ಬಸ್ ಟಾಪ್ ಮೇಲೆ ವಿದ್ಯಾರ್ಥಿಗಳ ಪ್ರಯಾಣ
ನಿಸರಾಣಿ-ಬೆಳೆಯೂರು ಮಾರ್ಗದಲ್ಲಿ ಬಸ್ ಸಂಚಾರದ ದುಸ್ಥಿತಿ
Team Udayavani, Jun 8, 2019, 1:00 PM IST
ಸಾಗರ: ಗ್ರಾಮಾಂತರದ ವಿದ್ಯಾರ್ಥಿಗಳು ಬಸ್ ಸೌಕರ್ಯವಿಲ್ಲದೆ ಬಸ್ಸಿನ ಟಾಪ್ ಮೇಲೆ ಪ್ರಯಾಣಿಸುತ್ತಿರುವುದು.
ಸಾಗರ: ತಾಲೂಕಿನ ಗ್ರಾಮಾಂತರ ಭಾಗದ ವಿದ್ಯಾರ್ಥಿಗಳು ಸೂಕ್ತ ಬಸ್ ಸೌಕರ್ಯವಿಲ್ಲದೆ ಬಸ್ಸಿನ ಮೇಲೆ ಕುಳಿತು ಪ್ರಯಾಣಿಸುವ ದುಃಸ್ಥಿತಿ ಇದೆ. ನಿಸರಾಣಿಯಿಂದ ಬೆಳೆಯೂರು ಮಾರ್ಗವಾಗಿ ಸಾಗರಕ್ಕೆ ಬರುವ ಬಸ್ ಈ ಭಾಗದ ವಿದ್ಯಾರ್ಥಿಗಳಿಗೆ ಏಕೈಕ್ ಬಸ್ ಸೇವೆಯಾಗಿದ್ದು, ಗ್ರಾಮೀಣ ವಿದ್ಯಾರ್ಥಿಗಳು ಜೀವ ಕೈಯಲ್ಲಿ ಹಿಡಿದುಕೊಂಡು ಪ್ರಯಾಣಿಸುವ ಸ್ಥಿತಿ ಇದೆ.
ಸಾಗರದಿಂದ ಬೆಳಗ್ಗೆ 8ಕ್ಕೆ ಹೊರಟು ನಿಸರಾಣಿ ತಲುಪಿ, ಮರಳಿ 9ಕ್ಕೆ ಬೇಳೂರು, ಮಾಲ್ವೆ, ಹಂದಿಗೋಡು, ಸುಳಗೋಡು, ಈಳಿ, ಸೂರನಗದ್ದೆ ಮಾರ್ಗವಾಗಿ ಸಾಗರಕ್ಕೆ ಬರುತ್ತದೆ. ಈ ಹಿಂದೆ ಮತ್ತೂಂದು ಖಾಸಗಿ ಬಸ್ ಹಿಂದಿನ ರಾತ್ರಿಯೇ ಬೆಳೆಯೂರಿನಲ್ಲಿ ಹಾಲ್r ಆಗಿರುತ್ತಿತ್ತು. ಮಾರನೆಯ ದಿನ ಬೆಳಗ್ಗೆ 8-30ಕ್ಕೆ ಬೆಳೆಯೂರಿನಿಂದ ಸಾಗರಕ್ಕೆ ಹೊರಡುತ್ತಿತ್ತು. ಆ ಬಸ್ ಸ್ಥಗಿತವಾದುದರಿಂದ ಉಳಿದ ಏಕೈಕ ಬಸ್ ಪ್ರಯಾಣಿಕರ ಒತ್ತಡ ಅನುಭವಿಸುವಂತಾಗಿದೆ. ಬೆಳಗಿನ ಸಮಯದಲ್ಲಿ ಪೇಟೆ ಕೆಲಸಕ್ಕೆ ಬರುವವರು, ಉದ್ಯೋಗಿಗಳು, ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ. ಅದರಲ್ಲಿಯೂ ಕೆಲವು ಮಹಿಳೆಯರು ಉದ್ಯೋಗದ ನಿಮಿತ್ಯ ನಿತ್ಯ ಸಂಚರಿಸುತ್ತಿದ್ದು, ಬಸ್ ಪ್ರಯಾಣ ಯಾತನಾಮಯವಾಗುತ್ತಿದೆ.
ಸಾಗರ ತಲುಪಿದ ನಂತರ ಇಲ್ಲಿನ ಜೆ.ಸಿ. ರಸ್ತೆಯಲ್ಲಿನ ಪೋಸ್ಟ್ ಆಫೀಸ್ ಕಚೇರಿ ವೃತ್ತದಲ್ಲಿ ಖಾಸಗಿ ಬಸ್ನ ಮೇಲೆ ಕುಳಿತ ಶಾಲಾ-ಕಾಲೇಜು ವಿದ್ಯಾರ್ಥಿಗಳು ಬಸ್ನಿಂದ ಇಳಿಯುವ ದೃಶ್ಯ ಕಂಡುಬರುತ್ತದೆ. ನಗರ ಪೊಲೀಸ್ ಠಾಣೆ ಇರುವ ರಸ್ತೆಯಲ್ಲಿಯೇ ಈ ದೃಶ್ಯ ಕಂಡು ಬಂದಿದ್ದು, ಸಾರ್ವಜನಿಕರು ಆಶ್ಚರ್ಯ ವಕ್ತಪಡಿಸಿದ್ದಾರೆ. ಬಸ್ನ ಟಾಪ್ನಲ್ಲಿ ಕುಳಿತು ಕುಳಿತು ವಿದ್ಯಾರ್ಥಿಗಳು ಪ್ರಯಾಣಿಸುವುದು ಅಪಾಯಕಾರಿಯಾಗಿದ್ದು, ಇಲಾಖೆ ಗಮನಹರಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಟಾಪ್ ಮೇಲೆ ವಿದ್ಯಾರ್ಥಿಗಳು ಪ್ರಯಾಣಿಸುತ್ತಿದ್ದ ವಿಡಿಯೋವನ್ನು ಬೆಳೆಯೂರಿನ ಪ್ರವೀಣ್ ಎಂಬುವವರು ಚಿತ್ರೀಕರಿಸಿ ಜಾಲತಾಣಗಳಲ್ಲಿ, ವಾಟ್ಸ್ಆ್ಯಪ್ನಲ್ಲಿ ಹರಿಬಿಟ್ಟಿದ್ದಾರೆ. ಈ ಬಗ್ಗೆ ಸಂಬಂಧಪಟ್ಟವರು ಕ್ರಮ ತೆಗೆದುಕೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಕೇವಲ ಬೇಳೂರು, ಹಂದಿಗೋಡು ಭಾಗದ ವಿದ್ಯಾರ್ಥಿಗಳಿಗೆ ಮಾತ್ರ ಬಸ್ ಸೌಕರ್ಯದ ಸಮಸ್ಯೆ ಬಾಧಿಸುತ್ತಿಲ್ಲ. ಅದರಂತೆ, ಮಾಸೂರು, ಹಾರೆಗೊಪ್ಪ ಭಾಗದಲ್ಲಿ, ಹಂಸಗಾರು, ಖಂಡಿಕಾ, ಗುಡ್ಡೆದಿಂಬ, ಕಲ್ಮಕ್ಕಿ ಭಾಗದ ವಿದ್ಯಾರ್ಥಿಗಳು ಸಹ ಸಂಕಟ ಪಡುತ್ತಿದ್ದಾರೆ.