ಜಮೀರ್ ಅಹಮದ್ ರಕ್ತದಲ್ಲೇ ಮುಸಲ್ಮಾನರ ಪರ, ಹಿಂದೂಗಳ ವಿರೋಧವಿದೆ: ಈಶ್ವರಪ್ಪ ವಾಗ್ದಾಳಿ
Team Udayavani, May 7, 2021, 1:43 PM IST
ಶಿವಮೊಗ್ಗ: ಜಮೀರ್ ಅಹಮದ್ ಅವರೇ ನಿಮ್ಮ ರಕ್ತದಲ್ಲೇ ಮುಸಲ್ಮಾನರ ಪರ, ಹಿಂದೂ ವಿರೋಧವಿದೆ. ಮುಸಲ್ಮಾನರನ್ನು ಎತ್ತಿ ಕಟ್ಟುವುದು, ಬಾಯಿಗೆ ಬಂದ ಹಾಗೆ ಮಾತನಾಡುವುದು ಬಿಟ್ಟರೆ ನಿಮಗೆ ಬೇರೆ ಉದ್ಯೋಗವೇ ಇಲ್ಲ ಎಂದು ಕೆ.ಎಸ್.ಈಶ್ವರಪ್ಪ ವಾಗ್ದಾಳಿ ನಡೆಸಿದರು.
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಮೀರ್ ಅಹಮದ್ ಮುಸಲ್ಮಾನ್ ನಾಯಕರು ಎಂದು ಆಗೊಮ್ಮ- ಈಗೊಮ್ಮೆ ಹೊರಟು ಬಿಡುತ್ತಾರೆ. ಡಿ.ಜೆ.ಹಳ್ಳಿ, ಕೆ.ಜೆ.ಹಳ್ಳಿ ಗಲಭೆ ಆದಾಗ ಇವನೇ ನಾಯಜತ್ವ ವಹಿಸಿಕೊಂಡಿದ್ದ, ಈ ಬಗ್ಗೆ ಅವರ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಅವರೇ ನೇರವಾಗಿ ಆರೋಪ ಮಾಡಿದ್ದರು. ಅದಕ್ಕೆ ಮೊದಲು ಉತ್ತರ ಕೊಡಲಿ ಎಂದರು.
ತೇಜಸ್ವಿ ಸೂರ್ಯ ಬಗ್ಗೆ ಅವರು ಆಡಿರುವ ಮಾತುಗಳನ್ನು ನೋಡಿದೆ. ನಾನು ಅಂತಹ ಪದಗಳನ್ನು ಬಳಸುವುದಕ್ಕೆ ಇಷ್ಟಪಡುವುದಿಲ್ಲ. ಡಿಕೆ ಶಿವಕುಮಾರ್, ಜಮೀರ್ ಅವರೇ ನೀವು ಮುಸಲ್ಮಾನರ ಪರವಾಗಿಯೇ ಇರಿ, ಆದರೆ ಹಿಂದೂಗಳ ಮತ ಪಡೆದು ಗೆದ್ದಿದ್ದೀರಿ, ಹಿಂದೂಗಳ ಅನ್ನವನ್ನು ತಿಂದಿದ್ದೀರಾ ಇದನ್ನು ನೆನಪಿನಲ್ಲಿಟ್ಟುಕೊಳ್ಳಿ ಎಂದು ಗುಡುಗಿದರು.
ತೇಜಸ್ವಿ ಸೂರ್ಯ ಬಗ್ಗೆ, ನನ್ನ ಬಗ್ಗೆ ಬಾಯಿಗೆ ಬಂದಾಗೆ ಮಾತನಾಡಿದ್ದೀರಿ, ಅದಕ್ಕಿಂತ ಕೆಟ್ಟ ಪದಗಳು ನನಗೂ ಬರುತ್ತದೆ. ಆದರೆ ಈ ಸಂದರ್ಭದಲ್ಲಿ ನಾನು ಮಾತನಾಡಲು ಇಷ್ಟಪಡುವುದಿಲ್ಲ. ನಾಲಿಗೆ ಬಿಗಿ ಹಿಡಿದುಕೊಂಡು ಮಾತನಾಡಿ ಎಂದು ಈಶ್ವರಪ್ಪ ಹೇಳಿದರು.