ಬಿಜೆಪಿಗೆ ಕಂಪನ; ಮೈತ್ರಿಕೂಟದಲ್ಲಿ ಉತ್ಸಾಹ
ಯಡಿಯೂರಪ್ಪ ಸ್ವಕ್ಷೇತ್ರದಲ್ಲಿಯೇ ಭಾರತೀಯ ಜನತಾಪಕ್ಷಕ್ಕೆ ಶುರುವಾಗಿದೆ ನಡುಕ
Team Udayavani, Apr 29, 2019, 4:04 PM IST
ಶಿಕಾರಿಪುರ: ವಿಧಾನಸಭಾ ಕ್ಷೇತ್ರ
ಶಿವಮೊಗ್ಗ: ಬಿಜೆಪಿಯ ಭದ್ರಕೋಟೆ ಹಾಗೂ ಬಿ.ಎಸ್. ಯಡಿಯೂರಪ್ಪ ಅವರ ಸ್ವಕ್ಷೇತ್ರವಾಗಿರುವ ಶಿಕಾರಿಪುರ ತಾಲೂಕಿನಲ್ಲಿ ಬಿಜೆಪಿಗೆ ಸಣ್ಣ ಕಂಪನ ಶುರುವಾಗಿದೆ. ಉಪ ಚುನಾವಣೆಯಲ್ಲಿ 50 ಸಾವಿರ ಮತ ಪಡೆದಿದ್ದ ಜೆಡಿಎಸ್ ಈ ಬಾರಿ ಇನ್ನೂ ಉತ್ತಮ ಸಾಧನೆ ಮಾಡುವ ನಿರೀಕ್ಷೆಯಲ್ಲಿದೆ. ನೀರಾವರಿ ಯೋಜನೆಗಳ ಕ್ರೆಡಿಟ್ ಅನ್ನು ಜನ ಯಾರಿಗೆ ಕೊಡಲಿದ್ದಾರೆ ಎಂಬ ಕುತೂಹಲ ಕ್ಷೇತ್ರದಲ್ಲಿ ಮನೆ ಮಾಡಿದೆ.
ಬಿ.ಎಸ್. ಯಡಿಯೂರಪ್ಪ ಅವರು ಸಿಎಂ ಆಗುತ್ತಾರೆ ಎಂಬ ನಿರೀಕ್ಷೆಯಲ್ಲಿ ಜನ ಬಿಜೆಪಿ ಕೈ ಹಿಡಿದಿದ್ದಾರೆ. ಜತೆಗೆ ನರೇಂದ್ರ ಮೋದಿ ಹವಾ, ಅಭಿವೃದ್ಧಿ ಕಾರ್ಯಗಳು ಎಲ್ಲವೂ ನಿರೀಕ್ಷೆಗೂ ಮೀರಿ ಮತ ತಂದುಕೊಡುತ್ತವೆ. ಐದು ಹೋಬಳಿಗಳಲ್ಲೂ ಬಿಜೆಪಿ ಲೀಡ್ ಪಡೆಯಲಿದೆ ಎಂಬ ಭರವಸೆ ಹೊಂದಿದೆ. ಜಿಲ್ಲಾಸ್ಪತ್ರೆ ವಾಪಸ್ ಹೋಗಲು ಮಧು ಬಂಗಾರಪ್ಪ ಕಾರಣ. 50 ಸಾವಿರ ಮತ ಕೊಟ್ಟರೂ ಒಂದು ಸಭೆ ಮಾಡಲಿಲ್ಲ ಎಂಬ ಅಂಶಗಳನ್ನು ಬಿಜೆಪಿ ಪ್ರಚಾರದ ಅಂಶಗಳನ್ನು ಯಶಸ್ವಿಗೆ ಬಳಸಿಕೊಂಡಿದೆ. ಎಲ್ಲಕ್ಕಿಂತ ಮುಖ್ಯವಾದ ಏತ ನೀರಾವರಿ ಯೋಜನೆಗೆ ಹಣ ನಿಡುಗಡೆಯಾಗಿದ್ದು ಯಡಿಯೂರಪ್ಪ ಹಾಗೂ ಬಿ.ವೈ. ರಾಘವೇಂದ್ರ ಮನವಿಯಿಂದ ಎಂದು ಸಹ ಪ್ರಚಾರ ಮಾಡಿದ್ದಾರೆ.
