ಮುಸಲಧಾರೆಯ ಊರಲ್ಲಿ ನೀರಿಗೆ ಬರ!
ಹಿನ್ನೀರು ತುಂಬಿ ನಿಂತ ತಾಣದಲ್ಲೂ ನೀರಿಗೆ ಹಾಹಾಕಾರಹೊಸನಗರ ತಾಲೂಕಿನ ಕುಡಿವ ನೀರಿನ ಕಥೆ-ವ್ಯಥೆ
Team Udayavani, Mar 18, 2020, 3:45 PM IST
ಹೊಸನಗರ: ಮಳೆಗಾಲ ಬಂತೆಂದರೆ.. ಧೋ.. ಎಂದು ಒಂದೇ ಸಮನೆ ಸುರಿಯುವ ವರ್ಷಧಾರೆ. ಸುತ್ತಲೂ ಸಾಗರದಂತೆ ಕಂಡುಬರುವ ಹಿನ್ನೀರು. ಬಿರುಬೇಸಿಗೆ ಬಂತೆಂದರೆ ಕುಡಿಯುವ ನೀರಿಗಾಗಿ ಹಾಹಾಕಾರ!
ಹೌದು ಸಮುದ್ರದ ನೆಂಟಸ್ಥನವಿದ್ದರೂ..ಉಪ್ಪಿಗೆ ಬಡತನ ಎಂಬಂತಾಗಿದೆ ಹೊಸನಗರ ತಾಲೂಕಿನ ಕುಡಿಯುವ ನೀರಿನ ಪರಿಸ್ಥಿತಿ. ಕ್ಷೇತ್ರವಾರು ಸಾಗರ ಮತ್ತು ತೀರ್ಥಹಳ್ಳಿ ಕ್ಷೇತ್ರಕ್ಕೆ ಹರಿದು ಹಂಚಿ ಹೋಗಿರುವ ಹೊಸನಗರ ತಾಲೂಕಿನ ಹಲವಾರು ಗ್ರಾಮಗಳಲ್ಲಿ ಕಳೆದ
ವರ್ಷ ಕುಡಿಯುವ ನೀರಿನ ಸಮಸ್ಯೆ ಉಂಟಾಗಿತ್ತು. ಅತಿಹೆಚ್ಚು ಮಳೆ ಬೀಳುವ ಪ್ರದೇಶವಾದ ಹುಲಿಕಲ್ ನಲ್ಲೂ ನೀರಿಗಾಗಿ ಜನ ಪರದಾಡಿದ್ದರು.
ಸದ್ಯದ ಸ್ಥಿತಿ: ಕಳೆದ ವರ್ಷಕ್ಕೆ ಹೋಲಿಸಿದರೆ ಹೊಸನಗರ ತಾಲೂಕಿನಲ್ಲಿ ಸದ್ಯಕ್ಕೆ ಕುಡಿಯುವ ನೀರಿನ ಸಮಸ್ಯೆ ಅಷ್ಟಾಗಿ ಇಲ್ಲ ಎನ್ನಬಹುದು. ಆದರೆ ಮುಂಬರುವ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ನೀರಿನ ಕೊರತೆ ಕಂಡು ಬರಬಹುದು ಎಂದು ಅಂದಾಜಿಸಲಾಗಿದೆ. ಅಲ್ಲದೆ ತಾಪಮಾನ ಕೂಡ ಅಧಿಕವಾಗುತ್ತಿದ್ದು ಮುಂಗಾರು ತಡವಾಗಿ ಆರಂಭವಾಗಿದ್ದೇ ಆದಲ್ಲಿ ಕಳೆದ ಬಾರಿಯಂತೆ ತಾಲೂಕಿನ ಹಲವು ಗ್ರಾಮಗಳು ಕುಡಿವ ನೀರಿನ ಸಮಸ್ಯೆಗೆ ಒಳಗಾಗುವುದು ಪಕ್ಕಾ.
ಕಳೆದ ವರ್ಷ ಹೇಗಿತ್ತು?: 199 ಹಳ್ಳಿಗಳನ್ನು ಹೊಂದಿರುವ ಹೊಸನಗರ ತಾಲೂಕಿನಲ್ಲಿ ಸುಮಾರು 21 ಗ್ರಾಮಗಳು ಕುಡಿಯುವ ನೀರಿಗಾಗಿ ಹಪಹಪಿಸಿದ್ದವು. ಜೇನಿ, ಮೇಲಿನಬೆಸಿಗೆ, ನಿಟ್ಟೂರು, ಯಡೂರು-
ಸುಳುಗೋಡು, ಮೂಡುಗೊಪ್ಪ, ಖೈರಗುಂದ, ರಿಪ್ಪನ್ ಪೇಟೆ ಗ್ರಾಪಂನ ಕೆಲವು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿತ್ತು. ಖಾಸಗಿ ಬೋರ್ವೆಲ್ ನೀರನ್ನು ಬಳಸಿಕೊಳ್ಳುವುದರ ಜೊತೆಗೆ ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿ ಟ್ಯಾಂಕರ್ ಮೂಲಕ ಕುಡಿಯುವ ನೀರು ಸರಬರಾಜು ಮಾಡಲಾಗಿತ್ತು.
