ಬೇಡಿಕೆ ಈಡೇರಿಕೆಗೆ ಸಿಐಟಿಯು ಆಗ್ರಹ
ಬಾಕಿ ಗೌರವಧನ ಬಿಡುಗಡೆಗೆ ಒತ್ತಾಯಿಸಿ ಅಂಗನವಾಡಿ ಕಾರ್ಯಕರ್ತೆಯರ ಧರಣಿ
Team Udayavani, Jul 13, 2019, 2:57 PM IST
ಶಿವಮೊಗ್ಗ: ನಾನಾ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಅಂಗನವಾಡಿ ಕಾರ್ಯಕರ್ತೆಯರು ಪ್ರತಿಭಟನೆ ನಡೆಸಿದರು
ಶಿವಮೊಗ್ಗ: ಅಂಗನವಾಡಿ ಕೇಂದ್ರಗಳಲ್ಲಿ ಎಲ್ಕೆಜಿ, ಯುಕೆಜಿ ಪ್ರಾರಂಭಿಸಬೇಕು. ಬಾಕಿ ಗೌರವ ಧನ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿ ರಾಜ್ಯ ಅಂಗನವಾಡಿ ಸಹಾಯಕಿಯರ ಸಂಘ (ಸಿಐಟಿಯು) ಜಿಲ್ಲಾ ಘಟಕದ ವತಿಯಿಂದ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.
ಮಕ್ಕಳ ಸರ್ವತೋಮುಖ ಬೆಳವಣಿಗೆ ದೃಷ್ಟಿಯಿಂದ ಅಂಗವಾಡಿ ಕೇಂದ್ರಗಳನ್ನು ಆರಂಭಿಸಲಾಗಿದ್ದು, ರಾಜ್ಯದಲ್ಲಿ 62580 ಅಂಗನವಾಡಿ ಕೇಂದ್ರಗಳು, 3331 ಮಿನಿ ಅಂಗನವಾಡಿ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ. ಈ ಕೇಂದ್ರಗಳಲ್ಲಿ ಲಕ್ಷಾಂತರ ಮಕ್ಕಳು, ಗರ್ಭಿಣಿಯರು, ಬಾಣಂತಿಯರು ಸೇರಿ 51.04 ಲಕ್ಷ ಫಲಾನುಭವಿಗಳಾಗಿದ್ದಾರೆ. ಇಂತಹ ಯೋಜನೆಯನ್ನು ಸಬಲೀಕರಣಗೊಳಿಸುವ ಬದಲಿಗೆ ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಹೆಚ್ಚಿಸಲು ಎಲ್ಕೆಜಿ, ಯುಕೆಜಿ ಆರಂಭಿಸಿರುವುದು ಸರಿಯಲ್ಲ ಎಂದರು.
ಅಂಗನವಾಡಿ ಕೇಂದ್ರಗಳಲ್ಲಿ ನಿರ್ವಹಿಸಬೇಕಾದ ಜವಾಬ್ದಾರಿಯನ್ನು ಸರ್ಕಾರಿ ಶಾಲೆಗಳು ನಿರ್ವಹಿಸುವುದು ಪ್ರಾಯೋಗಿಕವಲ್ಲ. ಹಾಗಾಗಿ ಅಂಗನವಾಡಿ ಕೇಂದ್ರಗಳಲ್ಲೇ ಎಲ್ಕೆಜಿ, ಯುಕೆಜಿ ಪ್ರಾರಂಭಿಸಬೇಕೆಂದು ಆಗ್ರಹಿಸಿದರು.
ಅನೇಕ ಜಿಲ್ಲೆಗಳಲ್ಲಿ ಮೂರ್ನಾಲ್ಕು ತಿಂಗಳಿಂದ ಗೌರವಧನ ಬಂದಿಲ್ಲ. ಕೋಳಿ ಮೊಟ್ಟೆ, ತರಕಾರಿ ಹಣ ನೀಡಿಲ್ಲ. ಸರಿಯಾಗಿ ಗ್ಯಾಸ್ ವಿತರಣೆ ಮಾಡಿಲ್ಲ. ಅಂಗನವಾಡಿ ನೌಕರರು ಕಾಯಿಲೆ ಬಿದ್ದಾಗ, ಮರಣ ಹೊಂದಿದಾಗ ಹಣ ಕೊಡುತ್ತಿಲ್ಲ. ನಿವೃತ್ತರಾದವರಿಗೆ ಯಾವ ಸೌಲಭ್ಯವೂ ಸಿಗುತ್ತಿಲ್ಲ ಎಂದು ದೂರಿದರು.
ಅಂಗನವಾಡಿ ನೌಕರರಿಗೆ ಎಲ್ಐಸಿ ಆಧಾರಿತ ಪೆನ್ಸ್ನ್ ಕೊಡಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರಿ ನೌಕರರಿಗೆ ಕೊಡುವ ಎನ್ಪಿಎಸ್ ಮಾನದಂಡ ಅನುಸರಿಸಬೇಕು. ನಿವೃತ್ತರಾದ ಕಾರ್ಯಕರ್ತೆಯರು, ಸಹಾಯಕರಿಗೆ ಇಡುಗಂಟು ತಕ್ಷಣ ಬಿಡುಗಡೆ ಮಾಡಬೇಕು. ನಿವೃತ್ತರಿಗೆ ಕನಿಷ್ಠ 3 ಸಾವಿರ ರೂ.ಪಿಂಚಣಿ ನೀಡಬೇಕು, ಸೇವಾ ಜೇಷ್ಠತೆ ಆಧಾರದಲ್ಲಿ ಕನಿಷ್ಠ ವೇತನ ಜಾರಿ ಮಾಡಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿದರು.
ಸಿಐಟಿಯು ಜಿಲ್ಲಾಧ್ಯಕ್ಷ ಶಿವಶಂಕರ್, ಅಂಗನವಾಡಿ ಸಹಾಯಕಿಯರ ಸಂಘದ ಪ್ರಮುಖರಾದ ತುಳಸಿ ಪ್ರಭ, ಜಯಲಕ್ಷ್ಮಿ ಎಚ್., ಆರ್.ಮಂಜುಳಾ, ಶೈಲ ಮತ್ತಿತರರು ಇದ್ದರು.