ಜೆಡಿಎಸ್ ಉತ್ಸಾಹ: ಉಪ ಚುನಾವಣೆಯಲ್ಲಿ ಪ್ರಚಾರಕ್ಕೆ ಸರಕು ಇಲ್ಲದೇ ಪರದಾಡುತ್ತಿದ್ದ ಜೆಡಿಎಸ್ಗೆ ಈ ಬಾರಿ ಬ್ರಹ್ಮಾಸ್ತ್ರವೇ ಸಿಕ್ಕಂತಾಗಿತ್ತು. ತಾಲೂಕಿನ ಪ್ರಮುಖ ನೀರಾವರಿ ಯೋಜನೆಗಳಿಗೆ ಬಜೆಟ್ನಲ್ಲಿ ಅನುದಾನ ನೀಡಿದ್ದನ್ನೇ ಪ್ರಮುಖ ವಿಷಯವಾಗಿ ಬಳಸಿಕೊಂಡಿತು. ನಾನು ಸೋತರೂ ಅನುದಾನ ತಂದಿದ್ದೇನೆ. ಒಮ್ಮೆ ಅವಕಾಶ ಕೊಡಿ ಎಂದು ಮಧು ಬಂಗಾರಪ್ಪ ಜನರ ಬಳಿ ಮನವಿ ಮಾಡಿದ್ದರು. ಶಿಕಾರಿಪುರದಲ್ಲೇ ಬೃಹತ್ ಸಮಾವೇಶ ನಡೆಸಿ ಬಿಜೆಪಿಗೆ ಉತ್ತರ ಕೊಡುವ ಕೆಲಸ ಮಾಡಲಾಗಿತ್ತು. ಲಿಂಗಾಯತರೇ ಹೆಚ್ಚಿರುವ ಕಾರಣ ಯಡಿಯೂರಪ್ಪನವರಿಗೆ ಪ್ರಬಲ ಸ್ಪರ್ಧೆ ನೀಡಿದ್ದ ಮುಖಂಡರನ್ನೇ ಪ್ರಚಾರಕ್ಕೆ ಬಳಸಿಕೊಳ್ಳುವ ಜಾಣ್ಮೆಯನ್ನು ಮೈತ್ರಿಕೂಟ ಪ್ರದರ್ಶಿಸಿದೆ.
ಶಿಕಾರಿಪುರ ಕ್ಷೇತ್ರದಲ್ಲಿ 8 ಬಾರಿ ಗೆಲುವು ದಾಖಲಿಸಿರುವ ಬಿ.ಎಸ್. ಯಡಿಯೂರಪ್ಪ ಒಮ್ಮೆ ಮಾತ್ರ ಸೋಲಿನ ರುಚಿ ಕಂಡಿದ್ದಾರೆ. ಲೋಕಸಭೆ ಸ್ಪರ್ಧೆ ವೇಳೆ ಮಗನನ್ನು ನಿಲ್ಲಿಸಿ 10 ಸಾವಿರ ಮತಗಳ ಅಂತರದಿಂದ ಗೆಲ್ಲಿಸಿಕೊಂಡಿದ್ದರು. 2018ರ ವಿಧಾನಸಭೆ ಚುನಾವಣೆಯಲ್ಲಿ ಬಿ.ಎಸ್. ಯಡಿಯೂರಪ್ಪ ಅವರು 30 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. 2018ರ ಲೋಕಸಭೆ ಉಪ ಚುನಾವಣೆಯಲ್ಲಿ ಬಿ.ವೈ. ರಾಘವೇಂದ್ರ ಅವರಿಗೆ ತಾಲೂಕಿನ ಜನ 18 ಸಾವಿರ ಮತಗಳ ಲೀಡ್ ಕೊಟ್ಟಿದ್ದರು. ಈ ಬಾರಿ ಮತದಾನ ಪ್ರಮಾಣವು ಹೆಚ್ಚಾಗಿದ್ದು ಯಾರಿಗೆ ಹೆಚ್ಚು ಲೀಡ್ ಸಿಗಲಿದೆ ಕುತೂಹಲ ಮೂಡಿಸಿದೆ.
