ಮೂಗೂರು ಏತ ನೀರಾವರಿ ಪೂರ್ಣ
ಮಾತಿಗೆ ತಪ್ಪದ ಸಿಎಂ ಯಡಿಯೂರಪ್ಪ!ಕುಮಾರ್ ಬಂಗಾರಪ್ಪ ಶ್ರಮಕ್ಕೆ ಜನರ ಮೆಚ್ಚುಗೆ! 97 ಕೆರೆಗಳಿಗೆ ಜೀವಕಳೆ
Team Udayavani, Feb 23, 2021, 6:54 PM IST
ಸೊರಬ: ತಾಲೂಕಿನ ಆನವಟ್ಟಿ ಭಾಗದ ಜನತೆಯ ಬಹು ನಿರೀಕ್ಷಿತ ಮೂಗೂರು ಏತ ನೀರಾವರಿ ಯೋಜನೆ ಪೂರ್ಣಗೊಂಡಿದೆ. ಮೂಡಿ ಏತ ನೀರಾವರಿ ಯೋಜನೆ ಇನ್ನೆರಡು ತಿಂಗಳಲ್ಲಿ ಪೂರ್ಣಗೊಳ್ಳುವ ಎಲ್ಲ ಲಕ್ಷಣಗಳಿರುವುದು ರೈತರಲ್ಲಿ ಸಂತಸಕ್ಕೆ ಕಾರಣವಾಗಿದೆ.
ರಾಜ್ಯದಲ್ಲಿ ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುತ್ತಿದ್ದಂತೆ ನೀರಾವರಿ ಯೋಜನೆಗಳಿಗೆ ಪ್ರಥಮ ಆದ್ಯತೆ ನೀಡುವುದಾಗಿ ತಿಳಿಸಿದ್ದರು. ಅಂತೆಯೇ, ಮೂಡಿ ಮತ್ತು ಮೂಗೂರು ಏತ ನೀರಾವರಿ ಯೋಜನೆಗಳಿಗೆ ಅನುದಾನವೂ ಬಿಡುಗಡೆಗೊಳಿಸಿ, ಕಳೆದ ವರ್ಷ ಫೆಬ್ರವರಿಯಲ್ಲಿ ಶಂಕುಸ್ಥಾಪನೆ ಸಹ ನೆರವೇರಿಸಿದ್ದರು.
ಏನಿದು ನೀರಾವರಿ ಯೋಜನೆ?: ಮೂಗೂರು ಏತ ನೀರಾವರಿ ಯೋಜನೆ 105 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿದ್ದು, 0.328 ಟಿಎಂಸಿ ನೀರನ್ನು ಬಳಸಿಕೊಂಡು ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯ 16 ಮತ್ತು ಜಿಪಂ ವ್ಯಾಪ್ತಿಯ 15 ಕೆರೆಗಳಿಗೆ ನೀರನ್ನು ಹರಿಸಲಾಗುವುದು. ಇದು ಸಹ ದಿನದ 22 ಗಂಟೆಯಂತೆ ವರ್ಷದ 90 ದಿನಗಳು ಮಾತ್ರ ಕಾರ್ಯ ನಿರ್ವಹಿಸಲಿದೆ.
ಏತ ನೀರಾವರಿ ಯೋಜನೆ ನಿರ್ಮಾಣ ಪಡೆದ ಗುತ್ತಿಗೆ ಪಡೆದ ಕಂಪೆನಿಗೆ 24 ತಿಂಗಳುಗಳಲ್ಲಿ ಪೂರ್ಣಗೊಳಿಸುವಂತೆ ಕರಾರು ಒಪ್ಪಂದ ಮಾಡಿಕೊಳ್ಳಲಾಗಿತ್ತು. ಆದರೆ, ಇನ್ನೂ 9 ತಿಂಗಳು ಬಾಕಿ ಇರುವಂತೆ ಯೋಜನೆಯು ಪೂರ್ಣಗೊಂಡಿದೆ. ಪ್ರಾಯೋಗಿಕವಾಗಿ ಕೆರೆಗಳಿಗೆ ನೀರು ಹರಿಸಲಾಗಿದ್ದು, ಯಶಸ್ವಿಯೂ ಆಗಿದೆ.
