ಸಿಎಎ, ಎನ್ಆರ್ಸಿ ವಿರುದ್ಧ ಧರಣಿ
Team Udayavani, Jan 26, 2020, 5:57 PM IST
ಚನ್ನಪಟ್ಟಣ: ಕೇಂದ್ರ ಸರ್ಕಾರ ಪೌರತ್ವ ಕಾಯ್ದೆ ತಿದ್ದುಪಡಿ ಮಾಡಿರುವುದರ ಹಿಂದೆ ಭಾರೀ ಕುತಂತ್ರ ಅಡಗಿದೆ. ದೇಶದಲ್ಲಿ ಸಹೋದರರಂತೆ ಇರುವ ಹಿಂದೂ-ಮುಸ್ಲಿಮರ ನಡುವೆ ಕಂದಕ ವನ್ನು ಸೃಷ್ಟಿಮಾಡುವ ತಂತ್ರ ಇದಾಗಿದೆ ಎಂದು ಮುಸ್ಲಿಂ ಧರ್ಮಗುರು ಮುಫ್ತಿ ಬಖಾರ್ ಆರೋಪಿಸಿದರು.
ತಾಲೂಕು ಕಚೇರಿ ಮುಂದೆ ಜಾಯಿಂಟ್ ಆಕ್ಷನ್ ಕಮಿಟಿ ವತಿಯಿಂದ ನಡೆದ ಸಿಎಎ, ಎನ್ಆರ್ಸಿ, ಎನ್ಪಿಆರ್ ವಿರುದ್ಧದ ಪ್ರತಿಭಟನೆಯಲ್ಲಿ ಮಾತನಾಡಿದರು. ಮುಸ್ಲಿಂ ಸಮುದಾಯವನ್ನು ಗುರಿಯಾಗಿಸಿಕೊಂಡು ಕೇಂದ್ರದ ಬಿಜೆಪಿ ಸರ್ಕಾರ ಈ ರೀತಿಯ ಸಂವಿಧಾನ ವಿರೋಧಿ ನೀತಿ ಅನುಸರಿಸುತ್ತಿದೆ. ಇಂದು ಮುಸಲ್ಮಾನರಿಗೆ ನಾಳೆ ಎಸ್ಸಿ, ಎಸ್ಟಿ ಹಾಗೂ ಹಿಂದುಳಿದವರಿಗೂ ಈ ಹಿಂಸೆ ತಪ್ಪಿದ್ದಲ್ಲಎಂದು ಎಚ್ಚರಿಸಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಗಂಗಾಧರ್ ಮಾತನಾಡಿ, ಕೇಂದ್ರದ ಬಿಜೆಪಿ ಸರ್ಕಾರ ಪೌರತ್ವ ಕಾಯ್ದೆ ತಿದ್ದುಪಡಿ ಅನುಷ್ಠಾನ ಮಾಡ ಲೊರಟಿರುವುದು ಅವೈಜ್ಞಾನಿಕವಾಗಿದ್ದು, ಸಮುದಾಯಗಳ ನಡುವೆ ಕಂದಕ ಸೃಷ್ಟಿ ಮಾಡುತ್ತಿದೆ ಎಂದರು. ಎಸ್ಡಿಪಿಐನ ರಾಜ್ಯ ಕಾರ್ಯದರ್ಶಿ ಅಬ್ದುಲ್ ಅನ್ಮುನ್ ಮಾತನಾಡಿ, ಕೇಂದ್ರ ಸರ್ಕಾರ ಮುಸ್ಲಿಂ ಸಮುದಾಯ ಹಾಗೂ ಈ ದೇಶದಲ್ಲಿರುವ ದಲಿತ ಸಮುದಾಯವನ್ನು ರಾಜಕೀಯವಾಗಿ ಮುಗಿಸಲು ಹಾಗೂ ದೇಶದಲ್ಲಿ ಅಸಮಾನತೆ ಸೃಷ್ಟಿ ಮಾಡಲು ದೇಶದ ಸಂವಿಧಾನವನ್ನೇ ಬದಲಾಯಿಸಲು ಹೊರಟ್ಟಿದ್ದಾರೆ ಎಂದು ಆರೋಪಿಸಿದರು.
ಕೇಂದ್ರ ಸರ್ಕಾರ ಸಿಎಎ, ಎನ್ಆರ್ಸಿ, ಎನ್ಪಿಆರ್ ಹಿಂದಕ್ಕೆ ಪಡೆಯುವಂತೆ ದಂಡಾಧಿಕಾರಿ ಸುದರ್ಶನ್ಗೆ ಮನವಿ ಸಲ್ಲಿಸಲಾಯಿತು. ಕಾಂಗ್ರೆಸ್ ಮುಖಂಡರಾದ ಶರತ್ ಚಂದ್ರ, ಸಿದ್ದರಾಮಯ್ಯ, ನಿಜಾಮ್ ಫೌಜ್ದಾರ್, ಹನುಮಂತಯ್ಯ, ರಘು ರಾಮ್ ಜೆಡಿಎಸ್ ಮುಖಂಡರಾದ ಜಬಿ ವುಲ್ಲಾಖಾನ್ ಘೋರಿ ಇತರರು ಇದ್ದರು.