ನೀಲಸಂದ್ರ ಕೆರೆ ಏರಿ ದುರಸ್ತಿಗೆ ಸೂಕ್ತ ಕ್ರಮವಹಿಸಿ
Team Udayavani, May 23, 2022, 4:02 PM IST
ಚನ್ನಪಟ್ಟಣ: ತಾಲೂಕಿನ ನೀಲಸಂದ್ರ ಕೆರೆಯ ಅಪಾಯದ ಅಂಚಿನಲ್ಲಿದ್ದು, ದುರಸ್ತಿಗೊಳಿಸುವಂತೆ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಚನ್ನಪಟ್ಟಣ ತಾಲೂಕು ಪಂಚಾಯ್ತಿ ಇಒ ಚಂದ್ರು ಮತ್ತು ತಹಶೀಲ್ದಾರ್ ಹರ್ಷವರ್ಧನ್ ಸೂಚನೆ ನೀಡಿದರು.
ನಗರದಲ್ಲಿ ತಾಲೂಕು ಪಂಚಾಯ್ತಿಯಲ್ಲಿ ತಾಪಂ ಆಡಳಿತಾಧಿಕಾರಿ ಪಿ.ರಾಧ ಅಧ್ಯಕ್ಷತೆಯಲ್ಲಿ ನಡೆದ ತಾಲೂಕು ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಉಭಯ ಅಧಿಕಾರಿಗಳು ಮಾತನಾಡಿದರು.
ನೀಲಸಂದ್ರ ಗ್ರಾಮದಲ್ಲಿರುವ ಕೆರೆ ಏರಿ ಹಾಗೂ ಕೋಡಿ ಶಿಥಿಲಗೊಂಡಿದೆ. ಜೋರು ಮಳೆ ಮುಂದುವರೆದರೆ ಇನ್ನಷ್ಟು ಹಾನಿಯಾಗುವ ಸಾಧ್ಯತೆ ಇದೆ, ಹೀಗಾಗಿ ಮುಂಜಾಗ್ರತೆಯಾಗಿ ಅಗತ್ಯ ಕ್ರಮ ಕೈಗೊಳ್ಳಿ ಎಂದು ಸೂಚಿಸಿದರು.
ತಾಲೂಕಿನ ಹೊಂಗನೂರು ಗ್ರಾಮದ ಕೆರೆಯಲ್ಲಿ ಮೀನು ಸಾಕಾಣಿಕೆಗೆ ಗುತ್ತಿಗೆ ಪಡೆದಿರುವ ವ್ಯಕ್ತಿ ಸಂಪೂರ್ಣವಾಗಿ ಕೆರೆಯನ್ನು ಸ್ವಾಧೀನಕ್ಕೆ ಪಡೆದಂತೆ ವರ್ತಿಸುತ್ತಿದ್ದಾರೆ.ಕೆರೆಯ ನೀರನ್ನು ತೂಬಿನ ಮೂಲಕ ಹೊರಗೆ ಬಿಡಲು ಬಿಡುತ್ತಿಲ್ಲ. ಇನ್ನು ಕೋಳಿ ತ್ಯಾಜ್ಯಸೇರಿದಂತೆ ಕಲುಷಿತ ವಸ್ತುಗಳನ್ನು ಮೀನಿಗೆ ಆಹಾರ ಎಂದು ಹಾಕಿ ಕೆರೆಯನ್ನು ಮಲಿನ ಗೊಳಿಸುತ್ತಿದ್ದಾರೆ. ಕೆರೆಯಲ್ಲಿ ಮೀನುಸಾಕಾಣಿಕೆ ಮಾಡಲು ಗುತ್ತಿಗೆ ಪಡೆದಿರುವ ವ್ಯಕ್ತಿ ಕೆರೆಯೇ ತನ್ನ ಸ್ವಂತದ್ದು ಎನ್ನುವಂತೆ ವರ್ತಿಸುತ್ತಿದ್ದಾನೆ ಎಂಬ ಆರೋಪಗಳಿವೆ. ಪರಿಶೀಲನೆ ನಡೆಸಿ, ಆರೋಪ ಸತ್ಯವಾಗಿದ್ದರೆ ಇವರಿಗೆ ಕಡಿವಾಣ ಹಾಕಿ ಎಂದು ತಹಶೀಲ್ದಾರ್ ಹರ್ಷವರ್ಧನ್ ಮೀನುಗಾರಿಕೆ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಬೆಳೆಹಾನಿ ಬಗ್ಗೆ ಜಂಟಿ ಸಮೀಕ್ಷೆ: ಮಳೆಯಿಂದ ಬೆಳೆಹಾನಿಯ ಆಗಿರುವ ಬಗ್ಗೆ ಸಭೆಯಲ್ಲಿ ವಿಷಯ ಪ್ರಸ್ತಾಪವಾಯಿತು. ಇದಕ್ಕೆ ಪ್ರತಿಕ್ರಿಯಿಸಿದ ಕೃಷಿ ಇಲಾಖೆ ಸಹಾಯ ನಿರ್ದೇಶಕರು ಮಾತನಾಡಿ, ಅವಧಿ ಪೂರ್ವ ಮುಂಗಾರು ಮಳೆ ವಾಡಿಕೆ ಮಳೆಗಿಂತ ಅಧಿಕವಾಗಿ ಸುರಿದಿದೆ. ಹೀಗಾಗಿ ತಾಲೂಕಿನ ಹಲವೆಡೆ ಬೆಳೆಹಾನಿ ಸಂಭವಿಸಿದೆ. ಮಳೆಯಿಂದ ಸಂಭವಿಸಿರುವ ಬೆಳೆಹಾನಿಯನ್ನು ಅಂದಾಜು ಮಾಡಲು ಕಂದಾಯ ಇಲಾಖೆ ಹಾಗೂ ಕೃಷಿಇಲಾಖೆ ಜೊತೆಗೂಡಿ ಜಂಟಿ ಸಮೀಕ್ಷೆ ನಡೆಸುವುದಾಗಿ ತಿಳಿಸಿದರು.
ನ್ಯಾನೋ ಯೂರಿಯಾ ಬಳಕೆ ಬಗ್ಗೆ ರೈತರಿಗೆ ಅರಿವು: ಮುಂಗಾರು ಮುನ್ನವೇ ತಾಲೂಕಿಗೆ ಅಗತ್ಯವಿರುವ ರಸಗೊಬ್ಬರವನ್ನು ದಾಸ್ತಾನು ಇರಿಸಲಾಗಿದೆ. ಅಗತ್ಯ ಪ್ರಮಾಣದಲ್ಲಿ ಎಲ್ಲಾರಸಗೊಬ್ಬರವನ್ನು ದಾಸ್ತಾನಿರಿಸಿದ್ದು, ತಾಲೂಕಿನಲ್ಲಿ ಹೆಚ್ಚಾಗಿ ಬೆಳೆಯುವ ಹಿಪ್ಪು ನೇರಳೆ,ಬೇಬಿ ಕಾರ್ನ್ ಬೆಳೆಗಳಿಗೆ ಯೂರಿಯಾದಅಗತ್ಯವಿದೆ. ಈ ಬೆಳೆಗಳಿಗೆ ಯೂರಿಯಾಕೊರತೆ ನೀಗಿಸುವ ಉದ್ದೇಶದಿಂದ ನ್ಯಾನೋಯೂರಿಯಾ ಬಳಕೆ ಬಗ್ಗೆ ರೈತರಿಗೆ ಅರಿವುಮೂಡಿಸಲಾಗುತ್ತಿದೆ ಎಂದು ಕೃಷಿ ಅಧಿಕಾರಿ ಸಭೆಗೆ ಮಾಹಿತಿ ನೀಡಿದರು.
ರಸ್ತೆ ಗುಂಡಿಗಳ ಬಗ್ಗೆ ಚರ್ಚೆ: ಪಿ.ಡಬ್ಲ್ಯು.ಡಿ ಇಲಾಖೆಯ ಇಂಜಿನಿಯರ್ ಅವರು ತಮ್ಮಇಲಾಖೆಯ ಪ್ರಗತಿಯ ಬಗ್ಗೆ ಅಂಕಿ- ಅಂಶಗಳನ್ನು ಮಂಡಿಸಿದಾಗ, ತಾಲೂಕಿನ ರಸ್ತೆಗಳಲ್ಲಿರುವ ಗುಂಡಿಗಳಿಂದಾಗಿ ಅಪಘಾತ ಸಂಭವಿಸಿದರೆ, ಯಾರನ್ನು ಹೊಣೆ ಮಾಡಬೇಕು ಎಂಬವಿಷಯ ಸಭೆಯಲ್ಲಿ ಚರ್ಚೆಗೆ ಗ್ರಾಸವಾಯಿತು. ರಸ್ತೆ ಗುಂಡಿಯಿಂದ ಸಂಭವಿಸುವಅಪಘಾತಕ್ಕೆ ಇಲಾಖೆಯನ್ನೇ ಹೊಣೆಮಾಡಬಹುದೇ ಎಂದು ಸಭೆಯಲ್ಲಿದ್ದ ಕೆಡಿಪಿ ಸದಸ್ಯರು ಪ್ರಶ್ನಿಸಿದರು.
