ಎಪಿಎಂಸಿಗೆ ಬೆಳೆ ಒಯ್ಯಲು ಬೇಕಿದೆ ವಾಹನ
ಮನೆ ಬಳಿಯೇ ವ್ಯಾಪಾರಕ್ಕೆ ಮುಂದಾಗುತ್ತಿರುವ ರೈತರುವಾಹನ ಸೌಲಭ್ಯ ಒದಗಿಸಬೇಕಿದೆ ಎಪಿಎಂಸಿ
Team Udayavani, Jan 23, 2020, 3:04 PM IST
ಹೊಸನಗರ: ರೈತರ ಸೇವೆಯೇ ನಮ್ಮ ಧ್ಯೇಯ ಎಂಬುದು ಎಪಿಎಂಸಿ ಗುರಿ. ಆದರೆ ರೈತರು ಕಷ್ಟಪಟ್ಟು ಫಸಲು ತೆಗೆಯುತ್ತಾರೆ. ಆದರೆ ಅದನ್ನು ಎಪಿಎಂಸಿ ಮಾರುಕಟ್ಟೆಗೆ ತೆಗೆದುಕೊಂಡು ಬರಲು ಸಾಧ್ಯವಾಗುತ್ತಿಲ್ಲ. ಎಪಿಎಂಸಿಯಿಂದ ಯಾವುದೇ ವಾಹನ ಸೌಲಭ್ಯ ಇಲ್ಲದಿರುವುದರಿಂದ ಎಪಿಎಂಸಿ ಮಾರುಕಟ್ಟೆಯಿಂದ ವಿಮುಖವಾಗುವ ಪರಿಸ್ಥಿತಿ ಒದಗಿದೆ.
ಪಟ್ಟಣದ ಎಪಿಎಂಸಿಯಲ್ಲಿ ರೈತರ ಮನೆ ಬಾಗಿಲಿಗೆ ಹೋಗುವ ವಾಹನ ಸೌಲಭ್ಯ ಇರದ ಕಾರಣ ರೈತ ಸಂಕಷ್ಟಕ್ಕೀಡಾಗಿದ್ದಾನೆ. ಈ ಬಗ್ಗೆ ಸಾಕಷ್ಟು ರೈತರು ಮೌಖೀಕವಾಗಿ ಎಪಿಎಂಸಿಯ ಗಮನ ಸೆಳೆದರೂ ಯಾವುದೇ ಪ್ರಯೋಜವಾಗದೆ ಎಪಿಎಂಸಿಗೆ ಬರಲು ಮೀನಾಮೇಷ ಎಣಿಸುವಂತಾಗಿದೆ.
ಮನೆಯಲ್ಲೇ ವ್ಯಾಪಾರ: ಮನೆ ಬಾಗಿಲ ಖರೀದಿಗೆ ಉತ್ತೇಜನ ನೀಡಬಾರದು. ಅಡಕೆ ಸೇರಿದಂತೆ ಎಲ್ಲ ವಾಣಿಜ್ಯ ಬೆಳೆ ಹಾಗೂ ಆಹಾರ ಬೆಳೆ ಕೃಷಿ ಉತ್ಪನ್ನ ಮಾರುಕಟ್ಟೆ ಮೂಲಕವೇ ಮಾರಾಟವಾಗಬೇಕು. ಅದಕ್ಕಾಗಿ ಅದನ್ನು ಮಾರುಕಟ್ಟೆ ಪ್ರಾಂಗಣಕ್ಕೆ ತರಬೇಕು ಎನ್ನುವ ಸರ್ಕಾರದ ಉತ್ತಮ ಉದ್ದೇಶ ತಾಲೂಕಿನ ಬೆಳೆಗಾರರ ವಿಷಯದಲ್ಲಿ ಸಾಧ್ಯವಾಗುತ್ತಿಲ್ಲ. ಇದರ ಪರಿಣಾಮ ಕೃಷಿ ಉತ್ಪನ್ನಗಳ ಮನೆ ಬಾಗಿಲ ವ್ಯಾಪಾರ ಜೋರಾಗುತ್ತಿರುವುದು ವಿಪರ್ಯಾಸ.
