ಸುಧಾರಣೆಗೆ ಸರ್ಎಂವಿ ಆದ್ಯತೆ
Team Udayavani, Sep 16, 2019, 3:29 PM IST
ಚನ್ನಪಟ್ಟಣ ತಾಲೂಕಿನ ರಾಂಪುರದಲ್ಲಿ ನೇಗಿಲಯೋಗಿ ಟ್ರಸ್ಟ್ನಿಂದ ನಡೆದ ಸರ್ಎಂ.ವಿಶ್ವೇಶ್ವರಯ್ಯ ಜಯಂತಿ ಪ್ರಯುಕ್ತ ಗಿಡ ನೆಡಲಾಯಿತು.
ಚನ್ನಪಟ್ಟಣ: ಸರ್ಎಂ.ವಿಶ್ವೇಶ್ವರಯ್ಯ ಪ್ರಗತಿಪರ ಸುಧಾರಣೆಗಳಿಗೆ ಆದ್ಯತೆ ನೀಡಿದ್ದರು. ಈ ಮೂಲಕ ಮೈಸೂರು ಸಂಸ್ಥಾನವನ್ನು ದೇಶದಲ್ಲಿಯೇ ಮಾದರಿ ರಾಜ್ಯವನ್ನಾಗಿ ರೂಪಿಸಲು ಶ್ರಮಿಸಿದ ಮಹನೀಯರು ಎಂದು ನೇಗಿಲಯೋಗಿ ಟ್ರಸ್ಟ್ನ ಸಂಸ್ಥಾಪಕ ಕಾರ್ಯದರ್ಶಿ ವಿಜಯ್ ರಾಂಪುರ ತಿಳಿಸಿದರು.
ತಾಲೂಕಿನ ರಾಂಪುರ ಗ್ರಾಮದ ಜಗದೇವರಾಯನ ಗುಂಡುತೋಪಿನ ಆವರಣದಲ್ಲಿ ನೇಗಿಲಯೋಗಿ ಸಾಂಸ್ಕೃತಿಕ ಟ್ರಸ್ಟ್ವತಿಯಿಂದ ಸರ್ಎಂ.ವಿಶ್ವೇಶ್ವರಯ್ಯ 160ನೇ ಜಯಂತಿಯನ್ನು ಗಿಡ ನೆಡುವ ಮೂಲಕ ಆಚರಿಸಿದ ಅವರು ಮಾತನಾಡಿ, ಅಪಾರ ಪರಿಶ್ರಮದಿಂದ ಸರ್ಎಂವಿ ಅವರು ಮೈಸೂರು ಸಂಸ್ಥಾನದ ದಿವಾನರಾಗಿ, ಕೃಷಿ, ಕೈಗಾರಿಕೆ, ಶಿಕ್ಷಣ, ನೀರಾವರಿ, ವಿದ್ಯುಚ್ಛಕ್ತಿ, ತಂತ್ರಜ್ಞಾನ ಮುಂತಾದ ಕ್ಷೇತ್ರಗಳ ಬೆಳವಣಿಗೆಗೆ ವಿಶೇಷ ಆದ್ಯತೆ ನೀಡಿದ್ದರು. ಈ ಮೂಲಕ ಆಧುನಿಕ ಮೈಸೂರಿನ ಪ್ರಗತಿಗೆ ಮುನ್ನುಡಿ ಬರೆದರು. ಕನ್ನಡ ಸಾಹಿತ್ಯ ಪರಿಷತ್ತನ್ನು ಸ್ಥಾಪಿಸುವ ಮೂಲಕ ಕನ್ನಡ ಭಾಷಾ ಬೆಳವಣಿಗೆಗೆ ಕಾರಣ ಕರ್ತರಾದ ವಿಶ್ವೇಶ್ವರಯ್ಯ ಅವರ ಕೊಡುಗೆ ಅಪಾರ ಎಂದರು.
ಸರ್ಎಂವಿ ಪ್ರಾಮಾಣಿಕತೆ, ಶಿಸ್ತು ಮಾದರಿ: ಯುವ ಮುಖಂಡ ತುಂಬೇನಹಳ್ಳಿ ಕಿರಣ್ ರಾಜ್ ಮಾತನಾಡಿ, ಸರ್ಎಂವಿ ಅವರ ಪ್ರಾಮಾಣಿಕತೆ, ಶಿಸ್ತು ಮತ್ತು ಶ್ರದ್ಧೆ ಯುವ ಜನಾಂಗಕ್ಕೆ ಮಾದರಿ. ಆಧುನಿಕ ಭಾರತಕ್ಕೆ ಮೇಲ್ಪಂಕ್ತಿ ಹಾಕಿ ಕೊಟ್ಟ ಅವರ ಸಾಧನಾ ಪಥ ಸ್ಮರಣೀಯವಾದುದು. ಅವರ ಕೃತಿ ನನ್ನ ವೃತ್ತಿ ಜೀವನದ ನೆನಪುಗಳು ಯುವ ಜನಾಂಗಕ್ಕೆ ಸ್ಫೂರ್ತಿದಾಯಕ ಗ್ರಂಥವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಹಿರಿಯ ಜಾನಪದ ಗಾಯಕ ಚೌ.ಪು.ಸ್ವಾಮಿ, ದಾಸರಹಳ್ಳಿ ಅಭಿಷೇಕ್, ರಾಂಪುರ ಗ್ರಾಮಸ್ಥರಾದ ಆರ್.ಎಸ್.ಶಶಿಧರ್(ಕಿಟ್ಟಿ), ಮಹೇಶ್, ಕೆ.ಜಗದೀಶ್, ಆರ್.ಎಂ.ಶಿವಕುಮಾರ್, ನವ್ಯಶ್ರೀ, ಮೌನೀಷ್, ನವನಿಧಿ, ಅಚಲ ಉಪಸ್ಥಿತರಿದ್ದರು.