ಬಿಜೆಪಿಯಿಂದ ಗೆಲುವು ಕೈ ಬಲದಿಂದ ಅಧ್ಯಕ್ಷೆ
Team Udayavani, Sep 18, 2018, 6:05 AM IST
ರಾಮನಗರ: ಬಿಜೆಪಿಯಿಂದ ಗೆಲುವು ಸಾಧಿಸಿ ಬಳಿಕ ಕಾಂಗ್ರೆಸ್ನೊಂದಿಗೆ ಗುರುತಿಸಿಕೊಂಡಿದ್ದ ಇಲ್ಲಿನ 6ನೇ ವಾರ್ಡಿನ ಸದಸ್ಯೆ ರತ್ನಮ್ಮ ರಾಮನಗರ ನಗರಸಭೆ ನೂತನ ಅಧ್ಯಕ್ಷೆಯಾಗಿ ಆಯ್ಕೆಗೊಂಡಿದ್ದಾರೆ. ಸೋಮವಾರ ಅಧ್ಯಕ್ಷ
ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ರತ್ನಮ್ಮ 19 ಮತಗಳನ್ನು ಪಡೆದು ಗೆಲುವಿನ ನಗೆ ಬೀರಿದರು. ಎದುರಾಳಿ ಸುಜಾತ
11 ಮತಗಳನ್ನು ಪಡೆದು ಪರಾಭವಗೊಂಡರು.
ನಗರಸಭೆ ಕಾಂಗ್ರೆಸ್ ಸದಸ್ಯರು ಸ್ವಪಕ್ಷೀಯ ಪಿ. ರವಿಕುಮಾರ್ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸಿ
ಯಶಸ್ವಿಯೂ ಆಗಿದ್ದರಿಂದ ಪಿ.ರವಿಕುಮಾರ್ ಅಧ್ಯಕ್ಷ ಸ್ಥಾನದಿಂದ ಪದಚ್ಯುತಿಗೊಂಡಿದ್ದರು. ಹೀಗೆ ತೆರವಾದ ಸ್ಥಾನಕ್ಕೆ ಚುನಾವಣೆ ನಡೆಯಿತು. ರತ್ನಮ್ಮ ಮತ್ತು ಜೆಡಿಎಸ್ ಸದಸ್ಯೆ ಸುಜಾತ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದರು. ಒಟ್ಟು 31 ಸದಸ್ಯರ ಪೈಕಿ ಅಧ್ಯಕ್ಷ ಸ್ಥಾನದಿಂದ ಪದಚ್ಯುತಗೊಂಡಿರುವ ಕಾಂಗ್ರೆಸ್ ಸದಸ್ಯ ಪಿ. ರವಿಕುಮಾರ್ ಮತ್ತು ಜೆಡಿಎಸ್ ಸದಸ್ಯ ನಾಗರಾಜ್ ಗೈರಾಗಿದ್ದರು. 29 ನಗರಸಭಾ ಸದಸ್ಯರು ಹಾಗೂ ಸಂಸದ ಡಿ.ಕೆ.ಸುರೇಶ್ ಭಾಗಿಯಾಗಿದ್ದರು. ರತ್ನಮ್ಮ ಅವರಿಗೆ ಕಾಂಗ್ರೆಸ್ನ 14 ಸದಸ್ಯರು, ಬಿಜೆಪಿಯಿಂದ ಗೆದ್ದಿರುವ 2 ಸದಸ್ಯರು, 2 ಪಕ್ಷೇತರ ಸದಸ್ಯರು ಮತ್ತು ಸಂಸದ ಡಿ.ಕೆ.ಸುರೇಶ್ ಅವರ ಮತವೂ ಸೇರಿ ಒಟ್ಟು 19 ಮತಗಳು ಲಭಿಸಿದವು. ಸುಜಾತ ಅವರು 11 ಮತಗಳನ್ನುಗಳಿಸಿದರು. ಅಗ್ಯತಕ್ಕಿಂತ ಹೆಚ್ಚು ಮತಗಳನ್ನು ಗಳಿಸಿದ ರತ್ನಮ್ಮ ಗೆಲುವು ಸಾಧಿಸಿದರು.