ನಾವು ಪ್ರವಾಸ ಆರಂಭಿಸಿದರೆ ಕಾಂಗ್ರೆಸ್ ಗೆ ಬಿಜೆಪಿ ಶಕ್ತಿ ಅರಿವಾಗಲಿದೆ: ಯಡಿಯೂರಪ್ಪ
Team Udayavani, Aug 14, 2022, 3:04 PM IST
ಶಿವಮೊಗ್ಗ: ನಾವು ಪ್ರವಾಸ ಆರಂಭಿಸಿದಾಗ ಕಾಂಗ್ರೆಸ್ ಗೆ ಬಿಜೆಪಿ ಶಕ್ತಿ ಅರಿವಾಗುತ್ತದೆ. ನಾವೆಲ್ಲಾ ಒಟ್ಟಾಗಿ ಪ್ರವಾಸ ಮಾಡುವ ಮೂಲಕ ಪಕ್ಷದ ಸಂಘಟನೆ ಮಾಡಲಿದ್ದೇವೆ. ಸಿಎಂ ಕನಸು ಕಾಣುವ ಕಾಂಗ್ರೆಸ್ ನವರ ಆಸೆ ಈಡೇರುವುದಿಲ್ಲ. ಸರ್ಕಾರದ ಸಾಧನೆಯನ್ನು ಜನೋತ್ಸವದ ಮೂಲಕ ಜನರಿಗೆ ತಿಳಿಸುತ್ತೇವೆ ಎಂದು ಮಾಜಿ ಸಿಎಂ ಯಡಿಯೂರಪ್ಪ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿವಮೊಗ್ಗದಲ್ಲಿ ವೀರ ಸಾವರ್ಕರ್ ಭಾವಚಿತ್ರದ ತೆರವಿಗೆ ಆಗ್ರಹಿಸಿದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದರು.
ಇಡೀ ವಿಶ್ವವೇ ಸಾವರ್ಕರ್ ರನ್ನು ಕೊಂಡಾಡುತ್ತಿದೆ. ಕಿಡಿಗೇಡಿಗಳ ಈ ವರ್ತನೆ ಖಂಡನೀಯ. ಕಿಡಿಗೇಡಿಗಳ ವಿರುದ್ಧ ಸರ್ಕಾರ ಕಠಿಣ ಕ್ರಮ ಜರುಗಿಸಬೇಕು. ಸಾವರ್ಕರ್ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ. ಹೀಗಾಗಿ ಕಾಂಗ್ರೆಸ್ ನವರು ಈ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದಾರೆ ಎಂದರು.
ಲಂಚ-ಮಂಚ ಎಂಬ ಪ್ರಿಯಾಂಕ್ ಖರ್ಗೆ ಹೇಳಿಕೆ ಖಂಡನೀಯ. ಅವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ಅವರ ಹೇಳಿಕೆ ಅಕ್ಷಮ್ಯ. ಯಾವುದೇ ಕಾರಣಕ್ಕೂ ಒಪ್ಪಲು ಸಾಧ್ಯವಿಲ್ಲ ಎಂದು ಯಡಿಯೂರಪ್ಪ ಹೇಳಿದರು.
ಇದನ್ನೂ ಓದಿ:ಅಹಿಂಸಾ ಹೋರಾಟದ ಜತೆಗೆ ತ್ಯಾಗ- ಬಲಿದಾನದಿಂದ ಸ್ವಾತಂತ್ರ್ಯ ಸಿಕ್ಕಿದೆ: ಪ್ರಹ್ಲಾದ ಜೋಶಿ
ಸಂಸದ ಬಿ.ವೈ. ರಾಘವೇಂದ್ರ ಮಾತನಾಡಿ ಶಿವಮೊಗ್ಗ ಸಿಟಿ ಸೆಂಟ್ರಲ್ ಮಾಲ್ ನಲ್ಲಿ ವೀರ ಸಾವರ್ಕರ್ ಭಾವಚಿತ್ರಕ್ಕೆ ವಿರೋಧಿಸಿ ಅನಗತ್ಯವಾಗಿ ವಿವಾದ ಸೃಷ್ಟಿ ಮಾಡಲಾಗುತ್ತಿದೆ. ವೀರ ಸಾವರ್ಕರ್ ಕುರಿತು ಮಾತನಾಡಲು ಇವರು ಯಾರು. ವೀರ ಸಾವರ್ಕರ್ ಸ್ವಾತಂತ್ರ್ಯ ಹೋರಾಟಗಾರ ಎನ್ನುವುದು ಎಲ್ಲರಿಗೂ ಗೊತ್ತುವಿರುವ ಸಂಗತಿ. ಇದು ನಗರದಲ್ಲಿ ಅಶಾಂತಿ ವಾತಾವರಣ ಕಿಡಿಗೇಡಿಗಳ ಸೃಷ್ಟಿ. ಇಂತವರ ವಿರುದ್ಧ ಕಠಿಣ ಕ್ರಮದ ಅಗತ್ಯವಿದೆ ಎಂದರು.
ಬೆಂಗಳೂರಿನಲ್ಲಿ ಟಿಪ್ಪು ಫ್ಲೆಕ್ಸ್ ಹರಿದು ಹಾಕಿರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ರಾಜ್ಯದಲ್ಲಿ ಕ್ಷುಲ್ಲಕ ಕಾರಣಗಳಿಗೆ ಕೋಮುಗಲಭೆ ಸೃಷ್ಟಿ ಷಡ್ಯಂತ್ರ ನಡೆಯುತ್ತಿದೆ. ದೇಶದಲ್ಲೆಡೆ 75 ವರ್ಷದ ಸ್ವಾತಂತ್ರೋತ್ಸವ ಸಂಭ್ರಮ ನಡೆಯುತ್ತಿದೆ. ದೇಶದ ಸ್ವತಂತ್ರಕ್ಕಾಗಿ ಎಲ್ಲರೂ ತ್ಯಾಗ ಮಾಡಿದ್ದಾರೆ. ಈ ನಡುವೆ ಭಾವಚಿತ್ರಕ್ಕಾಗಿ ಹರಿದು ಮತ್ತು ವಿರೋಧ ವ್ಯಕ್ತ ಪಡಿಸುವುದು ಸರಿಯಲ್ಲ ಎಂದು ರಾಘವೇಂದ್ರ ಹೇಳಿದರು.