬೇಸಾಯ ಅನುಸರಿಸುವುದರಿಂದ ಅಧಿಕ ಇಳುವರಿ ಪಡೆದು ಉತ್ತಮ ಆದಾಯ ಗಳಿಸಬಹುದು ಎಂದರು.
ಹಾಗೆಯೇ ನೆಲಗಡಲೆ ಬೆಳೆಯಲ್ಲಿ ಸುಧಾರಿತ ಬೇಸಾಯ ಕ್ರಮ ಅನುಸರಿಸಿ ಸಮಗ್ರ ಪೋಷ ಕಾಂಶ ನಿರ್ವಹಣೆ ಮಾಡಿ ಎಕರೆಗೆ 200 ಕೆ.ಜಿ. ಜಿಪ್ಸಮ್ ಬಳಸುವುದರಿಂದ ಇಳುವರಿ, ಗುಣ ಮಟ್ಟ ಹೆಚ್ಚಿಸಬಹುದೆಂದರು.ನೆಲಗಡಲೆ ಬೆಳೆ ಯಲ್ಲಿ ಕಳೆ ಸಮಸ್ಯೆ ಹೆಚ್ಚಾಗಿದ್ದು ಕಳೆನಾಶಕಗಳ ಬಳಕೆ, 2 ಬಾರಿ ಅಂತರ ಬೇಸಾಯ ಮಾಡಿ, ಬಿತ್ತನೆ ಮಾಡಿದ 45 ದಿನದೊಳಗೆ ಕಳೆ ನಿರ್ವಹಣೆ ಮಾಡಬೇಕು ಎಂದರು. ಈ ವೇಳೆ 15ಕ್ಕೂ ಹೆಚ್ಚು ಆಸಕ್ತ ರೈತರು ಭಾಗವಹಿಸಿದ್ದರು.