ಮೊಬೈಲ್ ಟವರ್ ಬ್ಯಾಟರಿಗಳನ್ನು ದೋಚಿದ್ದ ಖದೀಮರ ಬಂಧನ !
Team Udayavani, Apr 15, 2021, 9:25 PM IST
ಸೊರಬ: ಮೊಬೈಲ್ ಟವರ್ಗಳಿಗೆ ಅಳವಡಿಸಿದ್ದ ಲಕ್ಷಾಂತರ ರೂ. ಮೌಲ್ಯದ ಬ್ಯಾಟರಿಗಳನ್ನು ಕಳ್ಳತನ ಮಾಡುತ್ತಿದ್ದ ಆರು ಮಂದಿ ಖದೀಮರನ್ನು ಸೊರಬ ಠಾಣೆ ಪೊಲೀಸರು ಬಂಧಿಸಿ, 48 ಬ್ಯಾಟರಿ ಮತ್ತು ಕೃತ್ಯಕ್ಕೆ ಬಳಸಿದ್ದ ಎರಡು ವಾಹನಗಳನ್ನು ಗುರುವಾರ ವಶಕ್ಕೆ ಪಡೆದಿದ್ದಾರೆ.
ತಾಲ್ಲೂಕಿನ ಮಾವಲಿ ಗ್ರಾಮದ ಮೊಬೈಲ್ ಟವರ್ಗೆ ಅಳವಡಿಸಿದ್ದ 48 ಬ್ಯಾಟರಿಗಳು ಏ.14ರಂದು ಕಳುವಾಗಿದ್ದವು. ಈ ಬಗ್ಗೆ ಮೊಬೈಲ್ ಟವರ್ನ ಟೆಕ್ನಿಷಿಯನ್ ವಿನಯ್ ದೂರು ಸಲ್ಲಿಸಿದ್ದರು. ಖಚಿತ ಮಾಹಿತಿ ಮೇರೆಗೆ ಕಾನುಕೊಪ್ಪ ಬಳಿ ದಾಳಿ ನಡೆಸಿದ ಪೊಲೀಸರು ಆರೋಪಿಗಳನ್ನು ಬಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿಗಳಾದ ಹಾವೇರಿ ಜಿಲ್ಲೆಯ ಹಿರೇಲಿಂಗದಳ್ಳಿ ಗ್ರಾಮದ ಚಂದ್ರು ಗುಡ್ಡಪ್ಪ(21), ತಾಲ್ಲೂಕಿನ ಕುದುರೆಗಣಿ ಗ್ರಾಮದ ಗಣೇಶ ಪುಟ್ಟಪ್ಪ (33), ಶಿರಸಿಯ ದೀಪರ್ ಶಿವಾಜಿ ಗೋಸಾವಿ(25), ಶಿರಸಿ ಗಣೇಶ ನಗರದ ಸಂದೀಪ ಸುರೇಶ(20) ಹಾಗೂ ಯುವರಾಜ ಕೇಶವ(18) ಶಿರಸಿಯಲ್ಲಿ ವಾಸವಿರುವ ಉತ್ತರ ಪ್ರದೇಶದ ಗುಲ್ಫಾಮ್ ಮಲ್ಲೀಕ್ ನಾಜೀರ್(29) ಎಂಬುವವರನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ನೀಡಿದ್ದಾರೆ.
ಶಿಕಾರಿಪುರ ಡಿವೈಎಸ್ಪಿ ಶಿವಾನಂದ ಮದರಕಂಡಿ, ಸಿಪಿಐ ಆರ್.ಡಿ. ಮರುಳಸಿದ್ದಪ್ಪ ಮಾರ್ಗದರ್ಶನದಲ್ಲಿ ಪಿಎಸ್ಐ ಟಿ.ಬಿ. ಪ್ರಶಾಂತ್ ಕುಮಾರ್ ನೇತೃತ್ವದಲ್ಲಿ ನಡೆದ ದಾಳಿಯಲ್ಲಿ ಎಎಸ್ಐ ಶಬ್ಬೀರ್ಖಾನ್, ಸಿಬ್ಬಂದಿ ದಿನೇಶ್, ಸಂದೀಪ್, ಶಿವಾಜಿ, ಸಿದ್ದನಗೌಡ, ಉಮೇಶ್, ಮೋಹನ್, ಮಂಜುನಾಥ ದೈವಜ್ಞ, ಪ್ರಭಾಕರ ಹಾಗೂ ಜಗದೀಶ ಬೇಲೂರಪ್ಪನವರ್ ಪಾಲ್ಗೊಂಡಿದ್ದರು.