ಗುಣಮಟ್ಟದ ಶಿಕ್ಷಣಕ್ಕೆ ಸ್ಮಾರ್ಟ್ಕ್ಲಾಸ್ ಸಹಕಾರಿ
Team Udayavani, Aug 22, 2020, 12:24 PM IST
ಸಾಂದರ್ಭಿಕ ಚಿತ್ರ
ಚನ್ನಪಟ್ಟಣ: ಸರ್ಕಾರಿ ಶಾಲೆಗಳಲ್ಲಿಯೂ ಮಕ್ಕಳಿಗೆ ಗುಣ ಮಟ್ಟದ ಶಿಕ್ಷಣ ನೀಡಲು ಸ್ಮಾರ್ಟ್ಕ್ಲಾಸ್ ವಿಧಾನ ಸಹಕಾರಿ ಯಾಗಲಿದೆ ಎಂದು ಬಿಇಒ ನಾಗರಾಜು ಹೇಳಿದರು.
ಪಟ್ಟಣದ ಬಿಆರ್ಸಿ ಕೇಂದ್ರದಲ್ಲಿ ಆಯೋಜಿಸಲಾಗಿದ್ದ ಸಂಸದ ಡಿ.ಕೆ.ಸುರೇಶ್ ಸಹಯೋಗ ಹಾಗೂ ಕಿಯೋನಿಕ್ಸ್ ಸಂಸ್ಥೆಯಿಂದ ನೀಡಲಾದ ಸ್ಮಾರ್ಟ್ಕ್ಲಾಸ್ಗಾಗಿ ಪ್ರೊಜೆಕ್ಟರ್ಗಳ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ತಾಲೂಕಿನ ಆಯ್ದ 21 ಪ್ರಾಥಮಿಕ ಪಾಠ ಶಾಲೆಗಳಿಗೆ ಪ್ರೊಜೆಕ್ಟರ್ ವಿತರಣೆ ಮಾಡಲಾಗುತ್ತಿದ್ದು, ಸಾಫ್ಟ್ವೇರ್ಗಳ ಮುಖಾಂತರ ಪರದೆಯ ಮೇಲೆ ಕಲಾತ್ಮಕ ಪಾಠ ಲಭ್ಯವಾಗಲಿದೆ. ಕಲಿಕೆಗೆ ತಕ್ಕ ವಾತಾವರಣ ನಿರ್ಮಾಣಮಾಡುವಲ್ಲಿ ಇದು ಸಹಕಾರಿಯಾಗಲಿದೆ ಎಂದರು. ಸಂಸದರ ಕಾಳಜಿಯಿಂದ ಈ ಯೋಜನೆ ರೂಪುಗೊಳ್ಳುತ್ತಿದ್ದು, ಇದರ ಉಪಯೋಗವನ್ನು ವಿದ್ಯಾರ್ಥಿಗಳು ಸದ್ಬಳಕೆ ಮಾಡಿಕೊಳ್ಳಬೇಕು. ಪೊ›ಜೆಕ್ಟರ್ ಗಳನ್ನು ಯಾವ ರೀತಿ ನಿರ್ವಹಿಸಬೇಕು ಎಂಬುದರ ಬಗ್ಗೆ ನೀಡುತ್ತಿರುವ ತರಬೇತಿಯನ್ನು ಶಿಕ್ಷಕ ವರ್ಗ ಸಮಗ್ರವಾಗಿ ಪಡೆಯಬೇಕೆಂದರು.
ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಚಂದ್ರಶೇಖರ್ ಮಾತನಾಡಿ, ವಿದ್ಯಾರ್ಥಿಗಳ ಬುದ್ಧಿಯನ್ನು ವೃದ್ಧಿಗೊಳಿಸಲು ಉಪಯುಕ್ತವಾದ ಸ್ಮಾರ್ಟ್ಕ್ಲಾಸ್ ಪ್ರೊಜೆಕ್ಟರ್ಗಳನ್ನು ಹಂತ ಹಂತವಾಗಿ ನಗರ ಹಾಗೂ ತಾಲೂಕಿನ ಎಲ್ಲಾ ಶಾಲೆಗಳಲ್ಲೂ ವಿತರಣೆ ಮಾಡಲು ದಾನಿಗಳ ಸಹಕಾರ ಪಡೆಯುವಂತೆ ತಿಳಿಸಿದರು. ಶಿಕ್ಷಣ ಸಂಯೋಜಕ ಗಂಗಾಧರ ಮೂರ್ತಿ ಮಾತನಾಡಿ, ಈಗಾಗಲೇ ಕೆಲವು ಶಾಲೆಗಳಲ್ಲಿ ಪೊ›ಜೆಕ್ಟರ್ ಗಳ ಮೂಲಕ ಶಿಕ್ಷಣ ನೀಡಲಾಗುತ್ತಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹಾಗೆಯೇ ಫಲಿತಾಂಶವೂ ಉತ್ತಮವಾಗಿದೆ. ಮಕ್ಕಳಿಗೆ ವಾಸ್ತವತೆಯ ಶಿಕ್ಷಣಕ್ಕೆ ಈ ವಿಧಾನ ಸಹಕಾರಿಯಾಗಲಿದೆ ಎಂದು ತಿಳಿಸಿದರು. ಕಿಯೋನಿಕ್ ಸಂಸ್ಥೆಯ ರಫಿ, ಬಿಆರ್ಸಿಗಳಾದ ರಾಘವೇಂದ್ರ, ಜಯರಾಮು, ರವಿಕುಮಾರ್, ಶ್ರೀನಿವಾಸ್, ಸಿಆರ್ಪಿಗಳಾದ ರಾಜು, ವೆಂಕಟೇಶ್, ಅಪ್ಪಾಜಿ, ಕೃಷ್ಣಪ್ಪ, ಬೆಟ್ಟಯ್ಯ, ಮುತ್ತಯ್ಯ ಹಾಜರಿದ್ದರು.