ಗಂಟೆ, ಜಾಗಟೆ ಬಾರಿಸಿ ಕೇಂದ್ರದ ವಿರುದ್ಧ ಅಣಕ
Team Udayavani, Jun 13, 2021, 6:26 PM IST
ರಾಮನಗರ: ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಖಂಡಿಸಿ ತಾಲೂಕಿನ ಬಿಡದಿ ಪಟ್ಟಣ ದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಜಾಗಟೆ ಬಡಿದು, ಗಂಟೆ ಬಾರಿಸಿ, ಶಂಖ ಮೊಳಗಿಸಿ ಪ್ರತಿಭಟನೆ ನಡೆಸಿದರು.
ಬಿಡದಿಯ ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್ ಮುಂಭಾಗ ನಡೆದ ಪ್ರತಿಭಟನೆಯಲ್ಲಿ ವಿಧಾನ ಪರಿಷತ್ ಸದಸ್ಯ ಸಿ.ಎಂ.ಲಿಂಗಪ್ಪ, ಮಾಗಡಿ ಕ್ಷೇತ್ರದ ಮಾಜಿ ಶಾಸಕ ಎಚ್.ಸಿ.ಬಾಲಕೃಷ್ಣ ಜಾಗಟೆ ಬಡಿದರು, ತಾಪಂ ಮಾಜಿ ಅಧ್ಯಕ್ಷ ಗಾಣ ಕಲ್ ನಟರಾಜ್ ಗಂಟೆ ಭಾರಿಸುವ ಮೂಲಕ ಕೇಂದ್ರದ ವಿರುದ್ಧ ಅಣಕವಾಡಿ ದರು.
ಕೆಲವರು ಪೆಟ್ರೋಲ್ ಬೆಲೆ 100 ರೂ. ಆಯ್ತಲ್ಲೋ ಗೋವಿಂದ…., ಬಡವರ ಮನೆ ಹಾಳಾಯ್ತಲ್ಲೋ ಗೋವಿಂದ…, ಡೀಸೆಲ್ ಬೆಲೆ 98 ರೂ. ಆಯ್ತಲ್ಲೋ ಗೋವಿಂದ ಎಂದು ಘೋಷಣೆ ಮೊಳಗಿಸಿ ಆಕ್ರೋಶ ವ್ಯಕ್ತಪಡಿಸಿದರು. ತೈಲ ಬೆಲೆ ಏರಿಕೆ ವಿರುದ್ಧ ಕಿಡಿಕಾರಿದ ಕಾಂಗ್ರೆಸ್ ಮುಖಂಡರು, ಸಂಕಷ್ಟದ ವೇಳೆ ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ಸರ್ಕಾರಗಳು ನಿಯಂತ್ರಿಸದೆ, ಜನರನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡುತ್ತಿದ್ದಾರೆ ಎಂದು ದೂರಿದರು.