ಮೈತ್ರಿ ಅಭ್ಯರ್ಥಿಗಳಿಗೆ ಬೆಂಬಲ ನೀಡಿ
ಕೋಮುವಾದಿ ಬಿಜೆಪಿ ದೂರವಿಡಲು ರಾಜ್ಯದಲ್ಲಿ ಮೈತ್ರಿ ಸರ್ಕಾರ ರಚನೆ
Team Udayavani, Apr 10, 2019, 12:48 PM IST
ರಾಮನಗರ: ದೇಶ ಗಂಡಾಂತರದಿಂದ ಪಾರಾಗಲು ಮೈತ್ರಿ ಅಭ್ಯರ್ಥಿಗಳಿಗೆ ಮತ ನೀಡಬೇಕು ಎಂದು ಮಾಜಿ ಸಚಿವ ಕೆ.ಎಚ್.ಮುನಿಯಪ್ಪ ಹೇಳಿದರು.
ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬಿಜೆಪಿ ನೇತೃತ್ವದ ಎನ್ಡಿಎ ಆಡಳಿತದಲ್ಲಿ ಅಲ್ಪಸಂಖ್ಯಾತರು ಮತ್ತು ಹಿಂದುಳಿದ ವರ್ಗಗಳ ಜನ ದೌರ್ಜನ್ಯ,ದಬ್ಬಳಿಕೆಯಿಂದ ನರಳಿದ್ದಾರೆ. ಉ.ಪ್ರದಲ್ಲಿ ಯೋಗಿ ಆದಿತ್ಯನಾಥ್ ಸಿಎಂ ಆಗಿದ್ದು, ಆ ರಾಜ್ಯದ ಪರಿಸ್ಥಿತಿಯ ಬಗ್ಗೆ ದೇಶಕ್ಕೆ ಗೊತ್ತಿದೆ. ಮೋದಿ ಪ್ರಧಾನಿಯಾದ ಮೇಲೆ ದೇಶ ಎತ್ತ ಸಾಗುತ್ತಿದೆ ಎಂಬುದು ಗೊತ್ತಾಗುತ್ತಿಲ್ಲ. ಹೀಗಾಗಿ ಕೋಮುವಾದಿ ಬಿಜೆಪಿಯನ್ನು ದೂರ
ಇಡಬೇಕಾಗಿದೆ. ಇದೇ ಕಾರಣಕ್ಕೆ ರಾಜ್ಯದಲ್ಲಿ ಜೆಡಿಎಸ್ 37 ಸ್ಥಾನಗಳನ್ನು ಪಡೆದರು, ಅವರೊಂದಿಗೆ ಕಾಂಗ್ರೆಸ್ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಿದೆ ಎಂದರು.
ಕೋಮುವಾದಿ ಶಕ್ತಿಗಳ ವಿರುದ್ಧ ಹೋರಾಟ:
ದೇಶದಲ್ಲಿ ವಿವಿಧ ಪಕ್ಷಗಳದ್ದು ಸಹ ಇದೇ ಅಭಿಪ್ರಾಯ. ಘಟಬಂದನ್ನಲ್ಲಿ ಸಮಾನ ಮನಸ್ಕ ಪಕ್ಷಗಳಿವೆ. ಬಿಎಸ್ಪಿ, ಎಸ್ಪಿ ಪಕ್ಷಗಳು ಮಹಾ ಘಟಬಂದನ್ನಿಂದ ದೂರ ಉಳಿದಿದೆಯಾದರು, ಆ ಪಕ್ಷಗಳು ಸಹ
ಕೋಮುವಾದಿ ಶಕ್ತಿಗಳ ವಿರುದ್ಧ ಹೋರಾಡಲಿವೆ. ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ದೇಶಕ್ಕೆ ಗಂಡಾಂತರ ಎದುರಾಗಲಿದೆ. ಹೀಗಾಗಿ ಮತದಾರರು ಜಾತ್ಯತೀತ ಸಿದ್ಧಾಂತದ ಮೇಲೆ ಮೈತ್ರಿ ಸಾಧಿಸಿರುವ ಪಕ್ಷಗಳ ಅಭ್ಯರ್ಥಿಗಳಿಗೆ ಮತ ಚಲಾಯಿಸಬೇಕು ಎಂದರು.