ಅತಿಯಾದ ಮಳೆ ತಂದ ಆಪತ್ತು!: ಕುಡಿಯುವ ನೀರಿನ ಸಮಸ್ಯೆ ಬಳಿಕ ಹೊಸನಗರ ತಾಲೂಕಿನಲ್ಲಿ ವ್ಯಾಪಕ ಮಳೆಯಾಗಿತ್ತು. ಮಳೆಯ ಅಬ್ಬರ ಎಷ್ಟಿತ್ತೆಂದರೆ ಒಂದೇ ವಾರದಲ್ಲಿ ಲಿಂಗನಮಕ್ಕಿ ಜಲಾಶಯದಲ್ಲಿ ನೀರಿನ ಸಂಗ್ರಹ 50 ಅಡಿಗಳಷ್ಟು ಏರಿತ್ತು. ಆದರೆ ಭಾರೀ ಮಳೆಯಿಂದಾಗಿ, ಹೊಳೆಗಳು, ನದಿಪಾತ್ರ ಕೊರೆದುಕೊಂಡು ಹೋಗಿದ್ದು ನೀರಿನ ಹರಿವು ಕುಸಿತ ಕಂಡಿರುವುದು ಆತಂಕದ ವಿಷಯ.
ತಾಲೂಕಿನ ಬಹುಪಾಲು ಆಕ್ರಮಿಸಿಕೊಂಡಿರುವ ಲಿಂಗನಮಕ್ಕಿ ಜಲಾಶಯದ ಹಿನ್ನೀರು ಕಡಿಮೆಯಾಗುತ್ತಿದ್ದು ಬಾವಿಗಳು ಬರಿದಾಗುತ್ತಿವೆ. ಕಳೆದ ಬಾರಿ ನಿಯಮಿತವಾಗಿ ಮಳೆ ಸುರಿಯದೇ ಒಂದೇ ಸಮನೇ ಸುರಿದಿದ್ದು ಈ ಬಾರಿ ನೀರಿನ ಸಮಸ್ಯೆ ತಂದೊಡ್ಡಲಿದೆ ಎಂಬುದು ತಜ್ಞರ ಅಭಿಪ್ರಾಯ.
ರೂ.1 ಕೋಟಿ ವೆಚ್ಚದಲ್ಲಿ ತುರ್ತು ಕಾಮಗಾರಿ: ಕಳೆದ ವರ್ಷ ನೀರಿನ ಅಭಾವ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ತಾಲೂಕು ಆಡಳಿತ ಆಯ್ದ ಕಡೆ ತುರ್ತು ಕಾಮಗಾರಿಗಳನ್ನು ಕೈಗೊಂಡಿದೆ. ಸುಳುಗೋಡು, ಖೈರಗುಂದ, ಕರಿಮನೆ, ಮೇಲಿನಬೆಸಿಗೆ, ಅಂಡಗದೋದೂರು, ಮೂಡುಗೊಪ್ಪ, ಸಂಪೇಕಟ್ಟೆ, ನಿಟ್ಟೂರು, ಹೆದ್ದಾರಿಪುರ, ಮಾರುತಿಪುರ, ಬಾಳೂರು, ರಿಪ್ಪನಪೇಟೆ, ಕೆಂಚನಾಲ, ಅಮೃತ, ಚಿಕ್ಕಜೇನಿ, ಹರತಾಳು, ಎಂ. ಗುಡ್ಡೇಕೊಪ್ಪ, ಹರತಾಳು, ಹರಿದ್ರಾವತಿ ಗ್ರಾಪಂನ ನೀರಿನ ಸಮಸ್ಯೆ ಇರುವ ಗ್ರಾಮಗಳಲ್ಲಿ ರೂ
1 ಕೋಟಿ ವೆಚ್ಚದಲ್ಲಿ ತುರ್ತು ಕಾಮಗಾರಿಯನ್ನು ನಿರ್ವಹಿಸಲಾಗಿದೆ. ಪೈಪ್ಲೈನ್ ವಿಸ್ತರಣೆ ಮತ್ತು 22 ಬೋರ್ವೆಲ್ ಕೊರೆಸಲಾಗಿದ್ದು ಅದರಲ್ಲಿ ನಾಲ್ಕು ಕೊಳವೆ ಬಾವಿಗಳು ವಿಫಲವಾಗಿವೆ.
