ಕೋವಿಡ್ ಮುಂದುವರಿಸಲು ಕಾಂಗ್ರೆಸ್ ನಿಂದ ಸತತ ಪ್ರಯತ್ನ: ಈಶ್ವರಪ್ಪ ಆರೋಪ
Team Udayavani, May 22, 2021, 2:12 PM IST
ಶಿವಮೊಗ್ಗ: ಚೀನಾ ದೇಶವು ನಮ್ಮ ದೇಶವನ್ನು ಹಾಳು ಮಾಡುವ ದಿಕ್ಕಿನಲ್ಲಿ ಹೆಜ್ಜೆ ಇಟ್ಟಿತ್ತು. ಆದರೆ ಲಸಿಕೆ ಮೂಲಕ ಅದನ್ನು ಹೋಗಲಾಡಿಸುವ ಕೆಲಸವನ್ನು ನಮ್ಮ ದೇಶ ಮಾಡಿದೆ. ಅದರಲ್ಲಿ ಯಶಸ್ವಿ ಕೂಡಾ ಆಗಿದ್ದೇವೆ. ಆದರೆ ಕೋವಿಡ್ ಮುಂದುವರಿಸಲು ಕಾಂಗ್ರೆಸ್ ಸತತ ಪ್ರಯತ್ನ ಮಾಡುತ್ತಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಆರೋಪಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು,.ಡಿಸಿ, ಸಿಇಒ ಜೊತೆ ಸಭೆ ಮಾಡಲು ಅವಕಾಶ ಮಾಡಲು ಕೊಡುತ್ತಿಲ್ಲ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ. ಆದರೆ ಸಿದ್ದರಾಮಯ್ಯನವರೇ, ನೀವು ಸಿಎಂ ಆಗಿದ್ದಾಗ ನಾನು ವಿಪಕ್ಷ ನಾಯಕ. ರಾಜ್ಯದಲ್ಲಿ ಬರಗಾಲ ಸನ್ನಿವೇಶ ನಿರ್ಮಾಣವಾಗಿತ್ತು. ಈ ವೇಳೆ ಬೀದರ್ ನಿಂದ ಚಾಮರಾಜನಗರದವರೆಗೆ ಪ್ರವಾಸ ಮಾಡಿದೆ. ಈ ವೇಳೆ ಸರಕಾರದಿಂದ ಆದೇಶ ಇದೆ ನಿಮಗೆ ಸಭೆ ಮಾಡುವ ಅಧಿಕಾರ ಇಲ್ಲವೆಂದು ಜಿಲ್ಲಾಧಿಕಾರಿಗಳು ತಿಳಿಸಿದರು. ಆಗಲೇ ಸಿಎಂಗೆ ಪತ್ರ ಬರೆದೆ. ನಾನು ವಿಪಕ್ಷದ ನಾಯಕ ಸಭೆ ನಡೆಸಲು ಅನುಮತಿ ನೀಡುತ್ತಿಲ್ಲ ಯಾವ ನ್ಯಾಯ ಅಂತಾ ಕೇಳಿದ್ದೆ. ಬಿಜೆಪಿ ಸರಕಾರ ಇದ್ದಾಗ ಒಂದು ನ್ಯಾಯ, ನಿಮ್ಮ ಸರಕಾರ ಇದ್ದಾಗ ಒಂದು ನ್ಯಾಯವೇ? ಸಂವಿಧಾನ ನಿಮಗೂ ಒಂದೇ, ಬಿಜೆಪಿಗೂ ಒಂದೇ ಇದರಲ್ಲಿ ಯಾವುದೇ ಅನುಮಾನ ಇಲ್ಲ ಎಂದರು.
ಇದನ್ನೂ ಓದಿ: ಶಿವಮೊಗ್ಗ: ಲಸಿಕೆಗಾಗಿ ಬೆಳಗ್ಗೆ 5 ಗಂಟೆಯಿಂದ ಟೋಕನ್ ಪಡೆದು ಸರತಿ ಸಾಲಿನಲ್ಲಿ ನಿಂತ ಜನ!
ಲಸಿಕೆ ಕೊಡಲು ಈ ಸರಕಾರದಿಂದ ಆಗುತ್ತಿಲ್ಲ. ಸರಕಾರ ಸತ್ತು ಹೋಗಿದೆ ಎನ್ನುತ್ತಾರೆ, ಪಂಜಾಬ್, ರಾಜಸ್ಥಾನ, ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಸರಕಾರ ಇದೆ. ಆ ರಾಜ್ಯದಲ್ಲಿ ನೂರಕ್ಕೆ ನೂರರಷ್ಟು ಲಸಿಕೆ ಕೊಟ್ಟಿದ್ದೀರಾ?ಯಾಕೆ ಇಂತಹ ರಾಜಕೀಯ ಮಾಡುತ್ತೀರಿ ಎಂದು ಈಶ್ವರಪ್ಪ ಪ್ರಶ್ನಿಸಿದರು.
ಮುಸಲ್ಮಾನರು ಲಸಿಕೆ ಪಡೆಯಬೇಡಿ. ಮುಸಲ್ಮಾನರಿಗೆ ಮಕ್ಕಳು ಆಗದಿರಲು ಇದೊಂದು ಕುತಂತ್ರ ಎಂದು ಯು.ಟಿ.ಖಾದರ್ ಹೇಳುತ್ತಾರೆ, ಡಿಕೆ ಶಿವಕುಮಾರ್ ಸಹ ಕೀಳುಮಟ್ಟದ ರಾಜಕಾರಣ ಮಾಡ್ತಾರೆ .ಲಸಿಕೆ ಬಗ್ಗೆ ಇವರಿಗೆ ಅನುಮಾನ. ಲಸಿಕೆ ಬಗ್ಗೆ ಇವರಿಗೆ ನಂಬಿಕೆ ಇರಲಿಲ್ಲ ಎಂದು ಈಶ್ವರಪ್ಪ ತಿರುಗೇಟು ನೀಡಿದರು.