ದೇಗುಲ ಬಂದ್-ಸ್ಯಾನಿಟೈಸರ್ ಬಳಕೆ
Team Udayavani, Mar 22, 2020, 6:00 PM IST
ಸಾಗರ: ಜಿಲ್ಲಾಡಳಿತದ ಆದೇಶದಂತೆ ಕೊರೊನಾ ಸೋಂಕು ನಿವಾರಣೆಗಾಗಿ ನಗರದ ಶ್ರೀರಾಂಪುರದ ಲಕ್ಷ್ಮೀ ವೆಂಕಟರಮಣ ದೇವಾಲಯದಲ್ಲಿ ದೇವಸ್ಥಾನದಲ್ಲಿ ಮುಂದಿನ ಆದೇಶದ ಮಾಹಿತಿ ಬರುವ ತನಕ ವಿಶೇಷ ಪೂಜೆ, ಸಭೆ ಸಮಾರಂಭಗಳು, ವಸತಿಗೃಹ ಹಾಗೂ ಇನ್ನಿತರ ಸೇವೆಗಳನ್ನು ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿದೆ ಎಂದು ಆಡಳಿತ ಮಂಡಳಿ ಪ್ರಕಟಣೆ ಹೊರಡಿಸಿದೆ.
ಈ ಮಧ್ಯೆ ಕೊರೊನಾ ವಿರುದ್ಧ ಸಮರ ಸಾರುವ ಉದ್ದೇಶದಿಂದ ಪ್ರಧಾನ ಮಂತ್ರಿಗಳು ನೀಡಿರುವ ಕರೆಗೆ ಓಗೊಟ್ಟು, ವಿಶೇಷವಾಗಿ ಸವಿತಾ ಜನರ ಆರೋಗ್ಯದ ದೃಷ್ಟಿಯಿಂದಲೂ ತಾಲೂಕಿನ ಎಲ್ಲಾ ಕಟಿಂಗ್ ಶಾಪ್ಗ್ಳನ್ನು 22ರಿಂದ 24 ರವರೆಗೆ ಸಂಪೂರ್ಣ ಬಂದ್ ಮಾಡಲಾಗುವುದು. ಪರಿಸ್ಥಿತಿಯನ್ನು ಅವಲೋಕಿಸಿ ಅಗತ್ಯ ಬಿದ್ದರೆ ಮಂಗಳವಾರ ನಿರ್ಧಾರವನ್ನು ಪುನರ್ ಪರಿಶೀಲಿಸಲಾಗುವುದು ಎಂದು ಸವಿತಾ ಸಮಾಜದ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ನಗರದಲ್ಲಿನ ಸಹಕಾರಿ ವ್ಯವಸ್ಥೆಯಡಿಯ ಸುವಿಧಾ ಸೂಪರ್ ಮಾರ್ಕೆಟ್ ನಲ್ಲಿ ಗುರುವಾರದಿಂದಲೇ ಖರೀದಿಗೆ ಆಗಮಿಸುವ ಪ್ರತಿಯೊಬ್ಬ ಗ್ರಾಹಕರಿಗೆ ಉಚಿತವಾಗಿ ಸ್ಯಾನಿಟೈಸರ್ನಿಂದ ಕೈಯನ್ನು ಸ್ವತ್ಛಗೊಳಿಸಿಕೊಂಡೇ ವ್ಯಾಪಾರಕ್ಕೆ ತೆರಳುವ ಮುನ್ನಚ್ಚೆರಿಕೆಯ ಕ್ರಮ ಕೈಗೊಳ್ಳಲಾಗಿದೆ.