ಬಾಲ ಕಾರ್ಮಿಕ ಪದ್ಧತಿ ತಡೆಗಟ್ಟಿ: ಹನುಮಂತ
ನಾಗರಿಕರಿಗೆ ಪ್ರಧಾನ ಸಿವಿಲ್ ನ್ಯಾಯಾಧೀಶರ ಕಿವಿಮಾತು
Team Udayavani, Jun 17, 2019, 4:16 PM IST
ಕನಕಪುರ ನಗರದ ಶಿಕ್ಷಕರ ಭವನದ ರಸ್ತೆಯ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯಲ್ಲಿ ತಾಲೂಕು ಕಾನೂನು ಸೇವಾ ಸಮಿತಿ ವತಿಯಿಂದ ವಿಶ್ವಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ ನಡೆಯಿತು.
ಕನಕಪುರ: ಬಾಲಕಾರ್ಮಿಕ ಪದ್ಧತಿ ಹೆಚ್ಚಾಗದಂತೆ ನಿರ್ಮೂಲನೆ ಮಾಡಲು ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡು ಅರಿವು ಮೂಡಿಸಲಾಗುತ್ತಿದೆ ಎಂದು ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶ ರಾದ ಜೆ.ಎಚ್.ಹನುಮಂತ ತಿಳಿಸಿದರು.
ಕನಕಪುರ ನಗರದ ಶಿಕ್ಷಕರ ಭವನದ ರಸ್ತೆಯ ಬಾಲಕಿಯರ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ ವತಿಯಿಂದ ವಿಶ್ವಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ ಅಂಗವಾಗಿ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಈ ಬಾರಿ ಮಕ್ಕಳು ಕೆಲಸ ಬಿಟ್ಟು ಕನಸು ಕಾಣಿ. ಅದನ್ನು ನನಸಾಗಿಸಿಕೊಳ್ಳಿ ಎನ್ನುವ ಧ್ಯೇಯವಾಕ್ಯದಲ್ಲಿ ಮಾಡಲಾಗುತ್ತಿದೆ. ವಿದ್ಯಾರ್ಥಿಗಳು ಕೆಲಸ ಬಿಟ್ಟು, ಶಿಕ್ಷಣ ಮತ್ತು ಕನಸನ್ನು ಕಾಣಬೇಕು ಎಂದು ದೇಶದ ವಿಜ್ಞಾನಿ ಅಬ್ದುಲ್ ಕಲಾಂ ಹೇಳಿದ್ದಾರೆ. ಅದರಂತೆ ನೀವು ಈ ನಿಟ್ಟಿನಲ್ಲಿ ಜಾಗೃತರಾಗಬೇಕು ಎಂದರು.
ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆ ಮಾಡಲು ಸರ್ಕಾರ ಅನೇಕ ಇಲಾಖೆಗಳನ್ನು ಬಳಸಿಕೊಳ್ಳುವ ಅವಕಾಶವಿದೆ. ಮಕ್ಕಳು ಶಿಕ್ಷಣದಿಂದ ವಂಚಿತರಾಗದಂತೆ ಶಿಕ್ಷಣ ಪಡೆಯಬೇಕೆಂದರು.
1986 ರಲ್ಲಿ ಈ ಕಾಯ್ದೆ ಜಾರಿಯಾಗಿದ್ದು, ಇದರಲ್ಲಿ 14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಕೆಲಸಕ್ಕೆ ಬಳಸಿಕೊಳ್ಳುವಂತಿಲ್ಲ. 14 ರ ನಂತರ 18 ವರೆಗಿನ ವಯಸ್ಸಿನ ಮಕ್ಕಳನ್ನು ಅಪಾಯಕಾರಿ ಕೆಲಸಕ್ಕೆ ಬಳಸಿ ಕೊಳ್ಳುವಂತಿಲ್ಲ ಎಂದು ಜಾರಿಯಲ್ಲಿದೆ. ಕಾಯ್ದೆ ಉಲ್ಲಂಘಿಸಿದವರಿಗೆ ಕಾನೂನು ಪ್ರಕಾರ ಶಿಕ್ಷೆ ಹಾಗು ದಂಡ ವಿಧಿಸಲಾಗು ವುದು ಎಂದು ಎಚ್ಚರಿಸಿದರು.
ವಕೀಲರಾದ ಕಾಮೇಶ್, ಮೊಬೈಲ್ ಬಳಕೆಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಉಪನ್ಯಾಸ ನೀಡಿ, ಇಂದು ಮೊಬೈಲ್ ಬಳಕೆ ಕಾಡ್ಗಿಚ್ಚಿನಂತೆ ಎಲ್ಲೆಡೆ ಪಸರಿಸುತ್ತಿದ್ದು, ಅದನ್ನು ತಡೆಯಲು ಸಾಧ್ಯವಾಗುತ್ತಿಲ್ಲ. ಮೊಬೈಲ್ ಬಳಕೆಯಿಂದ ಅನುಕೂಲಕ್ಕಿಂತ ಹೆಚ್ಚು ಅನಾನುಕೂಲವಾಗುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕಿ ಸುನಿತಾ ಅಧ್ಯಕ್ಷತೆ ವಹಿಸಿದ್ದರು. ಕಾರ್ಮಿಕ ನಿರೀಕ್ಷಕರಾದ ಮಂಜುನಾಥ್ ವಿದ್ಯಾರ್ಥಿ ಗಳಿಗೆ ಬಾಲಕಾರ್ಮಿಕ ಪದ್ಧತಿ ಬಗ್ಗೆ ಮಾಡಿರುವ ತಿದ್ದುಪಡಿ ಕಾನೂನು ಕುರಿತು ತಿಳಿಸಿಕೊಟ್ಟರು. ಸಹಾಯಕ ಸರ್ಕಾರಿ ಅಭಿಯೋಜಕರಾದ ನಾರಾಯಣಸ್ವಾಮಿ, ವಕೀಲರ ಸಂಘದ ಅಧ್ಯಕ್ಷರಾದ ಗಿರಿಧರ, ಕಾರ್ಯದರ್ಶಿ ದೇವೂರಾವ್ಜಾಧವ್, ವಕೀಲರಾದ ಸಂಜಯ್, ಯೋಗೀಶ್, ಅನಿತಾ ಮತ್ತಿತರರಿದ್ದರು.