ಹಿಂದೆ ವಾಹನ ವ್ಯವಸ್ಥೆ ಇತ್ತು: ಈ ಹಿಂದೆ ಸಾಗರ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯಾಪ್ತಿಗೆ ಒಳಪಡುತ್ತಿರುವಾಗ ಒಮ್ಮೆ ಸುಗ್ಗಿಯ ವೇಳೆ ತಾಲೂಕಿನಾದ್ಯಂತ ವ್ಯವಸ್ಥಿತ ಮಾರ್ಗಸೂಚಿಯೊಂದಿಗೆ ಅಡಕೆ, ಕಾಳು ಮೆಣಸು ಇನ್ನಿತರ ಬೆಳೆ ಮಾರುಕಟ್ಟೆಗೆ ಹೊತ್ತೂಯಲು ಬೆಳೆಗಾರರ ಮನೆ ಬಾಗಿಲಿಗೆ ಕೃಷಿ ಮಾರುಕಟ್ಟೆಯ ಸಮಿತಿಯ ಕಡೆಯಿಂದ ವಾಹನ ವ್ಯವಸ್ಥೆ ಮಾಡಲಾಗಿತ್ತು. ಸಮಿತಿಯ ವಾಹನ ವಾರದ ನಿಗದಿತ ದಿನ ಬರುತ್ತಿರುವುದರಿಂದ ಹಳ್ಳಿಗಳಲ್ಲಿ ಯಾವುದೋ ಖಾಸಗಿ ವಾಹನ ಬಾಡಿಗೆ ಪಡೆದು ಉತ್ಪನ್ನ ಮಾರುಕಟ್ಟೆಗೆ ತರುವ ಅನಿವಾರ್ಯತೆ ಇರಲಿಲ್ಲ.
ಸಾಗಣೆ ಸಾಧ್ಯವೇ ಇಲ್ಲ ಎನ್ನುವಂತಿರುವ ತಾಲೂಕಿನ ಕುಗ್ರಾಮಗಳಿಂದಲೂ ಉತ್ಪನ್ನ ಕಡಿಮೆ ಬಾಡಿಗೆ ದರದಲ್ಲಿ ಹೊತ್ತು ತರಲಾಗುತ್ತಿತ್ತು. ಇದರಿಂದ ಸಾಗಾಟ ಸಮಸ್ಯೆ ಇಲ್ಲದೆ ಬೆಳೆಗಾರ ನೆಮ್ಮದಿಯಿಂದ ತನ್ನ ಉತ್ಪನ್ನವನ್ನು ಮಾರುಕಟ್ಟೆಗೆ ಕಳಿಸುತ್ತಿದ್ದ. ಆದರೆ ನಂತರದ ದಿನಗಳಲ್ಲಿ ಹೊಸನಗರ ಪ್ರತೇಕ ಮಾರುಕಟ್ಟೆಯಾದ ಮೇಲೆ ಈಗ ವಾಹನ ಬೆಳೆಗಾರನ ಮನೆಗೆ ಬರುವ ಪದ್ಧತಿ ಸ್ಥಗಿತಗೊಳಿಸಲಾಗಿದೆ. ಅಲ್ಪಸ್ವಲ್ಪ ಬೆಳೆಯಾಗುವವರು ಖಾಸಗಿ ವಾಹನಕ್ಕೆ ನೀಡುವ ದರ ಅಧಿಕವಾಗಲಿದೆ. ಹಾಗಾಗಿ ದೂರದ ಕೆಲ ಬೆಳೆಗಾರರು ಮಾರುಕಟ್ಟೆಯಿಂದ ದೂರವೇ ಉಳಿಯುವಂತಾಗಿರುವುದು ಇಂದಿನ ವ್ಯವಸ್ಥೆ.
ಮಾತ್ರವಲ್ಲ, ಇದರ ಜತೆಗೆ ಕೆಲ ಬೆಳೆಗಾರರು ಉತ್ಪನ್ನವನ್ನು ಮಾರುಕಟ್ಟೆಗೆ ತರಲೇಬೇಕಾದ
ಅನಿವಾರ್ಯತೆ ಇದ್ದಾಗ ಹರಸಾಹಸಪಡುವ ಸ್ಥಿತಿಯೂ ನಿರ್ಮಾಣವಾಗಿದೆ. ಖಾಸಗಿ ವಾಹನಗಳಲ್ಲಿ ಅದೂ ಅವರು ಕೇಳಿದಷ್ಟು ಬಾಡಿಗೆ ತೆತ್ತು ಮಾರುಕಟ್ಟೆ ಸೇರುವಷ್ಟರಲ್ಲಿ ಹಣ್ಣುಗಾಯಿ ನೀರುಗಾಯಿಯಾಗುವ ಪರಿಸ್ಥಿತಿಯೂ ಇದೆ.
ಮಾರುಕಟ್ಟೆ ಸಂಪರ್ಕ ಹೇಗೆ?: ಇತ್ತ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಆದಾಯ ಹೆಚ್ಚಿಸುವ ಉದ್ದೇಶದಿಂದ ರೈತರಲ್ಲಿ ಮನೆ ಬಾಗಿಲ ವ್ಯಾಪಾರ ಬೇಡ ಮಾರುಕಟ್ಟೆಗೆ ತನ್ನಿ ಎಂದು ನಿತ್ಯ ಹೇಳುತ್ತಿದ್ದಾರೆ. ಅಲ್ಲದೆ ಇಲ್ಲಿನ ಯಾರ್ಡ್ನಲ್ಲಿ ದೊಡ್ಡ ಸೂಚನಾ ಫಲಕ ಹಾಕಿ ಜನರಿಗೆ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ಸಾಗಾಣಿಕೆ ಹೊರೆಯಿಂದ ತಪ್ಪಿಸಿಕೊಳ್ಳಬೇಕಾದ ರೈತ ಅನಿವಾರ್ಯವಾಗಿ ತಾನು ಬೆಳೆದ ಉತ್ಪನ್ನಗಳನ್ನು ಮನೆ ಬಾಗಿಲಿನಲ್ಲಿ ವ್ಯಾಪಾರ ಮಾಡುತ್ತಿದ್ದಾನೆ. ರೈತರಿಗೆ ನಿಖರವಾದ ತೂಕ ಮತ್ತು ನ್ಯಾಯಯುತ ಬೆಲೆ ನೀಡಿಸುವುದೇ ನಮ್ಮ ಗುರಿ ಎಂದು ಹೇಳುವ ಕೃಷಿ ಮಾರುಕಟ್ಟೆ ಸಮಿತಿ ಬಡ ರೈತ ತನ್ನ ಉತ್ಪನ್ನವನ್ನು ಮಾರುಕಟ್ಟೆಗೆ ತರುವ ವಿಧಾನ ಹೇಗೆ ಎಂದು ತಿಳಿಸಿಕೊಟ್ಟಿಲ್ಲ.
ಸರ್ಕಾರಕ್ಕೆ ಮನವಿ: ಉಳಿದ ಕಡೆಗಳಲ್ಲಿ ವಾಹನ ವ್ಯವಸ್ಥೆ ಇದೆ. ಅದು ರೈತರಿಗೆ ಅನುಕೂಲವಾಗಿದೆ. ಆದರೆ ಅತಿ ಹೆಚ್ಚು ಅಗತ್ಯವಿರುವ ಸಂತ್ರಸ್ತ ಹೊಸನಗರ ತಾಲೂಕಿನಲ್ಲಿ ಇಲ್ಲದಿರುವುದು ತೊಂದರೆ ಹೌದು. ಈ ಅಗತ್ಯತೆ ಕುರಿತು ಮೇಲಧಿಕಾರಿಗಳಿಗೆ ಮನವಿ ನೀಡಲಾಗಿದೆ ಎನ್ನುತ್ತಾರೆ ಅಧಿ ಕಾರಿಗಳು. ಒಟ್ಟಾರೆ ಉತ್ತಮ ಮಾರುಕಟ್ಟೆಯಾಗಿ ರೂಪುಗೊಳ್ಳುವ ಎಲ್ಲಾ ಲಕ್ಷಣಗಳಿರುವ ಹೊಸನಗರದ ಎಪಿಎಂಸಿ ರೈತರು ಮತ್ತು ಅವರು ಬೆಳೆದ ಫಸಲು ಮಾರುಕಟ್ಟೆಗೆ ಬರಲು ಪೂರಕವಾಗಿ ಸೂಕ್ತ ವ್ಯವಸ್ಥೆ ಮಾಡಬೇಕಿದೆ. ಇದರಿಂದ ರೈತರಿಗೂ ಅನುಕೂಲ. ಮಾರುಕಟ್ಟೆ ಅಭಿವೃದ್ಧಿಗೂ ರಹದಾರಿ. ಎಪಿಎಂಸಿ ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗುತ್ತದೋ ಕಾದು ನೋಡಬೇಕು.
