ಜಿಲ್ಲೆಗೆ ವಿಧಾನಪರಿಷತ್ ಸ್ಥಾನ ಸಾಧ್ಯತೆ!
Team Udayavani, Jun 13, 2020, 6:30 AM IST
ರಾಮನಗರ: ರಾಮನಗರ ಜಿಲ್ಲೆಗೆ ವಿಧಾನ ಪರಿಷತ್ ಸ್ಥಾನ ಶೇ.100 ಸಿಗುವ ಭರವಸೆಯಿದೆ. ಅಲ್ಲದೆ ಎಲ್ಲರಿಗೂ ಒಪ್ಪಿಗೆಯಾಗುವಂತಹ ಅಭ್ಯರ್ಥಿಗಳ ಪಟ್ಟಿ ಸಿದ್ಧವಾಗಲಿದೆ ಎಂದು ಡಿಸಿಎಂ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು. ತಾಲೂಕಿನ ಬಿಡದಿ ಹೋಬಳಿ ಮಂಚನಾಯ್ಕನಹಳ್ಳಿ ಗ್ರಾಮ ಪಂಚಾಯಿತಿಯ ತಾಳಗುಪ್ಪ ಗ್ರಾಮದಲ್ಲಿ ನ್ಯಾಷ ನಲ್ ರೂರಲ್ ವುಮನ್ ಲೈವ್ಲಿ ಹುಡ್ ಕಾರ್ಯಕ್ರಮದಡಿಯ ಸ್ವಸಹಾಯ ಗುಂಪುಗಳ ಫಲಾನುಭವಿ ಸದಸ್ಯರ ಬಳಿ ಸಂವಾದ ನಡೆಸಲುಭೇಟಿ ಕೊಟ್ಟಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದರು.
ವಿಧಾನ ಪರಿಷತ್ಗೆ ಟಿಕೆಟ್ ವಿಚಾರದಲ್ಲಿ ತಮ್ಮ ಪಕ್ಷದಲ್ಲಿ ಯಾವ ಗೊಂದಲವಿಲ್ಲ. ಪಕ್ಷ ಕಟ್ಟಿದವರು, ವಲಸೆ ಬಂದಿರುವವರು ಎಲ್ಲರಿಗೂ ಒಪ್ಪಿಗೆ ಯಾಗುವಂತಹ ಸ್ಪರ್ಧಿಗಳ ಪಟ್ಟಿ ಸಿದ್ಧವಾಗಲಿದೆ ಎಂದರು. ಲಾಕ್ಡೌನ್ ನಂತರ ರಾಜ್ಯದಲ್ಲಿ ಕೋವಿಡ್-19 ಸೋಂಕಿತರ ಹೆಚ್ಚಳವಾಗುತ್ತಿದೆ ಎಂಬುದನ್ನು ಒಪ್ಪಿಕೊಂಡ ಸಚಿವರು, ಲಾಕ್ಡೌನ್ ನಂತರ ಜನರ ಓಡಾಟ, ರಾಜ್ಯ ಮತ್ತು ಜಿಲ್ಲೆಗಳ ನಡುವೆ ಹೆಚ್ಚಾಗಿದೆ. ಸೋಂಕಿತರ ಸಂಖ್ಯೆಯೂ ಹೆಚ್ಚಳವಾಗುತ್ತಿದೆ. ಆದರೆ ಈಗ ಕೋವಿಡ್ -19 ಸೋಂಕಿತರ ಚಿಕಿತ್ಸೆಗೆ ರಾಜ್ಯದ ಆಸ್ಪತ್ರೆಗಳು ಸಿದ್ಧವಾ ಗಿವೆ. ಸಿದ್ಧತೆ ಮಾಡಿಕೊಳ್ಳುವ ಸಲುವಾಗಿ ಲಾಕ್ಡೌನ್ ಅನಿ ವಾರ್ಯವಾಗಿತ್ತು ಎಂದರು.
ಇಟಲಿ ದೇಶದಲ್ಲಿ ಸಿದ್ಧತೆ ಮಾಡಿಕೊಳ್ಳದೆ ಇದ್ದುದರಿಂದ ಭಾರೀ ಅನಾಹುತವಾಗಿದೆ ಎಂದು ಆಗಿರುವ ಪ್ರಮಾದದ ಬಗ್ಗೆ ಸಚಿವರು ಉದಾಹರಣೆ ನೀಡಿದರು. ಜಿಲ್ಲೆಯಲ್ಲಿ ಜನರ ಓಡಾಟ ಹೆಚ್ಚಾಗುತ್ತಿದ್ದರೂ ಸೋಂಕುನಿಯಂತ್ರಣದಲ್ಲಿದೆ. ತಾಲೂಕು ಮತ್ತು ಜಿಲ್ಲಾಸ್ಪತ್ರೆ, ಕೋವಿಡ್-19 ಆಸ್ಪತ್ರೆಯಲ್ಲಿ ಪರಿಣಾಮಕಾರಿ ಚಿಕಿತ್ಸೆ ನೀಡಲು ಉತ್ತಮ ಅವಕಾಶವಿದೆ. ಇನ್ನೊಂದು ವಾರದಲ್ಲಿ ಕೋವಿಡ್-19 ಸೋಂಕು ಪತ್ತೆ ಯೋಗಾಲಯ ಸಿದ್ಧವಾ ಗಲಿದೆ. ಆದರೂ ಜನರು ಸಾಮಾಜಿಕ ಅಂತರ ಹಾಗೂ ಮಾಸ್ಕ್ ಧರಿಸಿ ಎಚ್ಚರಿಕೆಯಿಂದಿರಬೇಕು ಎಂದರು.
ಅನುಭವ ತಿಳಿಯಲು ಭೇಟಿ: ನ್ಯಾಷನಲ್ ರೂರಲ್ ವುಮನ್ ಲೈವ್ಲಿ ಹುಡ್ ಎಂಬ ಯೋಜನೆಯಡಿಯಲ್ಲಿ ಗ್ರಾಮೀಣ ಮಹಿಳೆಯರು ಸ್ವಸಹಾಯ ಸಂಘದ ಮೂಲಕ ಸ್ವ ಉದ್ಯೋಗ ಕೈಗೊಂಡಿದ್ದಾರೆ. ಯೋಜನೆಯನ್ನು ಹೇಗೆ ಬಳಸಿಕೊಂಡಿದ್ದಾರೆ, ಎಷ್ಟು ಉಪಯುಕ್ತವಾಗಿದೆ ಎಂಬ ಮೌಲ್ಯ ಮಾಪನ ನಡೆಯುತ್ತಿದೆ. ಈ ಮಹಿಳೆಯರ ಉತ್ಪನ್ನಗಳು ಮತ್ತು ಮಾದರಿಯಾಗಿ ಮಾಡುತ್ತಿರುವ ಕೆಲಸಗಳನ್ನು ಖುದ್ದು ಕಂಡು ಅವರ ಅನುಭವ ತಿಳಿದುಕೊಳ್ಳುವ ಸಲುವಾಗಿ ಭೇಟಿ ಕೊಟ್ಟಿರುವುದಾಗಿ ತಿಳಿಸಿದರು.