ರಾಜ್ಯದಲ್ಲಿ ನಮಗೆ ಗೆಲುವು, ಬಿಹಾರದಲ್ಲಿ ನಿತೀಶ್ ಕುಮಾರ್ ಗೆ ಹೆಚ್ಚು ಸ್ಥಾನ: ಬಿಎಸ್ ವೈ
Team Udayavani, Nov 8, 2020, 9:19 AM IST
ಶಿವಮೊಗ್ಗ: ಚುನಾವಣೆ ನಡೆದಾಗಲೇ ಎರಡು ಕ್ಷೇತ್ರದಲ್ಲಿ ಗೆಲ್ಲುತ್ತೇವೆ ಎಂದು ನಾನು ಹೇಳಿದ್ದೆ. ಚುನಾವಣೋತ್ತರ ಸಮೀಕ್ಷೆ ಸಹ ಈಗ ಅದನ್ನೇ ಹೇಳಿದೆ. ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಸಹ ನಿತೀಶ್ ಕುಮಾರ್ ಅವರು ಹೆಚ್ಚು ಸ್ಥಾನ ಗೆಲ್ಲಲಿದ್ದಾರೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಹಾಗೂ ಬೇರೆ ಪಕ್ಷದವರು ಏನೇ ಟೀಕೆ-ಟಿಪ್ಪಣಿ ಮಾಡಿದರೂ ಜನ ನಮ್ಮ ಪರ ಇದ್ದಾರೆ. ಇದುವರೆಗೆ ನಮಗೆ ಠೇವಣಿ ಸಿಗದ ಶಿರಾ ಕ್ಷೇತ್ರದಲ್ಲಿ 25 ಸಾವಿರ ಅಂತರದಲ್ಲಿ ಗೆಲುವು ಸಿಗಲಿದೆ. ಆರ್. ಆರ್ ನಗರ ಕ್ಷೇತ್ರದಲ್ಲಿ ಕೂಡ 40 ಸಾವಿರ ಮತಗಳ ಅಂತರದಲ್ಲಿ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಜಿಲ್ಲೆಯಲ್ಲಿ ಶರಾವತಿ ಸಂತ್ರಸ್ಥರ ಸಮಸ್ಯೆ ಹಲವು ವರ್ಷದಿಂದ ಇದೆ. ಈ ಸಮಸ್ಯೆಗೆ ನ್ಯಾಯಯುತ ಪರಿಹಾರ ಕೊಡಲು ಸೂಚಿಸಿದ್ದೇನೆ. ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ಜಿಲ್ಲೆಯ ಶಾಸಕರು, ಸಂಸದರು ಸಹ ಭಾಗಿಯಾಗಿದ್ದರು. ಕಾಲಮಿತಿಯಲ್ಲಿ ಸಮಸ್ಯೆ ಪರಿಹಾರಕ್ಕೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಜಿಲ್ಲೆಯ ಅಭಿವೃದ್ಧಿಯ ಬಗ್ಗೆ ಇಂದು ಸಭೆ ಮಾಡಲಿದ್ದು, ಅಭಿವೃದ್ಧಿಗೆ ಎಲ್ಲಾ ಕ್ರಮ ಕೈಗೊಳ್ಳಲಾಗುವುದು ಎಂದರು.