ಈ ಕುರಿತು ಸಮಿತಿಯಿಂದ ನಮಗೆ ಯಾವುದೇ ಮಾಹಿತಿ ನೀಡಿಲ್ಲ. ಬೆಳೆಗಾರರ ಹಿತದೃಷ್ಟಿಯಿಂದ ಅಗತ್ಯವಿದೆ ಮತ್ತು ನಿಯಮಾನುಸಾರ ಇಲ್ಲಿಗೆ ಸರ್ಕಾರ ವಾಹನ ಮಂಜೂರು ನೀಡುವುದಕ್ಕೆ ಸಾಧ್ಯವಿದೆ ಎನ್ನುವುದಾದರೆ ತಕ್ಷಣ ಸರ್ಕಾರದೊಂದಿಗೆ ಚರ್ಚಿಸಿ ವಾಹನದ ವ್ಯವಸ್ಥೆ ಮಾಡಿಸಲಾಗುವುದು.
ಹರತಾಳು ಹಾಲಪ್ಪ,
ಶಾಸಕ
ಹಿಂದೆ ಸಾಗರ ಸಮಿತಿಯಿದ್ದಾಗ ವಾರದಲ್ಲಿ
ಎರಡು ದಿನ ಇಲ್ಲಿ ವಾಹನ ವ್ಯವಸ್ಥೆ ಮಾಡಲಾಗಿತ್ತು.
ಈಗಲೂ ಇಚ್ಛಾಶಕ್ತಿ ಅಗತ್ಯವಿದೆ. ಸಂಬಂಧಪಟ್ಟವರು ಸರ್ಕಾರದ ಮಟ್ಟದಲ್ಲಿ ಪ್ರಯತ್ನ ಮಾಡಿದರೆ ಖಂಡಿತ ಈ ಕಾರ್ಯ ಸಾಧ್ಯವಿದೆ.
ವಾಟಗೋಡು ಸುರೇಶ್
ಮಾಜಿ ನಿರ್ದೇಶಕ, ಎಪಿಎಂಸಿ.
ಕುಮುದಾ ನಗರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Elections ಕೆಲಸ ಮಾಡದಿದ್ದರೆ ಮನೆಗೆ: ಸುರ್ಜೇವಾಲ
Shobha, Bharathi Shetty ಹೊರತು ಬಿಎಸ್ವೈ ಬೇರೆ ಯಾರನ್ನೂ ಬೆಳೆಸುತ್ತಿಲ್ಲ: ಈಶ್ವರಪ್ಪ
Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮನೆ ರತ್ನಾಕರ್
Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್ರಿಂದ ಪರಿಶೀಲನೆ
Lok Sabha Election: ‘ಬಿವೈಆರ್ಗೆ 3 ಲಕ್ಷ ಮತ ಅಂತರದ ಗೆಲುವು ಖಚಿತ’
MUST WATCH
ಹೊಸ ಸೇರ್ಪಡೆ
Loksabha Election; ತಮಿಳುನಾಡಿನಲ್ಲಿ ಮರು ಮತದಾನಕ್ಕೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಗ್ರಹ
ತಾಲೂಕಿನೆಲ್ಲೆಡೆ ಮುಂಜಾನೆ ಭಾರಿ ಮಳೆ;ಕೆಸರುಮಯ ರಾಷ್ಟ್ರೀಯ ಹೆದ್ದಾರಿಯಾಗಿಸಿದ ಗುತ್ತಿಗೆದಾರರು
MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್
UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು
Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