ಮೂಡಿ ಏತ ನೀರಾವರಿ ಯೋಜನೆ 285 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿದ್ದು, 0.52 ಟಿಎಂಸಿ ನೀರನ್ನು ಬಳಸಿಕೊಂಡು 2380 ಎಚ್ ಪಿಯ ಮೂರು ಪಂಪ್ಗ್ಳ ಮೂಲಕ 66 ಕೆರೆಗಳಿಗೆ ನೀರುಣಿಸುವುದಾಗಿದೆ. ಮೂಡಿ ಯೋಜನೆಯು ಸಹ ಶೇ. 75ರಷ್ಟು ಪೂರ್ಣಗೊಂಡಿದ್ದು, ಇನ್ನೆರಡು ತಿಂಗಳಲ್ಲಿ ಕೆರೆಗಳಿಗೆ ನೀರು ಹರಿಯಲಿದೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಅಭಿವೃದ್ಧಿ ಪರ ಚಿಂತನೆ ಹಾಗೂ ಸಂಸದ ಬಿ.ವೈ. ರಾಘವೇಂದ್ರ ಅವರ ಮುತುವರ್ಜಿಯಿಂದ ಯೋಜನೆಗಳು ಸಾಕಾರಗೊಳ್ಳುತ್ತಿವೆ.
ಸಮುದ್ರ ಸೇರುವ ನೀರಿನ ಬಳಕೆ: ಮಳೆಗಾಲದ ಸಂದರ್ಭದಲ್ಲಿ ತಾಲೂಕಿನ ವರದಾ ಹಾಗೂ ದಂಡಾವತಿ ನದಿಗಳ ಸಾಕಷ್ಟು ಪ್ರಮಾಣದ ನೀರು ಕೃಷ್ಣಾ ನದಿಯ ಮೂಲಕ ಸಮುದ್ರ ಸೇರುತ್ತದೆ. ಇದನ್ನು ಸದ್ಬಳಕೆ ಮಾಡಿಕೊಂಡು ಕೆರೆಗಳಿಗೆ ನೀರು ತುಂಬಿಸುವ ಮಹತ್ತರ ಯೋಜನೆಯಾಗಿದೆ. ಇದರಿಂದ ಕೆರೆಯ ಸುತ್ತಲಿನ ಜಮೀನುಗಳಿಗೆ ಅನುಕೂಲವಾಗಲಿದ್ದು, ಅಂತರ್ಜಲ ವೃದ್ಧಿಗೆ ಸಹಕಾರಿಯಾಗಲಿದೆ. ಏತ ನೀರಾವರಿ ಯೋಜನೆಯಿಂದ ತಾಲೂಕಿನ 97 ಕೆರೆಗಳಿಗೆ ಜೀವಕಳೆ ತುಂಬಲಿದೆ.
ಬಂಗಾರಪ್ಪರಿಂದ ಬಿಎಸ್ವೈವರೆಗೆ: ಕ್ಷೇತ್ರ ದವರೇ ಆದ ದಿ. ಎಸ್. ಬಂಗಾರಪ್ಪ ಅವರು 1991-92ರಲ್ಲಿ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ತಾಲೂಕನ್ನು ಸಂಪೂರ್ಣ ನೀರಾವರಿ ಮಾಡುವುದಾಗಿ ಘೋಷಿಸಿದ್ದರು. ಅಂತೆಯೇ ಹಲವಾರು ಯೋಜನೆಗಳಿಗೆ ಮುನ್ನುಡಿ ಬರೆದಿದ್ದರು.
ಇವುಗಳಲ್ಲಿ ಮೂಡಿ, ಮೂಗೂರು, ಕಚವಿ ಏತ ನೀರಾವರಿ ಯೋಜನೆಯೂ ಒಳಗೊಂಡಿತ್ತು. ಯೋಜನೆಗಾಗಿ ಅನುದಾನ ಬಿಡುಗಡೆ ಮಾಡಿ, ಯೋಜನೆಗೆ ಬೇಕಾದ ಭೂಮಿಯನ್ನು ವಶಪಡಿಸಿಕೊಂಡು ಸಂತ್ರಸ್ತರಿಗೆ ಪರಿಹಾರ ಕೂಡ ನೀಡಲಾಗಿತ್ತು. ಆದರೆ, ಘೋಷಣೆಯಾದ ಯೋಜನೆಗೆ ಅಂತಿಮ ಮುಂದ್ರೆ ಒತ್ತಲು ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗುವವರೆಗೂ ಕಾಯುವಂತಾಯಿತು. ಇದೀಗ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರೇ ಕಳೆದ ವರ್ಷ ಶಂಕುಸ್ಥಾಪನೆ ನೆರವೇರಿಸಿ, ಇದೀಗ ಮೂಗೂರು ಯೋಜನೆಯ ಉದ್ಘಾಟನೆ ಸಹ ಮಾಡುತ್ತಿರುವುದರಿಂದ ರೈತರಲ್ಲಿ ಸಂತಸ ಇಮ್ಮಡಿಗೊಂಡಿದೆ.