ಕುಮಾರಸ್ವಾಮಿ ದುರ್ಬಲ ಸಿಎಂ: ಈಶ್ವರಪ್ಪ
Team Udayavani, Sep 17, 2018, 6:45 AM IST
ಶಿವಮೊಗ್ಗ: ಎಚ್.ಡಿ. ಕುಮಾರಸ್ವಾಮಿ ದುರ್ಬಲ ಮುಖ್ಯಮಂತ್ರಿ. ಕಾಂಗ್ರೆಸ್ನವರೇ ಸರಕಾರ ಬೀಳಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂಬುದನ್ನು ನೇರವಾಗಿ ಹೇಳಲೂ ಅವರಿಗೆ ಶಕ್ತಿಯಿಲ್ಲ. ಬದಲಿಗೆ ಬಿಜೆಪಿ ವಿರುದ್ಧ ಇಲ್ಲ ಸಲ್ಲದ ಆರೋಪ ಮಾಡುತ್ತ ಜನರ ದಿಕ್ಕು ತಪ್ಪಿಸುತ್ತಿದ್ದಾರೆಂದು ಶಾಸಕ ಕೆ.ಎಸ್. ಈಶ್ವರಪ್ಪ ಟೀಕಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್-ಬಿಜೆಪಿ ಸಮ್ಮಿಶ್ರ ಸರಕಾರವಿದ್ದಾಗ ಬಿಜೆಪಿಯವರು ಒಂದು ದಿನವೂ ತೊಂದರೆ ಕೊಡುವ ಕೆಲಸ ಮಾಡಿಲ್ಲ. ಆದರೆ ಈಗ ಪರಿಸ್ಥಿತಿ ಹೇಗಿದೆ ಎಂಬುದರ ಬಗ್ಗೆ ದೋಸ್ತಿ ಸರಕಾರದ ಶಾಸಕರನ್ನೇ ಕೇಳಿ, ಸತ್ಯ ತಿಳಿಯುತ್ತದೆ ಎಂದರು.
ಪ್ರತಿ ದಿನವೂ ಕಾಂಗ್ರೆಸ್ನವರು ತೊಂದರೆ ಕೊಡುತ್ತಿದ್ದಾರೆಂದು ಕುಮಾರಸ್ವಾಮಿ ಪರೋಕ್ಷವಾಗಿ ಹೇಳುತ್ತಾರೆ. ಆದರೆ ನೇರವಾಗಿ ಯಾರಿಂದ ತೊಂದರೆಯಾಗುತ್ತಿದೆ ಎಂಬುದನ್ನು ಹೇಳುವುದಿಲ್ಲ. ಎಷ್ಟು ದಿನ ಮುಖ್ಯಮಂತ್ರಿಯಾಗಿ ಇರುತ್ತೇನೋ ಗೊತ್ತಿಲ್ಲ ಎಂದು ಅವರೇ ಹೇಳುತ್ತಾರೆ. ಅದಕ್ಕಾಗಿಯೇ ಇವರು ರಾಜ್ಯ ಕಂಡ ದುರ್ಬಲ ಸಿಎಂ ಎಂದು ಕರೆದಿದ್ದೇನೆ ಎಂದರು. ಇವರ ದೋಸ್ತಿಯಲ್ಲಿ ಆಗಿರುವ ಗೊಂದಲವನ್ನು ಬಿಜೆಪಿಯವರು ಸೃಷ್ಟಿಸುತ್ತಿದ್ದಾರೆಂದು ಸುಳ್ಳು ಹೇಳುತ್ತಿದ್ದಾರೆ. “ಕಿಂಗ್ಪಿನ್’ ಹೆಸರಿನಲ್ಲಿ ಬಿಜೆಪಿ ಕಡೆ ಬೆರಳು ತೋರಿಸುತ್ತಿದ್ದಾರೆ. ಅದಕ್ಕೆ ರೌಡಿಗಳನ್ನು ಸೇರಿಸಿದ್ದಾರೆ. ಇದೆಲ್ಲ ಕುಮಾರಸ್ವಾಮಿ ಅವರಿಗೆ ಶೋಭೆ ತರುವಂಥದ್ದಲ್ಲ ಎಂದರು.