ಸುವರ್ಣಮುಖೀ ನದಿಗೆ ವಿಷ
Team Udayavani, Oct 21, 2021, 2:58 PM IST
ಕನಕಪುರ: ಅಂಗಡಿ ಮಾಲೀಕರ ಮೊಂಡುತನ ಸ್ಥಳೀಯ ಆಡಳಿತದ ಬೇಜವಾಬ್ದಾರಿಯಿಂದ ಸುವರ್ಣಮುಖೀ ನದಿ ವಿಷದ ಕೂಪವಾಗಿ ಬದಲಾಗುತ್ತಿದೆ.
ಅಧಿಕಾರಿಗಳ ಜಾಣ ಕುರುಡು: ತಾಲೂ ಕಿನ ಮರಳವಾಡಿ ಗ್ರಾಮದ ಹೆಬ್ಟಾಗಿಲಿ ನಲ್ಲಿ ಹಾದು ಹೋಗುವ ಸುವರ್ಣ ಮುಖೀ ನದಿಯ ದುಸ್ಥಿತಿ ಇದು. ಸ್ಥಳೀಯ ಬಾರ್, ಹೋಟೆಲ್, ಕೋಳಿ ಅಂಗಡಿ, ದಿನಸಿ ಅಂಗಡಿ ಮಾಲೀಕರು ತ್ಯಾಜ್ಯ ಸುರಿದು ಸುವರ್ಣಮುಖೀ ನದಿಗೆ ವಿಷವುಣಿಸುತ್ತಿದ್ದರೂ ಅಧಿಕಾರಿಗಳು ಮಾತ್ರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕತ್ತಲಲ್ಲಿ ಸೇರುತ್ತಿದೆ ನದಿಗೆ ವಿಷ: ಬನ್ನೇರುಘಟ್ಟದಿಂದ ಹರಿದು ಬರುವ ಸುವರ್ಣಮುಖೀ ನದಿ ಮರಳವಾಡಿ ಗ್ರಾಮದ ಹೆಬ್ಟಾಗಿನಲ್ಲೇ ಹಾದು ಹೋಗಿದೆ. ಮರಳವಾಡಿ ಗ್ರಾಮದ ಬಳಿ ನದಿಗೆ ಅಡ್ಡಲಾಗಿ ನಿರ್ಮಾಣ ಮಾಡಿ ರುವ ಸೇತುವೆಗೆ ಹೊಂದಿಕೊಂಡಂತೆ ಶಾಲೆ ಹಾಗೂ ಬಸ್ ನಿಲ್ದಾಣವಿದೆ. ಈ ಸೇತುವೆ ಪಕ್ಕದಲ್ಲೇ ಕೋಳಿ ಅಂಗಡಿ ಮತ್ತು ಬಾರ್ ಇದೆ. ಕತ್ತಲಾಗುತ್ತಿದ್ದಂತೆ ತ್ಯಾಜ್ಯವನ್ನು ಕುದ್ದು ಮುಚ್ಚಿ ತಂದು ಸುರಿಯುತ್ತಿದ್ದಾರೆ.
ಮಾವತ್ತೂರು ಕೆರೆ ಮಲಿನ ಆತಂಕ: ಕೊಳೆತ ತ್ಯಾಜ್ಯ ವಿಷವಾಗಿ ನದಿ ನೀರಿನಲ್ಲಿ ಬೆರೆತು ಜಲ ಮೂಲ ಸೇರುತ್ತಿದೆ. ಪಾತಾಳಕ್ಕೆ ಕುಸಿದಿರುವ ಅಂತರ್ಜಲ ವೃದ್ಧಿಗೊಳಿಸಲು ಸುವರ್ಣಮುಖೀ ನದಿಗೆ ಅಡ್ಡಲಾಗಿ ನರೇಗಾ ಯೋಜನೆ ಯಡಿ ಅಲ್ಲಲ್ಲಿ ನಿರ್ಮಾಣ ಮಾಡಿರುವ ಚೆಕ್ ಡ್ಯಾಂಗಳಲ್ಲಿ ಸಂಗ್ರಹವಾಗುವ ವಿಷ ಯುಕ್ತ ನೀರು ಅಂತರ್ಜಲ ಸೇರುತ್ತಿದೆ. ಸುವರ್ಣಮುಖೀ ನದಿ ನೀರು ಬಂಡೆ ಗ್ರಾಮದ ಬಳಿ ಇರುವ ಮಾವತ್ತೂರು ಕೆರೆಗೆ ಸೇರುತ್ತಿದ್ದು ಕೆರೆಯ ನೀರು ಮಲಿನವಾಗಲಿದೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದರು.