ಖಾಸಗಿ ಶಾಲೆ ಶಿಕ್ಷಕರ ಸಂಕಷ್ಟ ನಿವಾರಿಸಿ
Team Udayavani, Sep 15, 2020, 12:19 PM IST
ಕನಕಪುರ: ಸರ್ಕಾರಿ ಶಾಲೆಗಳ ಶಿಕ್ಷಕರಿಗಿಂತ ಖಾಸಗಿ ಶಾಲೆಗಳ ಶಿಕ್ಷಕರು ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಶ್ರಮ ವಹಿಸುತ್ತಾರೆ. ಆದರೂ ಸರ್ಕಾರ ಖಾಸಗಿ ಶಾಲಾ ಶಿಕ್ಷಕರಿಗೆ ನೀಡುವ ವೇತನ ಮತ್ತು ಮಕ್ಕಳಿಗೆ ನೀಡುವ ಸೌಲಭ್ಯಗಳಲ್ಲಿ ತಾರತಮ್ಯ ನೀತಿ ಅನುಸರಿಸುತ್ತಿರುವುದು ಮಾತ್ರ ವಿಷಾದನೀಯ ಎಂದು ಜಿಲ್ಲಾ ಖಾಸಗಿ ಶಾಲೆಗಳ ಒಕ್ಕೂಟದ ಅಧ್ಯಕ್ಷ ರವಿಗೌಡ ಬೇಸರಿಸಿದರು.
ನಗರದ ಲಯನ್ಸ್ ಶಾಲೆಯಲ್ಲಿ ಖಾಸಗಿ ಶಾಲೆಗಳ ಒಕ್ಕೂಟದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಶಿಕ್ಷಕರದಿನಾಚರಣೆ, ಪ್ರತಿಭಾಪುರಸ್ಕಾರ ಉದ್ಘಾಟಿಸಿ ಮಾತನಾಡಿದರು. ಸರ್ಕಾರದ ನಿರ್ಲಕ್ಷ್ಯದಿಂದ ಖಾಸಗಿ ಶಾಲಾ ಶಿಕ್ಷಕರು ಕೊರೊನಾದ ನಂತರ ಕಳೆದ 6 ತಿಂಗಳಿಂದ ವೇತನವಿಲ್ಲದೆ ವ್ಯಾಪಾರ ಮಾಡಿಕೊಂಡು ಜೀವನ ನಿರ್ವಹಣೆ ಮಾಡುವಂತಾಗಿದೆ. ಇಷ್ಟಾದರೂ ಸರ್ಕಾರ ಮಾತ್ರ ಸಂಕಷ್ಟದಲ್ಲಿರುವ ಶಿಕ್ಷಕರ ನೆರವಿಗೆ ಬಾರದೆ ಇರುವುದು ವಿಪರ್ಯಾಸ. ಸರ್ಕಾರ ಇನ್ನಾದರೂ ಶಿಕ್ಷಕರ ನೆರವಿಗೆ ಬರಬೇಕು ಎಂದು ಒತ್ತಾಯಿಸಿದರು.
ಕ್ಷೇತ್ರ ಶಿಕ್ಷಣಾಧಿಕಾ ಜಯಲಕ್ಷ್ಮೀ, ಶಿಕ್ಷಕರಿಗೆ ದೇವರಿಗಿಂತ ಮಿಗಿಲಾದ ಸ್ಥಾನವನ್ನು ಹಿರಿಯರು ನೀಡಿದ್ದಾರೆ. ಸಮಾಜಕ್ಕೆ ನ್ಯಾಯಕೊಡುವವಕೀಲರು, ಕಟ್ಟಡ ಕಟ್ಟುವ ಎಂಜಿನಿಯರ್, ಶ್ರುಶ್ರೂಷೆ ಮಾಡುವ ವೈದ್ಯರೂ ಒಬ್ಬ ಶಿಕ್ಷಕನಿಂದಲೇ ರೂಪುಗೊಳ್ಳುತ್ತಾರೆ. ಇದರಲ್ಲಿ ಸ್ವಲ್ಪ ಲೋಪವಾದರೂ ಸಮಾಜದ ಮುಂದಿನ ಒಂದು ಪೀಳಿಗೆಯೇ ನಾಶವಾದಂತೆ ಎಂದರು. ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಜಿಲ್ಲೆಗೆ ದ್ವಿತೀಯ ಸ್ಥಾನ ಪಡೆದ ಜೈನ್ ವಿದ್ಯಾನಿಕೇತನದ ಸಿ.ಸಾತ್ವಿಕ್, ಬಿಜಿಎಸ್ ಶಾಲೆಯ ಎನ್.ನವ್ಯಶ್ರೀ, ಸೆಂಟ್ ಮೈಕೆಲ್ ಶಾಲೆಯ ಎಂ.ಸಂಗೀತಾಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ತಾಲೂಕು ಖಾಸಗಿ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮುತ್ತುಸ್ವಾಮಿ, ಗೌರವಾಧ್ಯಕ್ಷ ಸಂತೂರಾಮ್, ಬಿಜಿಎಸ್ ಶಾಲೆ ಮುಖ್ಯೋಪಾಧ್ಯಾಯ ಕೆ.ಗೋಪಾಲ್, ಸಂಘದ ಗೌರವಾಧ್ಯಕ್ಷರಾದ ಸಂತೂರಾಮ್,ಗುರುಮೂರ್ತಿ,ಲಯನ್ಸ್ಶಾಲೆಮುಖ್ಯೋಪಾಧ್ಯಾಯ ರಾಜೇಶ್ ಉಪಸ್ಥಿತರಿದ್ದರು.