ಮನಮೋಹನ ಸಿಂಗ್ ಪ್ರಧಾನಿಯಾಗಿದ್ದ ಯುಪಿಎ ರ್ಕಾರ ರೈತರ ಸಾಲ ಮನ್ನಾ ಮಾಡಿತ್ತು. ಬಡವರ, ಕಾರ್ಮಿಕರ, ರೈತರ ಕಣ್ಣೀರು ಒರೆಸಿದೆ. ಆದರೆ ಮೋದಿ ಸರ್ಕಾರ ರೈತರ ಸಾಲಾಮನ್ನಾಕ್ಕೆ ಪುಡಿಗಾಸನ್ನು ನೀಡಲಿಲ್ಲ ಎಂದು ಆರೋಪಿಸಿದರು.
ಆರೋಪ ನಿರಾಧಾರ: ಕೇಂದ್ರ ಸಚಿವರಾಗಿ, ಸಂಸದರಾಗಿ ಹಣ ಲೂಟಿ ಮಾಡಿರುವ ಆರೋಪಗಳು ಚುನಾವಣೆ ಸಮಯದಲ್ಲಿ ಸಹಜ. ರೈಲು, ರಸ್ತೆ, ಕೈಗಾರಿಕೆಗಳ ಸ್ಥಾಪನೆಗೆ ತಾವು ಸಾಕಷ್ಟು ಶ್ರಮಿಸಿರುವುದಾಗಿ, ಕ್ಷೇತ್ರದಲ್ಲಿತಮ್ಮ ಶ್ರಮ ಕಣ್ಣಿಗೆ ಕಾಣಿಸುತ್ತಿದೆ. ಕೈಗಾರಿಕೆಗಳನ್ನು ಸ್ಥಾಪಿಸಿದ್ದರಿಂದ ಇಂದು 50 ಸಾವಿರ ಮಂದಿಗೆ ಉದ್ಯೋಗ ದೊರಕಿದೆ. ತಮ್ಮ ಬೆನ್ನಿಗಿರುವ ಸಮುದಾಯಗಳ ಪೈಕಿ ಒಕ್ಕಲಿಗರು ಇದ್ದಾರೆ. ಒಕ್ಕಲಿಗರ ವಿರುದ್ಧ ತಾವು ಎಂದೂ ಏನನ್ನು ಮಾತನಾಡಿಲ್ಲ. ಅವೆಲ್ಲ ಸುಳ್ಳು ಎಂದರು.
ನೆಮ್ಮದಿಗೆ ಪೂರಕ ಸರ್ಕಾರ ಅಗತ್ಯ: ನೆಮ್ಮದಿ, ಶಾಂತಿಯ ಬದುಕಿಗೆ ಪೂರಕವಾದ ಸರ್ಕಾರ ಬೇಕಾಗಿದೆ. ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿ ಡಿ.ಕೆ.ಸುರೇಶ್ ಸ್ಪರ್ಧಿಸಿದ್ದಾರೆ. ಕ್ಷೇತ್ರ ವ್ಯಾಪ್ತಿಯ
ದಲಿತರು, ಹಿಂದುಳಿದ ವರ್ಗಗಳು ಮತ್ತು ಅಲ್ಪಂಸಂಖ್ಯಾತರ ಮತದಾರರು ಡಿ.ಕೆ. ಸುರೇಶ್ಗೆ ಮತ ಚಲಾಯಿಸಬೇಕು ಎಂದು ಮನವಿ ಮಾಡಿಕೊಂಡರು.
ಈ ವೇಳೆಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಗಂಗಾಧರ್, ಮುಖಂಡರಾದ ಲೋಕೇಶ್, ರಾಂಪುರ ನಾಗೇಶ್, ಶ್ರೀನಿವಾಸ್ ಮುಂತಾದವರು ಹಾಜರಿದ್ದರು