ರಾಷ್ಟ್ರೀಯ ಪಕ್ಷಗಳ ವಿರುದ್ಧ ನಮ್ಮ ಹೋರಾಟ; ಚುನಾವಣೆಗೆ ನಾವೂ ಸಿದ್ದ: ಕುಮಾರಸ್ವಾಮಿ
Team Udayavani, Mar 30, 2022, 9:57 AM IST
ರಾಮನಗರ: ಕಾಂಗ್ರೆಸ್ ಮತ್ತು ಜೆಡಿಎಸ್ ಎರಡೂ ರಾಷ್ಟ್ರೀಯ ಪಕ್ಷಗಳು ರಾಜ್ಯಕ್ಕೆ ಮಾಡಿರುವ ಅನ್ಯಾಯದ ಬಗ್ಗೆ ನನ್ನ ಹೋರಾಟ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ರಾಮನಗರದಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ರಾಜ್ಯಕ್ಕೆ ಅಮಿತ್ ಶಾ – ರಾಹುಲ್ ಗಾಂಧಿ ಭೇಟಿ ವಿಚಾರದಲ್ಲಿ ಅವರು ಹೀಗೆ ಪ್ರತಿಕ್ರಿಯಿಸಿದರು.
ಕರ್ನಾಟಕದಲ್ಲಿ ಚುನಾವಣಾ ವರ್ಷ ಪ್ರಾರಂಭವಾಗಿದೆ. ಪ್ರತಿದಿನ ರಾಷ್ಟ್ರೀಯ ಪಕ್ಷಗಳ ನಾಯಕರು ಲಗ್ಗೆಯಿಟ್ಟು ಮತ ಪಡೆಯಲು ಪ್ರಾರಂಭ ಮಾಡುತ್ತಾರೆ ಎಂದರು.
ಮೊದಲು ನಮ್ಮ ರಾಜ್ಯದ ನದಿ ನೀರಿನ ಸಮಸ್ಯೆ ಬಗೆಹರಿಸಿಕೊಂಡು ಬಂದು ಮತ ಕೇಳಲಿ. ಆ ನಿಟ್ಟಿನಲ್ಲಿ ರಾಷ್ಟ್ರೀಯ ಪಕ್ಷಗಳ ನಾಯಕರು ಕೆಲಸ ಮಾಡಲಿ ಎಂದರು.
ಇದನ್ನೂ ಓದಿ:ಮತ್ತೆ ಏರಿಕೆ ಕಂಡ ತೈಲ ಬೆಲೆ; 9 ದಿನದಲ್ಲಿ 5.60 ರೂ. ಏರಿಕೆ ಕಂಡ ಪೆಟ್ರೋಲ್
ವಿಧಾನಸಭೆಯಲ್ಲಿ ಹಲಾಲ್ ವಿಚಾರ ಚರ್ಚೆಗೆ ಬಂದಿಲ್ಲ, ಬಂದರೆ ಚರ್ಚೆ ಮಾಡಬಹುದು. ಇವತ್ತು ಚುನಾವಣಾ ಸುಧಾರಣಾ ಬಗ್ಗೆ ಚರ್ಚೆಯಿದೆ. ಅಲ್ಲಿ ಅವಕಾಶ ಸಿಕ್ಕರೆ ಸಮಾಜದಲ್ಲಿ ಶಾಂತಿ ತರುವ ವಿಚಾರವಾಗಿ ಸಲಹೆ ಕೊಡುತ್ತೇನೆ ಎಂದರು.
ಚುನಾವಣೆಗೆ ನಾವು ಸಿದ್ದ: ಗುಜರಾತ್ ಜೊತೆಗೆ ಕರ್ನಾಟಕದಲ್ಲಿಯೂ ಚುನಾವಣೆ ನಡೆಯಬಹುದು ಎಂದು ಅಭಿಪ್ರಾಯಪಟ್ಟ ಎಚ್.ಡಿ.ಕೆ, ಇಲ್ಲವೇ ಮುಂದಿನ ಏಪ್ರಿಲ್ ನಲ್ಲಿಯೂ ನಡೆಯಬಹುದು, ಚುನಾವಣೆಗೆ ನಾವು ಸಿದ್ಧರಿದ್ದೇವೆ ಎಂದು ತಿಳಿಸಿದರು.
ಮುಂದಿನ 10 ನೇ ತಾರೀಖಿನಿಂದ ಜೆಡಿಎಸ್ ಪಕ್ಷದ ಸಂಘಟನೆ ಪ್ರಾರಂಭ ಆಗಲಿದೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ನಮ್ಮದು ಅಕ್ರಮ ಆಸ್ತಿ ಅಲ್ಲ: ನಾವು ಅಕ್ರಮ ಮಾಡಿಲ್ಲ, ಅಕ್ರಮವಾಗಿ ಅಸ್ತಿ ಸಂಪಾದಿಸಿಲ್ಲ. ನಾವೇಕೆ ನೊಟೀಸ್ ಗೆ ತಲೆಕೆಡಿಸಿಕೊಳ್ಳಬೇಕು ಎಂದರು. ಇಡಿ ಮತ್ತು ಸಿಬಿಐ ಬಿಜೆಪಿಯ ಅಂಗ ಪಕ್ಷಗಳು. ನಮ್ಮ ಕುಟುಂಬಕ್ಕೆ ಏನು ಮಾಡಲು ಸಾಧ್ಯವಿಲ್ಲ ಎಂದು ವಾಗ್ದಾಳಿ ನಡೆಸಿದರು.