ತಹಶೀಲ್ದಾರ್ ಸೇರಿ ಅಧಿಕಾರಿಗಳ ಮೇಲೆ ಹಲ್ಲೆ ಯತ್ನ
Team Udayavani, Sep 3, 2017, 4:53 PM IST
ಮಾಗಡಿ: ಅಕ್ರಮವಾಗಿ ನಡೆಯುತ್ತಿದ್ದ ಫಿಲ್ಟರ್ ಮರಳು ದಂಧೆ ಮೇಲೆ ದಾಖಲಿಸಿ ನಡೆಸಿದ ತಹಶೀಲ್ದಾರ್ ಹಾಗೂ ಕಂದಾಯ ಅಧಿಕಾರಿಗಳ ಮೇಲೆ ಆರೋಪಿಗಳು ಹಲ್ಲೆ ನಡೆಸಿರುವ ಘಟನೆ ಶನಿವಾರ ತಾಲೂಕಿನ ಚೀಲೂರು ಗ್ರಾಮದಲ್ಲಿ ನಡೆದಿದ್ದು,
ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
ತಾಲೂಕಿನ ಹೂಜೆನಹಳ್ಳಿ ಧನಂಜಯ, ಸಿದ್ದಯ್ಯಪಾಳ್ಯದ ಚಿಕ್ಕಣ್ಣ, ಬ್ಯಾಲಕೆರೆ ಸೂರ್ಯ ಕುಮಾರ್ ಹಾಗೂ ಮೋಹನ್ಕುಮಾರ್ ಎಂಬುವರೇ ತಹಶೀಲ್ದಾರ್ ಸೇರಿದಂತೆ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿ ಸಿಕ್ಕಿ ಬಿದ್ದಿರುವ ಆರೋಪಿಗಳು.
ನಾರಸಂದ್ರ ಗ್ರಾಪಂ ವ್ಯಾಪ್ತಿಯ ಚೀಲೂರು ಕೆರೆಯಲ್ಲಿ ಅಕ್ರಮವಾಗಿ ಫಿಲ್ಟರ್ ಮರಳು ದಂಧೆ ನಡೆಯುತ್ತಿರುವ ಬಗ್ಗೆ ಹಲವು ದಿನಗಳಿಂದ ಸಾಕಷ್ಟು ದೂರುಗಳು ಬಂದಿದ್ದವು. ಈ ಮಾಹಿತಿ ಮೇರೆಗೆ ತಹಶೀಲ್ದಾರ್ ಲಕ್ಷ್ಮೀ ಸಾಗರ್ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳಾದ ಗಂಗಮಾರಯ್ಯ, ಶಿವರುದ್ರಯ್ಯ ಶನಿವಾರ ಮರಳು ದಂಧೆ ನಡೆಯುತ್ತಿದ್ದ ಚೀಲೂರು ಕೆರೆ ಬಳಿ ಹೋಗಿದ್ದಾರೆ. ಇದನ್ನು ಗಮನಿಸಿದ
ದಂಧೆಕೋರರು ಸ್ಥಳದಿಂದ ಟ್ರ್ಯಾಕ್ಟರ್ ಮತ್ತು ಪಿಲ್ಟರ್ ಯಂತ್ರಗಳ ಸಮೇತ ಪರಾರಿಯಾಗಿದ್ದಾರೆ. ಇದರಿಂದ ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಅಧಿಕಾರಿಗಳು ವಾಪಸ್ಸಾಗಿದ್ದಾರೆ. ಆದರೆ ಅಕ್ರಮ ಮರಳು ಫಿಲ್ಟರ್ ದಂಧೆಕೋರರು ಮತ್ತೆ ಮಧ್ಯಾಹ್ನ ಕೆರೆಗೆ ಇಳಿದು ತಮ್ಮ ಅಕ್ರಮ ಚಟುವಟಿಕೆ ಮುಂದುವರಿಸಿದ್ದಾರೆ.