ಜಿಇ ಕಾರ್ಖಾನೆ ಆರಂಭಿಸುವವರೆಗೆ ಹೋರಾಟ: ಮಾನ್ಪಡೆ
ಸಿಎಂ ಬಳಿ ನಿಯೋಗ ಕೊಂಡೊಯ್ಯಲು ತೀರ್ಮಾನ
Team Udayavani, Aug 31, 2019, 2:41 PM IST
ಶಹಾಬಾದ: ಜಿಇ ಕಾರ್ಖಾನೆ ಪುನಃ ಪ್ರಾರಂಭಿಸಬೇಕು ಎಂದು ಆಗ್ರಹಿಸಿ ಕಾರ್ಖಾನೆ ಕಾರ್ಮಿಕರು ಆರಂಭಿಸಿರುವ ಧರಣಿಗೆ ರೈತ ಮುಖಂಡ ಮಾರುತಿ ಮಾನ್ಪಡೆ ಬೆಂಬಲ ಸೂಚಿಸಿದರು.
ಶಹಾಬಾದ: ನಗರದ ಜಿಇ ಕಾರ್ಖಾನೆ ಆಡಳಿತ ಮಂಡಳಿ ಕಾರ್ಮಿಕ ಇಲಾಖೆಯ ಕಾರ್ಮಿಕ ಕಾರ್ಯದರ್ಶಿಗೆ ತಪ್ಪು ಮಾಹಿತಿ ನೀಡಿ ಕಾರ್ಖಾನೆ ಮುಚ್ಚಿದ್ದಾರೆ. ಆದ್ದರಿಂದ ಕಾರ್ಖಾನೆ ಆರಂಭಿಸುವ ವರೆಗೆ ನಮ್ಮ ಹೋರಾಟ ನಿರಂತರವಾಗಿ ನಡೆಯುತ್ತದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಮಾರುತಿ ಮಾನ್ಪಡೆ ಹೇಳಿದರು.
ಜಿಇ ಕಾರ್ಖಾನೆ ಪುನಃ ಪ್ರಾರಂಭಿಸಬೇಕು. ಕಾರ್ಮಿಕರ ಸಮಸ್ಯೆ ಶೀಘ್ರವೇ ಇತ್ಯರ್ಥಪಡಿಸಬೇಕೆಂದು ಆಗ್ರಹಿಸಿ ಕಳೆದ ಐದು ದಿನಗಳಿಂದ ಕಾರ್ಮಿಕರು ನಡೆಸುತ್ತಿರುವ ಧರಣಿ ಸತ್ಯಾಗ್ರಹಕ್ಕೆ ಬೆಂಬಲಿಸಿ ಅವರು ಮಾತನಾಡಿದರು.
ಕಾರ್ಖಾನೆಯಲ್ಲಿ ನೂರಕ್ಕಿಂತ ಕಡಿಮೆ ಕಾರ್ಮಿಕರು ಇದ್ದರೆ, ಕಾರ್ಖಾನೆ ಮುಚ್ಚುವ ಅಧಿಕಾರ ಅವರಿಗಿದೆ. ಆದರೆ ಕಾರ್ಖಾನೆ ಮುಚ್ಚುವುದಕ್ಕಿಂತ ಮುಂಚೆ ನೂರಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಮಿಕರು ಇದ್ದರು. ಹೀಗಿದ್ದರೂ ಕಾರ್ಮಿಕ ಇಲಾಖೆ ಕಾರ್ಯದರ್ಶಿಗಳಿಗೆ ಕಾರ್ಖಾನೆ ಅಧಿಕಾರಿ ಡಿಸೋಜಾ ಸುಳ್ಳು ಮಾಹಿತಿ ನೀಡಿದ್ದರು. ಹೀಗಾಗಿ ಕಾರ್ಮಿಕರ ಹೇಳಿಕೆ ಪಡೆಯದೇ 10 ಮೇ 2018 ರಂದು ಕಾರ್ಖಾನೆ ಮುಚ್ಚಿರುವುದು ಸರಿಯಿದೆ ಎಂದು ಆದೇಶ ನೀಡಿದ್ದಾರೆ ಎಂದರು.
