ವೈದ್ಯ ವೃತ್ತಿಗಿದೆ ಅಪಾರ ಗೌರವ
ದಂತ ವೈದ್ಯಕೀಯ ಕ್ಷೇತ್ರಕ್ಕಿದೆ ಮಹತ್ವ: ಡಾ| ಶಿವಶರಣ್ ಶೆಟ್ಟಿ
Team Udayavani, Sep 15, 2019, 1:42 PM IST
ಶಿವಮೊಗ್ಗ: ನಗರದ ಸುಬ್ಬಯ್ಯ ದಂತ ವೈದ್ಯಕೀಯ ಮಹಾವಿದ್ಯಾಲಯದ ಮೊದಲನೆಯ ಘಟಿಕೋತ್ಸವ ಸಮಾರಂಭವನ್ನು ಟಿ. ಸುಬ್ಬರಾಮಯ್ಯ ಉದ್ಘಾಟಿಸಿದರು.
ಶಿವಮೊಗ್ಗ: ವೈದ್ಯ ವೃತ್ತಿ ಜಗತ್ತಿನಲ್ಲೇ ಅತ್ಯಂತ ಗೌರವ ಹೊಂದಿರುವ ವೃತ್ತಿಯಾಗಿದೆ ಎಂದು ಭಾರತೀಯ ದಂತ ವೈದ್ಯಕೀಯ ಪರಿಷತ್ನ ಸದಸ್ಯ ಹಾಗೂ ರಾಜೀವ್ ಗಾಂಧಿ ವೈದ್ಯಕೀಯ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಡಾ| ಶಿವಶರಣ್ ಶೆಟ್ಟಿ ಹೇಳಿದರು.
ನಗರದ ಸುಬ್ಬಯ್ಯ ದಂತ ವೈದ್ಯಕೀಯ ಮಹಾವಿದ್ಯಾಲಯದ ಮೊದಲನೆಯ ಘಟಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಅವರು ಮಾತನಾಡಿದರು.
ಜಗತ್ತಿನಲ್ಲಿ ಸಾವಿರಾರು ವೃತ್ತಿಗಳಿವೆ. ಆದರೆ ಪ್ರಾಣ ಉಳಿಸುವ ಪುಣ್ಯದ ಕೆಲಸ ಮಾಡುವ ಏಕೈಕ ವೃತ್ತಿ ಎಂದರೆ ವೈದ್ಯ ವೃತ್ತಿ. ಇಂದು ಸುಬ್ಬಯ್ಯ ದಂತ ವೈದ್ಯಕೀಯ ಮಹಾ ವಿದ್ಯಾಲಯದ 65 ವಿದ್ಯಾರ್ಥಿಗಳು ವೈದ್ಯರಾಗಿ ಸಮಾಜಕ್ಕೆ ಸೇವೆ ಸಲ್ಲಿಸಲು ಹೊರಟಿದ್ದಾರೆ. ವೈದ್ಯ ವೃತ್ತಿಯನ್ನು ಕೇವಲ ಹಣ ಗಳಿಕೆಯ ಉದ್ದೇಶದಿಂದ ವಿದ್ಯಾರ್ಥಿಗಳು ಆಯ್ಕೆ ಮಾಡಿಕೊಳ್ಳದೆ ಸಮಾಜಕ್ಕೆ ನಾವೇನಾದರೂ ಅಮೂಲ್ಯವಾದ ಕೊಡುಗೆಯನ್ನು ನೀಡುವ ಉದ್ದೇಶವನ್ನಿಟ್ಟುಕೊಂಡರೆ ಹೆಸರು ಚಿರಕಾಲ ಅಚ್ಚಳಿಯದೇ ಉಳಿಯುತ್ತದೆ ಎಂದರು.
ದಂತ ವೈದ್ಯಕೀಯ ವೃತ್ತಿಗೆ ಇಂದು ಬಹಳಷ್ಟು ಮಹತ್ವವನ್ನು ನೀಡಲಾಗುತ್ತಿದೆ. ಸಾಮಾನ್ಯ ವೈದ್ಯಕೀಯ ವೃತ್ತಿಗೆ ಸಮನಾಗಿ ದಂತ ವೈದ್ಯಕೀಯವು ಸಮಾಜದ ಸ್ವಾಸ್ಥ್ಯ ಕಾಪಾಡುವಲ್ಲಿ ತನ್ನ ಜವಾಬ್ದಾರಿಯನ್ನು ನಿರ್ವಹಿಸುತ್ತಿದೆ ಎಂದರು.