ಗುಂಡಿಗಳಿಂದಾಗಿ ಸಂಭವಿಸುವ ಅಪಘಾತಗಳು ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ದೂರು ದಾಖಲಿಸಿಕೊಳ್ಳುವುದಿಲ್ಲ ಎಂದು ಕೆಲವರು ಸಭೆಯ ಗಮನ ಸೆಳೆದರು. ಇದಕ್ಕೆ ಪ್ರತಿ ಕ್ರಿಯಿಸಿದ ತಹಶೀಲ್ದಾರರು ದೂರು ಸಲ್ಲಿಸಬಹುದು ಎಂದು ಸ್ಪಷ್ಟಪಡಿಸಿದರು. ತಮ್ಮ ಇಲಾಖೆಗೆ ಹೊಣೆ ಹೊರಿಸುವುದನ್ನುನಿರಾಕರಿಸಿದ ಪಿಡಬ್ಲ್ಯುಡಿ ಇಂಜಿನಿಯರ್ಪ್ರದೀಪ್, ನಮ್ಮಿಂದ ಗುಂಡಿ ನಿರ್ಮಾಣವಾಗುವುದಿಲ್ಲ, ಮಳೆಯಿಂದಾಗಿ ನಿರ್ಮಾಣವಾಗುತ್ತಿದೆ. ಇಲಾಖೆಗೆ ಸಾಕಷ್ಟು ಅನುದಾನ ಇಲ್ಲದ ಕಾರಣ ಗುಂಡಿಗಳನ್ನುಮುಚ್ಚಲು ಸಾಧ್ಯವಾಗುವುದಿಲ್ಲ. ಈ ಬಗ್ಗೆ
ಸರ್ಕಾರವೂ ಹೇಳುತ್ತದೆ ಯಾದರೂ ಗುಂಡಿಗೆಇಲಾಖೆಯೇ ಪೂರ್ಣ ಜವಾಬ್ದಾರಿಯಲ್ಲ ಎಂದು ಸಮಜಾಯಿಷಿ ನೀಡಿದರು.
ಈಗಾಗಲೇ ತಾಲೂಕಿನಲ್ಲಿ ಎಲ್ಲಾ ರಸ್ತೆಗಳ ಗುಂಡಿಗಳನ್ನು ಮುಚ್ಚಲು ಕ್ರಮಕೈಗೊಳ್ಳಲಾಗಿದೆ. ಕಾಂಕ್ರೀಟ್ ಹಾಕಿ ರಸ್ತೆ ಗುಂಡಿಯನ್ನು ಮುಚ್ಚುವ ಪ್ರಯತ್ನವನ್ನು ಮಾಡಲಾಗುತ್ತಿದೆ.ಮಳೆಯ ಕಾರಣದಿಂದ ರಸ್ತೆ ಗುಂಡಿಯನ್ನುಮುಚ್ಚಲು ಸಮಸ್ಯೆಯಾಗಿದೆ. ಮಳೆ ನಿಂತಬಳಿಕ ರಸ್ತೆಗುಂಡಿಯನ್ನು ಮುಚ್ಚಲಾಗುವುದು ಎಂದು ಸ್ಪಷ್ಟಪಡಿಸಿದರು.
ಸಭೆಯಲ್ಲಿ ಕೆಡಿಪಿ ಸಮಿತಿ ಸದಸ್ಯರಾದ ಶಭೀರ್ವುಲ್ಲಾಬೇಗ್,ಯೋಗೀಶ್, ತಾರಕೇಶ್, ರಾಜು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.