ಸಿಗಂದೂರು ದೇವಾಲಯ ವಿಚಾರದಲ್ಲಿ ಡಿಸಿ ಹಾಗೂ ಸರ್ಕಾರ ತಲೆಹಾಕುವುದು ಸರಿಯಲ್ಲ: ಬೇಳೂರು
Team Udayavani, Nov 3, 2020, 1:13 PM IST
ಶಿವಮೊಗ್ಗ: ಸಿಗಂದೂರು ದೇವಾಲಯ ಗೊಂದಲವಿದ್ದರೆ ರಾಮಪ್ಪ ಹಾಗೂ ಶೇಷಗಿರಿ ಭಟ್ ರು ಬಗೆಹರಿಸಿ ಕೊಳ್ಳುತ್ತಾರೆ. ಮಧ್ಯದಲ್ಲಿ ಮೂರನೇ ವ್ಯಕ್ತಿಯಾಗಿ ಜಿಲ್ಲಾಧಿಕಾರಿ ಹಾಗೂ ಸರ್ಕಾರ ತಲೆಹಾಕುವುದು ಸರಿಯಲ್ಲ ಎಂದು ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿದರು.
ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಜಿಲ್ಲಾಧಿಕಾರಿಗಳು ಒಂದು ಪಕ್ಷದ ಏಜೆಂಟ್ ರೀತಿಯಲ್ಲಿ ವರ್ತನೆ ಮಾಡುತ್ತಿದ್ದಾರೆ. ಸಿಗಂದೂರು ದೇವಾಲಯದಲ್ಲಿ ಅರಣ್ಯ ಒತ್ತುವರಿ ಮಾಡಲಾಗಿದೆ ಎಂದು ಅವರು ಹೇಳುತ್ತಿದ್ದಾರೆ. ಸರಿಯಾಗಿ ದಾಖಲೆ ತೆಗೆದರೆ ಜಿಲ್ಲಾಧಿಕಾರಿಗಳ ಕಚೇರಿ ಕೂಡ ಅರಣ್ಯ ವ್ಯಾಪ್ತಿಯಲ್ಲೇ ಬರುತ್ತದೆ ಎಂದು ಆರೋಪಿಸಿದರು.
ಸಿಗಂದೂರು ದೇವಾಲಯ ಕಳೆದ ಒಂದುವರೆ ತಿಂಗಳು ಸಾಕಷ್ಟು ಚರ್ಚೆಯಲ್ಲಿದೆ. ಸಾಗರದ ಕೋರ್ಟ್ ನೇತೃತ್ವದಲ್ಲಿ ಸಂಧಾನ ಸಭೆ ನಡೆಸಿ, ಗೊಂದಲ ಬಗೆಹರಿಸಿತ್ತು. ಅದರೆ ಜಿಲ್ಲಾಡಳಿತ ಹಾಗೂ ಸರ್ಕಾರ ಯಾವುದೇ ನೊಟೀಸ್ ನೀಡದೆ ಈಗ ಸಮಿತಿ ಮಾಡಿದೆ. ಒಂದು ಖಾಸಗಿ ಟ್ರಸ್ಟ್ ನ ಒಳಗೆ ರಾಜಕೀಯ ಉದ್ದೇಶದಿಂದ ಕೈಹಾಕುವ ಕೆಲಸ ಮಾಡಲಾಗಿದೆ ಎಂದರು.
ಈ ಘಟನೆ ನಡೆದಾಗ ಜಿಲ್ಲೆಯ ಸಾಗರದ ಶಾಸಕರು, ಸಂಸದರು ಎಲ್ಲಿ ಹೋಗಿದ್ದರು? ಜನಪ್ರತಿನಿಧಿಗಳಾದ ಇವರಿಗೆ ಒಂದು ಸಣ್ಣ ಘಟನೆ ನಡೆದಾಗ ಬಗೆಹರಿಸಲು ಸಾಧ್ಯವಿಲ್ವಾ ಎಂದು ಪ್ರಶ್ನಿಸಿದರು.
ಇದನ್ನೂ ಓದಿ:ಉ.ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಭೇಟಿಯಾದ ಪೇಜಾವರ ಶ್ರೀ
ರಾಜ್ಯದ ಯಾವುದೇ ದೇವಸ್ಥಾನದಲ್ಲಿ ಗಲಾಟೆಗಳೇ ನಡೆದಿಲ್ಲವೇ? ಗೋಕರ್ಣ, ಉಡುಪಿ ಮಠ ಸೇರಿದಂತೆ ಎಲ್ಲಾ ಕಡೆನೂ ಗಲಾಟೆಗಳಾಗಿದ್ದವು. ಆ ಸಮಯದಲ್ಲಿ ಎಲ್ಲಿ ಸಮಿತಿಗಳು ರಚನೆಯಾಗಿವೆ ಎನ್ನುವುದನ್ನು ಸ್ಪಷ್ಟಪಡಿಸಿ. ಅದರೆ ಸಿಗಂದೂರು ವಿಚಾರದಲ್ಲಿ ಮಾತ್ರ ಜಾತಿಯ ವಿಚಾರ ಎಳೆದು ತರಲಾಗುತ್ತಿದೆ ಎಂದು ಬೇಳೂರು ಆರೋಪಿಸಿದರು.
ಈಡಿಗ ಸಮೂದಾಯದ ಹೆಸರಿನಲ್ಲಿ ಕೋಟ ಶ್ರೀನಿವಾಸ್ ಪೂಜಾರಿ ಸಚಿವರಾಗಿದ್ದಾರೆ. ಮಾತನಾಡಿ ನಾನು ಸಮಸ್ಯೆ ಬಗೆಹರಿಸುತ್ತೇನೆ ಎಂದು ಮುಜರಾಯಿ ಸಚಿವರು ಹೇಳಬಹುದಿತ್ತು. ಆದರೆ ಈವರೆಗೆ ಒಂದು ಮಾತನಾಡಿಲ್ಲ. ಸಾಗರ ಶಾಸಕರು ಏನು ಸತ್ತು ಹೋಗಿದ್ದಾರಾ? ಮಜಾ ಮಾಡಲು ಹೋಗಿದ್ದಾರಾ? ಒಂದು ಸಣ್ಣ ಸಮಸ್ಯೆ ಬಗೆಹರಿಸಲು ಶಾಸಕರಾದವರಿಗೆ ಸಾಧ್ಯವಿಲ್ಲವೇ ಎಂದು ಬೇಳೂರು ಪ್ರಶ್ನೆ ಮಾಡಿದರು.
ಸಿಗಂದೂರು ಉಳಿಸಲು ಹೋರಾಟ ಮಾಡಲು ಸಿದ್ಧತೆ ನಡೆಸಿದ್ದೆವೆ. ಎಲ್ಲಾ ಸಮುದಾಯದವರು ಸೇರಿಸಿಕೊಂಡು ದೇವಸ್ಥಾನ ಉಳಿಸಲು ಬೃಹತ್ ಹೋರಾಟ ಮಾಡುತ್ತೇವೆ ಎಂದು ಬೇಳೂರು ಗೋಪಾಲಕೃಷ್ಣ ಹೇಳಿದರು.