ವೈದ್ಯರು ಸಮಾಜದಲ್ಲಿ ಇಂದು ಅನೇಕ ಸವಾಲುಗಳನ್ನು ಎದುರಿಸುತ್ತಿದ್ದಾರೆ. ರೋಗಿಗಳ ಪ್ರಾಣ ಉಳಿಸುವುದರ ಜೊತೆಗೆ ಸಮಾಜದ ಸ್ವಾಸ್ಥ್ಯವನ್ನೂ ಕಾಪಾಡುವ ಜವಾಬ್ದಾರಿ ವೈದ್ಯರ ಮೇಲಿದೆ. ವೈದ್ಯ ವೃತ್ತಿ ಎನ್ನುವುದು ಪವಿತ್ರವಾದ ವೃತ್ತಿ. ಅದಕ್ಕೆ ತನ್ನದೇ ಆದ ಗೌರವ, ಜವಬ್ದಾರಿ ಎಲ್ಲವೂ ಇದೆ. ಹೀಗಾಗಿ ವೈದ್ಯರು ಒಂದು ಕ್ಷಣ ಎಚ್ಚರ ತಪ್ಪಿದರೂ ಅದರಿಂದ ಭಾರೀ ಅನಾಹುತ ಸಂಭವಿಸಿ ಬಿಡುತ್ತದೆ. ರೋಗಿಗಳಿಗೆ ಚಿಕಿತ್ಸೆ ನೀಡುವ ಸಂದರ್ಭದಲ್ಲಿ ಎಚ್ಚರದಿಂದ ಇರಬೇಕಾಗುತ್ತದೆ ಎಂದರು.
ತಡಿಕೆಲ ಸುಬ್ಬಯ್ಯ ಟ್ರಸ್ಟ್ನ ಚೇರ್ಮನ್ ಟಿ. ಸುಬ್ಬರಾಮಯ್ಯ ಮಾತನಾಡಿ, ವೈದ್ಯನಾದವನು ಸದಾ ಜಾಗೃತನಾಗಿರಬೇಕು. ವೈದ್ಯ ಮಾಡಿದ ಒಂದು ಸಣ್ಣ ತಪ್ಪು ಒಂದು ಜೀವಕ್ಕೆ ಕುತ್ತಾಗಬಹುದು. ಹಾಗಾಗಿ ಪ್ರತಿ ಕ್ಷಣದಲ್ಲಿಯೂ ಮೈಯೆಲ್ಲ ಕಣ್ಣಾಗಿಟ್ಟುಕೊಂಡಿರಬೇಕಾಗುತ್ತದೆ. ವೈದ್ಯನು ತಾನು ಎಷೇr ಒತ್ತಡದಲ್ಲಿರಲಿ, ಅದನ್ನು ತೋರಿಸಬಾರದು. ರೋಗಿಗೆ ಚಿಕಿತ್ಸೆಯನ್ನು ಹಾಗೂ ನೋವಿನಲ್ಲಿ ಪಾಲ್ಗೊಂಡು ಸಾಂತ್ವನ ನೀಡಬೇಕಾಗುತ್ತದೆ ಎಂದರು.
ಸುಬ್ಬಯ್ಯ ದಂತ ವೈದ್ಯಕೀಯ ಮಹಾ ವಿದ್ಯಾಲಯದ ಮೊದಲನೆಯ ಘಟಿಕೋತ್ಸವ ಇದಾಗಿದ್ದು, ಕೇರಳ, ತಮಿಳುನಾಡು, ಆಂಧ್ರ ಪ್ರದೇಶ ಉತ್ತರ ಭಾರತ ಸೇರಿದಂತೆ ವಿವಿಧ ರಾಜ್ಯಗಳ 65 ವಿದ್ಯಾರ್ಥಿಗಳು ಪದವಿ ಪಡೆದರು.
ಸುಬ್ಬಯ್ಯ ವೈದ್ಯಕೀಯ ಮಹಾವಿದ್ಯಾಲಯದ ವೈದ್ಯಕೀಯ ನಿರ್ದೇಶಕ ಡಾ| ಎಸ್. ನಾಗೇಂದ್ರ, ಸುಬ್ಬಯ್ಯ ವೈದ್ಯಕೀಯ ಮಹಾವಿದ್ಯಾಲಯದ ಕಾರ್ಯ ನಿರ್ವಾಹಕ ನಿರ್ದೇಶಕಿ ಡಾ| ಲತಾ ನಾಗೇಂದ್ರ, ತಡಿಕೆಲ ಸುಬ್ಬಯ್ಯ ಟ್ರಸ್ಟ್ನ ಟ್ರಸ್ಟಿಗಳಾದ ಡಾ|ವಿನಯಾ ಶ್ರೀನಿವಾಸ್, ಡಾ| ಎಸ್. ಶ್ರೀನಿವಾಸ್, ಸುಬ್ಬಯ್ಯ ದಂತ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ| ಬಿ.ಎಸ್. ಸುರೇಶ್, ಸುಬ್ಬಯ್ಯ ವೈದ್ಯಕೀಯ ಮಹಾವಿದ್ಯಾಲಯದ ಶೈಕ್ಷಣಿಕ ನಿರ್ದೇಶಕ ಡಾ| ಆರ್. ಪಿ. ಪೈ, ದಂತ ವೈದ್ಯಕೀಯ ಮಹಾವಿದ್ಯಾಲದಯ ಪ್ರಾಧ್ಯಾಪಕರು ಹಾಗೂ ಇನ್ನಿತರರು ಇದ್ದರು.