ಡ್ರೋಣ್ ಕ್ಯಾಮೆರಾ ಕಣ್ಣಲ್ಲಿ ತಾಳಗುಪ್ಪದ ರಸ್ತೆ ವೈರಲ್
Team Udayavani, Oct 5, 2019, 6:19 PM IST
ಸಾಗರ: ತಾಲೂಕಿನ ಎನ್ಎಚ್ 206ರಲ್ಲಿ ಸಾಗರ-ಜೋಗ ರಸ್ತೆಯಲ್ಲಿ ತಾಳಗುಪ್ಪ ಸಮೀಪದ ಗದ್ದೆಗಳ ಹಸಿರಿನ ನಡುವೆ ಹಾದುಹೋದ ಡಾಂಬರ್ ರಸ್ತೆಯ ವೈಮಾನಿಕ ನೋಟ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಡ್ರೋಣ್ ಮೂಲಕ ತೆಗೆಯಲಾದ ಈ ಫೋಟೋ ಫೇಸ್ಬುಕ್, ವಾಟ್ಸ್ಆ್ಯಪ್ ಸೇರಿದಂತೆ ಮೊದಲಾದ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಸಾಗರದಿಂದ ತಾಳಗುಪ್ಪಕ್ಕೆ ಹೋಗುವ ಮಾರ್ಗದಲ್ಲಿ ಬಲೆಗಾರಿನಿಂದ ಮರತ್ತೂರು ಗ್ರಾಮದವರೆಗೆ ಸುಮಾರು 1.5 ಕಿಮೀ ದೂರದ ದಾರಿ ನೇರವಾದುದು. ವಾಹನಗಳ ಅಪಘಾತ, ಸಾವುಗಳಿಂದ ಈ ಸ್ಥಳ ಈವರೆಗೆ ಹೆಚ್ಚು ಗಮನ ಸೆಳೆಯುತ್ತಿತ್ತು.
ಪ್ರತಿ ಮಳೆಗಾಲದ ಸಮಯದಲ್ಲಿ ವರದಾ ನದಿಯಲ್ಲಿ ನೆರೆ ಸೃಷ್ಟಿಯಾಗಿ ಸಾವಿರಾರು ಎಕರೆ ಭತ್ತದ ಗದ್ದೆಗಳು ಜಲಾವೃತವಾಗಿ ರೈತರು ಸಂಕಷ್ಟಕ್ಕೊಳಗಾಗುವುದು ಕೂಡ ಇದೇ ಪ್ರದೇಶದಲ್ಲಿ ನಡೆಯುತ್ತದೆ. ಇದೇ ಸ್ಥಳದಲ್ಲಿ ಮುಂಗಾರು ಮಳೆ ಚಲನಚಿತ್ರದ ಹಾಡಿನ ದೃಶ್ಯಗಳನ್ನು ಜೋಕಾಲಿ ಕಟ್ಟಿ ನಿರ್ದೇಶಕ ಯೋಗರಾಜ್ ಭಟ್ ಚಿತ್ರಿಸಿದ್ದರು. ಈ ಬಾರಿ ಡ್ರೋಣ್ ಹಸಿರಿನ ರಮಣೀಯ ದೃಶ್ಯವನ್ನು ಸೆರೆ ಹಿಡಿದು ಜನರಿಗೆ ತಲುಪಿಸಿದೆ.