ತಹಶೀಲ್ದಾರ್ ಅಧ್ಯಕ್ಷತೆಯಲ್ಲಿ ಸಭೆ: ಕಳೆದ ಬಾರಿಯ ನೀರಿನ ಸಮಸ್ಯೆಯಿಂದ ಎಚ್ಚೆತ್ತುಕೊಂಡಿರುವ ತಾಲೂಕು ಆಡಳಿತ ಈಗಾಗಲೇ ತಹಶೀಲ್ದಾರ್ ವಿ.ಎಸ್. ರಾಜೀವ್ ಅಧ್ಯಕ್ಷತೆಯಲ್ಲಿ ಒಂದು ಸಭೆ ನಡೆದಿದೆ. ಸಭೆಯಲ್ಲಿ ತಾಲೂಕಿನಲ್ಲಿರುವ ಕೊಳವೆ ಬಾವಿ ಸಂಖ್ಯೆ, ತುರ್ತು ಕಾಮಗಾರಿ ನಿರ್ವಹಣೆ, ನೀರಿನ ಅಭಾವ ಕಂಡುಬರುವ ಸಂಭಾವ್ಯ ಗ್ರಾಮಗಳನ್ನು ಪಟ್ಟಿ ಮಾಡಿ, ಸೂಕ್ತ ವರದಿ ನೀಡುವಂತೆ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸಲಾಗಿದೆ.
ತಾಲೂಕಿನ ನೀರಿನ ಮೂಲಗಳು
ಶರಾವತಿ, ಮಾವಿನಹೊಳೆ, ಕುಮುದ್ವತಿ, ಚಕ್ರಾ, ಸಾವೇಹಕ್ಲು, ವಾರಾಹಿ, ಸೇರಿದಂತೆ ಶರಾವತಿಯ ಉಪನದಿ, ಹೊಳೆಗಳನ್ನು ಹೊಂದಿರುವ ಹೊಸನಗರ ತಾಲೂಕಿನಲ್ಲಿ ಮಾಣಿ, ಚಕ್ರಾ, ಸಾವೇಹಕ್ಲು, ಖೈರಗುಂದ, ಪಿಕಪ್ ಸೇರಿದಂತೆ 5 ಜಲಾಶಯಗಳಿವೆ. ಆದರೆ ಇದು ಕೇವಲ ವಿದ್ಯುತ್ ಉತ್ಪಾದನೆಗೆ ಬಳಕೆಯಾಗುತ್ತದೆ. ಆದರೆ ಜಲಾಶಯಗಳ ಹಿನ್ನೀರು ವ್ಯಾಪ್ತಿಯಲ್ಲಿ ನೀರು ಸಂಗ್ರಹವಿರುವ ಭಾಗದಲ್ಲಿ ಅಂತರ್ಜಲ ಹಿಡಿದಿಟ್ಟುಕೊಳ್ಳಬಹುದು. ಆದರೆ ಈಗಾಗಲೇ ಹಿನ್ನೀರು ಪ್ರದೇಶದಲ್ಲಿ ನೀರು ಖಾಲಿಯಾಗಿ ಬರಡಾಗಿದೆ. ಇನ್ನು ಸುಮಾರು 675 ಕೊಳವೆ ಬಾವಿಗಳಿದ್ದು, 900 ಕೆರೆಗಳು, 1700ಕ್ಕೂ ಹೆಚ್ಚು ಕೃಷಿಬಾವಿಗಳಿದ್ದು, 8217 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಒದಗಿಸುತ್ತದೆ.
ಕುಮುದಾ ನಗರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
B. Y. Raghavendra: “ಕಾಂಗ್ರೆಸ್ ನಾಯಕರ ಮನಸ್ಥಿತಿಗೆ ತಕ್ಕಂತೆ “ಚೊಂಬು’ ಜಾಹೀರಾತು’
Lok Sabha Elections ಕೆಲಸ ಮಾಡದಿದ್ದರೆ ಮನೆಗೆ: ಸುರ್ಜೇವಾಲ
Shobha, Bharathi Shetty ಹೊರತು ಬಿಎಸ್ವೈ ಬೇರೆ ಯಾರನ್ನೂ ಬೆಳೆಸುತ್ತಿಲ್ಲ: ಈಶ್ವರಪ್ಪ
Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮನೆ ರತ್ನಾಕರ್
Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್ರಿಂದ ಪರಿಶೀಲನೆ
MUST WATCH
ಹೊಸ ಸೇರ್ಪಡೆ
Nalkane Ayama Movie Review; ದೆವ್ವದ ಕಾಟದ ಹಿಂದೊಂದು ಅಸಲಿ ಆಟ!
IPL; ಆರ್ ಸಿಬಿ ಕಪ್ ಗೆಲ್ಲಬೇಕಾದರೆ ಮೊದಲು….: ರಾಬಿನ್ ಉತ್ತಪ್ಪ ಹೇಳಿದ್ದೇನು?
Gadag; ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕೊಲೆಗಡುಕರೇ ಪ್ರಥಮ ಪ್ರಜೆಗಳು: ಬಸವರಾಜ ಬೊಮ್ಮಾಯಿ
B. Y. Raghavendra: “ಕಾಂಗ್ರೆಸ್ ನಾಯಕರ ಮನಸ್ಥಿತಿಗೆ ತಕ್ಕಂತೆ “ಚೊಂಬು’ ಜಾಹೀರಾತು’
Lok Sabha Election 2024: ಝಾರ್ಖಂಡ್, ಛತ್ತೀಸ್ಗಢದಲ್ಲಿ ಗೆಲುವು ಯಾರಿಗೆ?