ಆರ್ಎಸ್ಎಸ್ ಬಾಂಬ್ ಹಾಕುವವರನ್ನ ತಯಾರು ಮಾಡುವುದಿಲ್ಲ : ಗೃಹ ಸಚಿವ ಆರಗ ಜ್ಞಾನೇಂದ್ರ
Team Udayavani, Oct 17, 2021, 9:12 PM IST
ಶಿವಮೊಗ್ಗ : ಆರ್ಎಸ್ಎಸ್ ಸಂಘಟನೆ ದೇಶದ ಮೇಲೆ ಬಾಂಬ್ ಹಾಕುವವರನ್ನ ತಯಾರು ಮಾಡುವುದಿಲ್ಲ. ದೇಶವನ್ನು ಪ್ರೀತಿ ಮಾಡೋರನ್ನು ತಯಾರು ಮಾಡುತ್ತೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯನವರು ವೋಟ್ ಬ್ಯಾಂಕಿಗಾಗಿ ಏನೇನೋ ಹೇಳುತ್ತಿದ್ದಾರೆ. ಅವರು ಅಧಿಕಾರದಿಂದ ಕೆಳಗಿಳಿದ ಮೇಲೆ ರಾಜ್ಯದಲ್ಲಿ ಉತ್ತಮ ಆಡಳಿತ ನಡೆಯುತ್ತಿದೆ. ಜೆಡಿಎಸ್ ಹಾಗೂ ಕಾಂಗ್ರೆಸ್ನವರು ಅಲ್ಪಸಂಖ್ಯಾತರ ಓಲೈಕೆ ಮಾಡುತ್ತಿದ್ದಾರೆ, ಇದು ಸರಿಯಲ್ಲ. ಅಲ್ಪಸಂಖ್ಯಾತರ ಓಲೈಕೆಗೆ ಕಾಂಪಿಟೇಷನ್ ನಡೆಯುತ್ತಿದೆ ಎಂದರು.
ಸಿಂದಗಿ, ಹಾನಗಲ್ ಉಪ ಚುನಾವಣೆ ಗೆಲ್ಲುತ್ತೇವೆ : ಉಪಚುನಾವಣೆಯಲ್ಲಿ ಯಡಿಯೂರಪ್ಪನವರ ಅವಧಿಯಲ್ಲಿನ ಸಾಧನೆಗಳು ಹಾಗೂ ಬೊಮ್ಮಾಯಿ ನೇತೃತ್ವದಲ್ಲಿ ಆಗಿರುವ ಸಾಧನೆಗಳ ಮೇಲೆ ಎರಡು ಕ್ಷೇತ್ರದಲ್ಲಿ ಗೆಲ್ಲುತ್ತೇವೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ರಾಮಮಂದಿರ ನಿಧಿ ಜೆಡಿಎಸ್ ಅಥವಾ ಕಾಂಗ್ರೆಸ್ ಪಕ್ಷದ ಫಂಡ್ ಅಲ್ಲ: ಕುಮಾರಸ್ವಾಮಿಯವರು ರಾಮಮಂದಿರದ ಲೆಕ್ಕ ನೀಡಲಿ ಎನ್ನುವ ಹೇಳಿಕೆ ಕುರಿತು ಮಾತನಾಡಿದ ಗೃಹ ಸಚಿವರು, ರಾಮಮಂದಿರ ನಿಧಿ ಜೆಡಿಎಸ್ ಅಥವಾ ಕಾಂಗ್ರೆಸ್ ಪಕ್ಷದ ಫಂಡಾ..? ಎಂದು ಪ್ರಶ್ನಿಸಿದರು. ಇವರಿಗೆ ಚುನಾವಣೆ ಸಂದರ್ಭದಲ್ಲಿ ಮಾತ್ರ ಆರ್ಎಸ್ಎಸ್ ನೆನಪಾಗುತ್ತೆ ಎಂದು ಆಕ್ರೋಶ ವ್ಯಕ್ತಪಡಿಸಿದರು.