ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಅವಘಡ: ಓರ್ವ ಸಾವು, 16 ಮಂದಿಗೆ ಗಾಯ
Team Udayavani, Dec 18, 2018, 6:00 AM IST
ಸೊರಬ/ಶಿವಮೊಗ್ಗ: ಜಿಲ್ಲೆಯ ಸೊರಬ ತಾಲೂಕಿನ ಕುಪ್ಪಗಡ್ಡೆಯಲ್ಲಿ ನಡೆದ ಹೋರಿ ಬೆದರಿಸುವ ಸ್ಪರ್ಧೆ ವೇಳೆ ಭಾರೀ ಅವಘಡಗಳು
ಸಂಭವಿಸಿವೆ. ಸ್ಪರ್ಧೆ ವೀಕ್ಷಿಸಲೆಂದು ಮನೆಯೊಂದರ ಮೇಲೆ ನಿಂತಿದ್ದ ವೇಳೆ ಸಜ್ಜಾ ಕುಸಿದುಬಿದ್ದು ವ್ಯಕ್ತಿಯೊಬ್ಬ ಮೃತಪಟ್ಟು 16ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಅಲ್ಲದೆ ಹೋರಿ ಓಟದ ವೇಳೆ ಗೂಳಿ ತಿವಿದು ವ್ಯಕ್ತಿಯೋರ್ವ ಗಾಯಗೊಂಡಿದ್ದಾನೆ. ನೇರಲಿಗಿ ಗ್ರಾಮದ ಗದಿಗೆಪ್ಪ (65) ಮೃತ ವ್ಯಕ್ತಿ. ಹೋರಿ ಬೆದರಿಸುವ ಸ್ಪರ್ಧೆ ವೀಕ್ಷಿಸಲೆಂದು ಮನೆಯೊಂದರ ಸಜ್ಜಾ ಹಾಗೂ ಅದರ ಪಕ್ಕದ ಪ್ಲಾಸ್ಟಿಕ್ ಶೀಟ್ ಮೇಲೆ ಹದಿನೈದಕ್ಕೂ ಹೆಚ್ಚು ಮಂದಿ ಕುಳಿತಿದ್ದಾರೆ. ಅಧಿಕ ಭಾರದಿಂದ ಸಜ್ಜಾ ಹಾಗೂ ಪ್ಲಾಸ್ಟಿಕ್ ಶೀಟ್ ಕುಸಿದು ಬಿದ್ದಿದೆ. ಇದರಿಂದ ಸಜ್ಜಾ ಕೆಳಗೆ ನಿಂತಿದ್ದ ಗದಿಗೆಪ್ಪ ಗಂಭಿರವಾಗಿ ಗಾಯಗೊಂಡಿದ್ದಾರೆ. ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ದು
ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಿಸದೆ ಗದಿಗೆಪ್ಪ ಮೃತಪಟ್ಟಿದ್ದಾರೆ. ಇನ್ನು ಅವಘಡದಲ್ಲಿ ಕುಪ್ಪಗಡ್ಡೆ ಗ್ರಾಮದ ಬಸಮ್ಮ ಎಂಬ ವೃದ್ದೆಯೂ ಗಂಭೀರವಾಗಿ ಗಾಯಗೊಂಡಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ. ಅಲ್ಲದೆ ಮೂವರ ಕಾಲುಗಳು ಮುರಿದು ಹೋಗಿವೆ. ಹದಿನಾಲ್ಕು ಮಂದಿ ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಆನವಟ್ಟಿ
ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗಂಭೀರ ಗಾಯ: ಈ ಮಧ್ಯೆ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಹೋರಿ ತಿವಿದು ವ್ಯಕ್ತಿಯೋರ್ವ ಗಂಭೀರ ಗಾಯಗೊಂಡಿದ್ದಾನೆ. ಸೊರಬ ತಾಲೂಕು ಚಿಬ್ಬಿಹಳ್ಳ ಗ್ರಾಮದ ಶಿವಪ್ಪ (55) ಗಾಯಗೊಂಡವರು. ಹೋರಿ ಹಿಡಿಯಲು ಹೋದ ಸಂದರ್ಭದಲ್ಲಿ ಹೋರಿ ಕೊಂಬಿನಿಂದಇವರ ಹೊಟ್ಟೆಗೆ ತಿವಿದಿದೆ. ಇದರಿಂದ ಗಂಭೀರಗಾಯವಾಗಿದ್ದು, ತಕ್ಷಣ ಸೊರಬ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ
ನೀಡಲಾಗುತ್ತಿದೆ.
20 ಸಾವಿರ ಮಂದಿ ಭಾಗಿ: ಸೋಮವಾರ ಗ್ರಾಮ ಸಮಿತಿ ಆಯೋಜಿಸಿದ್ದ ಹೋರಿ ಓಡಿಸುವ ಸ್ಪರ್ಧೆಯಲ್ಲಿ ಸುಮಾರು 20 ಸಾವಿರಕ್ಕೂ ಹೆಚ್ಚು ಜನ ಭಾಗವಹಿಸಿದ್ದರು. ಗ್ರಾಮ ಸಮಿತಿ ಯಾವುದೇ ಬಹುಮಾನ ಇಡದೆ ಮನರಂಜನೆಗಾಗಿ
ಸ್ಪರ್ಧೆಆಯೋಜಿಸಿತ್ತಲ್ಲದೆ ಇದಕ್ಕಾಗಿ ಅನುಮತಿ ಪಡೆದಿತ್ತು. ಸಜ್ಜಾ ಕುಸಿದು ನಡೆದ ದುರ್ಘಟನೆಗೆ ಗ್ರಾಮ ಸಮಿತಿ ಬೇಸರ ವ್ಯಕ್ತಪಡಿಸಿದೆ.