ಆಗಿನ ಸಂದರ್ಭದಲ್ಲಿ ರಾಜಕೀಯ ಪಕ್ಷಗಳು ಕಾರ್ಖಾನೆಯನ್ನು ಮುಚ್ಚದಿರುವಂತೆ ಕ್ರಮ ಕೈಗೊಳ್ಳಬಹುದಿತ್ತು. ಆದರೆ ಸರ್ಕಾರ ಮತ್ತು ತಮ್ಮ ಅಸ್ತಿತ್ವ ಕಾಪಾಡಿಕೊಳ್ಳಲು ಜನಪ್ರತಿನಿಧಿಗಳು ಹೆಣಗಾಡುತ್ತಿದ್ದರು. ಹೀಗಾಗಿ ಕಾರ್ಮಿಕರ ಮೇಲೆ ಆಗುತ್ತಿರುವ ಶೋಷಣೆ ಬಗ್ಗೆ ಅವರು ಗಮನಹರಿಸಲಿಲ್ಲ. ಈಗಾಗಲೇ ಮೂರು ವಿಚಾರಣೆ ನಡೆದಿದೆ. ವಿಚಾರಣೆ ಸಂದರ್ಭದಲ್ಲಿ ಕಾರ್ಖಾನೆ ಮುಚ್ಚಿ, ಬೇರೆಯವರಿಗೂ ಮಾರುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಖರೀದಿದಾರರ ಹೆಸರು ಹೇಳದೇ ಸಾವಿರಾರು ಕೋಟಿ ರೂ. ಬೆಲೆಬಾಳುವ ಕಾರ್ಖಾನೆಯನ್ನು ಕೇವಲ 65 ಕೋಟಿ ರೂ. ಮಾರುತ್ತಿದ್ದೇವೆ ಎಂದು ಹೇಳಲಾಗುತ್ತಿದೆ. ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಕಾರ್ಖಾನೆ ಮಾರಾಟ ಮಾಡಿ, ಬೇನಾಮಿ ವರ್ಗಾವಣೆ ಮಾಡಲು ಕಾರ್ಖಾನೆಯವರು ಸಂಚು ರೂಪಿಸಿದ್ದಾರೆ ಎಂದು ಆರೋಪಿಸಿದರು.
ಈಗಾಗಲೇ ಶಾಸಕ ಬಸವರಾಜ ಮತ್ತಿಮಡು ಜತೆ ಮಾತನಾಡಿದ್ದೇನೆ. ಅವರು ಮುಖ್ಯಮಂತ್ರಿಗಳ ಗಮನಕ್ಕೆ ತಂದು ಚರ್ಚಿಸೋಣ ಎಂದಿದ್ದಾರೆ. ಅದಕ್ಕಾಗಿ ಮುಖ್ಯಮಂತ್ರಿಗಳ ಜತೆ ನಿಯೋಗವನ್ನು ಬೆಂಗಳೂರಿಗೆ ಕರೆದೊಯ್ಯಲು ತಯಾರಿದ್ದೇವೆ. ದಿನಾಂಕ ನಿಗದಿಪಡಿಸಿ ಎಂದು ಹೇಳಿದ್ದೇನೆ ಎಂದರು.
ಕಾರ್ಮಿಕ ಮುಖಂಡ ಅಣ್ಣಾರಾವ್ ಎಂ.ಹಳ್ಳಿ, ದಾವೂದ್ ಹುಸೇನ್, ಶೇಕಮ್ಮ ಕುರಿ, ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಅಶೋಕ ಮ್ಯಾಗೇರಿ, ಮಲ್ಲಣ್ಣ ಹೊನಗುಂಟಾ, ಅಶೋಕ ಪೋತನಕರ್,ಲಕ್ಷ್ಮಣ ಜಾಧವ, ಮೊಹಮ್ಮದ್ ಹನೀಫ್,ನಿಂಗಣ್ಣ ಕಾರೋಳ್ಳಿ, ಅಬ್ದುಲ್ ಅಖೀಲ್, ಅಬ್ದುಲ್ ಸತ್ತಾರ, ಶರಣು ಪಾಟೀಲ, ಪ್ರಭು ಪೂಜಾರಿ, ರೈತ ಸಂಘದ ಶಾಂತಪ್ಪ ಪಾಟೀಲ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್
Kalaburagi; ಸತ್ತಾಗ ಮಣ್ಣಿಗಾದರೂ ಬನ್ನಿ: ಭಾವನಾತ್ಮಕವಾಗಿ ಮತಯಾಚಿಸಿದ ಖರ್ಗೆ
Kalaburagi; ಕಾರುಗಳ ಮುಖಾಮುಖಿ ಢಿಕ್ಕಿ: ಮಠಾಧೀಶ ವಿಧಿವಶ
Lok Sabha elections ನಂತರ ರಾಜ್ಯ ವಿಧಾನಸಭೆ ವಿಸರ್ಜನೆಯಾದರೂ ಆಶ್ಚರ್ಯವಿಲ್ಲ: ಯತ್ನಾಳ್
Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ ಸಾವು