ಉಸಿರುಗಟ್ಟಿ ಮೂವರು ಕಾರ್ಮಿಕರ ದುರ್ಮರಣ
Team Udayavani, Jul 12, 2018, 7:05 AM IST
ಕನಕಪುರ: ಬಾಯ್ಲರ್ ಸ್ವಚ್ಚಗೊಳಿಸಲು ಇಳಿದಿದ್ದ ಮೂವರು ಕಾರ್ಮಿಕರು ಉಸಿರುಗಟ್ಟಿ ಸಾವಿಗೀಡಾಗಿರುವ ಘಟನೆ ತಾಲೂಕಿನ ಹಾರೋಹಳ್ಳಿ ಕೈಗಾರಿಕಾ ಪ್ರದೇಶದ ಆಂಥ್ಯಾಮ್ ಬಯೋಸೈನ್ ಕಾರ್ಖಾನೆಯಲ್ಲಿ ಸಂಭವಿಸಿದೆ.
ಕನಕಪುರದ ಗೊಟ್ಟಿಗೆಹಳ್ಳಿ ನಿವಾಸಿ ಮಹೇಶ್, ಕೋಲಾರ ಮೂಲದ ಲೋಕೇಶ, ತಮಿಳುನಾಡಿನ ಶರವಣ ಮೃತ ಕಾರ್ಮಿಕರು. ತಮಿಳುನಾಡು ಮೂಲದ ಹರಿಲಿಘನ್ ಅಸ್ವಸ್ಥ ಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರೆಲ್ಲ ನಿರ್ವ ಹಣಾ ವಿಭಾಗದ ಸಿಬ್ಬಂದಿ ಎಂದು ಹೇಳಲಾಗಿದೆ. ಆಂಥ್ಯಾಮ್ ಬಯೋಸೈನ್ ಕಾರ್ಖಾ ನೆಯು ಔಷಧಿ ತಯಾರಿಸುತ್ತದೆ. ಕಾರ್ಖಾನೆಯಲ್ಲಿದ್ದ ಬಾಯ್ಲರ್ನ ಸ್ವಚ್ಚತೆಗೆಂದು ಮಂಗಳವಾರ ತಡರಾತ್ರಿ 4 ಮಂದಿ ಕಾರ್ಮಿಕರು ಇಳಿದಿದ್ದಾರೆ.
ಕೆಲ ಹೊತ್ತಿನಲ್ಲಿಯೇ ಆಮ್ಲಜನಕದಕೊರತೆಯಿಂದಾಗಿ ಕಾರ್ಮಿಕರು ಅಸ್ವಸ್ಥಗೊಂಡಿದ್ದಾರೆ. ಇದನ್ನು ಗಮನಿಸಿದ
ಇತರೆ ಕಾರ್ಮಿಕರು ರಕ್ಷಣೆಗೆ ಮುಂದಾಗಿದ್ದಾರೆ. ಆದರೆ, ಅಷ್ಟೊತ್ತಿಗಾಗಲೇ ಮೂವರು ಮೃತಪಟ್ಟಿದ್ದರು. ಗಂಭೀರವಾಗಿ ಅಸ್ವಸ್ಥಗೊಂಡಿದ್ದ ಮತ್ತೂಬ್ಬ ಕಾರ್ಮಿಕನನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮುಂಜಾಗ್ರತಾ ಕ್ರಮ ಕೈಗೊಳ್ಳದಿರುವುದು ಘಟನೆಗೆ ಕಾರಣ ಎನ್ನಲಾಗಿದೆ.
ಹಾರೋಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಾರೋಹಳ್ಳಿ ಕೈಗಾರಿಕಾ ಪ್ರದೇಶದಲ್ಲಿರುವ ಕಾರ್ಖಾನೆಗಳಲ್ಲಿ ಕಾರ್ಮಿಕರು ಸಾವಿಗೀಡಾಗುತ್ತಿರುವ ಘಟನೆಗಳು ಪದೇ ಪದೇ ಸಂಭವಿಸುತ್ತಿವೆ. ಆರು ತಿಂಗಳ ಹಿಂದೆ ಇಬ್ಬರು ಕಾರ್ಮಿಕರು ಮೃತಪಟ್ಟಿದ್ದರು ಎಂದು ಕಾರ್ಮಿಕರು ನೋವು ತೋಡಿಕೊಂಡಿದ್ದಾರೆ.