ಹೋಬಳಿ ಲೆಕ್ಕಾಚಾರ: ಹೊಸೂರು, ಉಡುಗಣಿ, ತಾಳಗುಂದ ಹೋಬಳಿಗಳು ಮೊದಲಿನಿಂದಲೂ ಬಿಜೆಪಿಗೆ ಲೀಡ್ ಕೊಡುತ್ತಿದ್ದವು. ಆದರೆ ಈ ಬಾರಿ ಈ ಭಾಗದ ಕೆರೆಗಳಿಗೆ ನೀರು ತುಂಬಿಸುವ ಏತ ನೀರಾವರಿ ಯೋಜನೆಗೆ ರಾಜ್ಯ ಸರಕಾರ ಅನುಮೋದನೆ ನೀಡಿದ್ದು, ಜೆಡಿಎಸ್- ಬಿಜೆಪಿ ನಡುವೆ ಜಿದ್ದಾಜಿದ್ದಿನ ಹೋರಾಟ ನಡೆದಿದೆ. ಈ ಭಾಗದ ಮತದಾರರು ಯಾರ ಪರ ಮತ ಚಲಾಯಿಸಲಿದ್ದಾರೆ ಫಲಿತಾಂಶ ನಂತರವೇ ತಿಳಿಯಲಿದೆ. ಇನ್ನು ಕಸಬ ಹೋಬಳಿಯಲ್ಲಿ ಲಿಂಗಾಯತರು, ಕುರುಬರು, ಮುಸ್ಲಿಮರು, ಹಿಂದುಳಿದ ವರ್ಗದ ಜರು ಸಮಾನ ಸಂಖ್ಯೆಯಲ್ಲಿದ್ದು ಇಲ್ಲಿ 50-50 ಫಲಿತಾಂಶ ಸಿಗುವ ನಿರೀಕ್ಷೆ ಇದೆ. ಅಂಜನಾಪುರ ಹೋಬಳಿ ವ್ಯಾಪ್ತಿಯಲ್ಲಿ ಈಡಿಗರು- ಲಿಂಗಾಯತರು ಪ್ರಭಾವಿಗಳಾಗಿದ್ದು ಯಾರ ಕೈ ಹಿಡಿದಿದ್ದಾರೆ ಎಂಬುದು ಕುತೂಹಲ ಕೆರಳಿಸಿದೆ.
ಹಣ, ಹಣ: ಭರ್ಜರಿ ಪ್ರಚಾರದ ಹೊರತಾಗಿಯೂ ಶಿಕಾರಿಪುರದಲ್ಲಿ ಹಣದ ಹೊಳೆಯೇ ಹರಿದಿದೆ. ಶಿರಾಳಕೊಪ್ಪ ಭಾಗದಲ್ಲಿ ಮುಸ್ಲಿಂ ಮತಗಳನ್ನು ಸೆಳೆಯಲು ಭರ್ಜರಿ ಹಣ ಹಂಚಲಾಗಿದೆ ಎನ್ನಲಾಗಿದೆ. ತಾಲೂಕಿನಾದ್ಯಂತ ಮನೆಗೆ 500 ರೂ. ಕೊಟ್ಟಿರುವ ಕಡೆ ಪ್ರತಿಸ್ಪರ್ಧಿಗಳು ತಲೆಗೆ 200, 300 ರೂ. ಹಂಚಿರುವ ಬಗ್ಗೆ ಗಾಳಿಸುದ್ದಿಗಳು ಹರಿದಾಡುತ್ತಿವೆ. ಲಿಂಗಾಯತರು, ಕುರುಬರು, ಈಡಿಗರು, ಮುಸ್ಲಿಮರಿಗೆ ಬೇರೆ ಬೇರೆ ಲೆಕ್ಕಾಚಾರದಲ್ಲಿ ಹಣ ಸಂದಾಯವಾಗಿರುವುದು ಕಾರ್ಯಕರ್ತರ ನಡುವೆ ಚರ್ಚೆಯ ವಿಷಯವಾಗಿದೆ.
ಒಳ ಹೊಡೆತ: ಹಣ ಹಂಚಿಕೆ ವಿಚಾರದಲ್ಲಿ ತಂತ್ರ, ಪ್ರತಿತಂತ್ರಗಳು ಕ್ಷೇತ್ರದಲ್ಲಿ ಜೋರಾಗಿ ನಡೆದಿವೆ. ಕೊನೆ ಕ್ಷಣದವರೆಗೂ ಕಾರ್ಯತಂತ್ರದ ಗುಟ್ಟು ಬಿಟ್ಟುಕೊಡದಿರಲು ಈ ಬಾರಿ ಜೆಡಿಎಸ್ ನಿರ್ಧರಿಸಿತ್ತು. ಇದು ಸಹ ಬಿಜೆಪಿಗೆ ತಲೆನೋವಾಗಿ ಪರಿಣಮಿಸಿದೆ. ಶಿರಾಳಕೊಪ್ಪ ಭಾಗದಲ್ಲಿ ಮೈತ್ರಿಕೂಟ ಮುಸ್ಲಿಮರಿಗೆ ಹೆಚ್ಚಿನ ಆದ್ಯತೆ ನೀಡಿದ್ದ ಕಾರಣ ಕಾಂಗ್ರೆಸ್ನ ಲಿಂಗಾಯತ ಮುಖಂಡರು ಮುನಿಸಿಕೊಂಡಿದ್ದಾರೆ ಎನ್ನಲಾಗಿದೆ.
ಮತ ಪ್ರಮಾಣ: ಶಿಕಾರಿಪುರ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 232 ಮತಗಟ್ಟೆಗಳಿವೆ. 97199 ಪುರುಷ ಹಾಗೂ 94746 ಮಹಿಳೆಯರು ಸೇರಿ 191955 ಮತದಾರಿದ್ದಾರೆ. ಇದರಲ್ಲಿ 79588 ಪುರುಷರು ಹಾಗೂ 75213 ಮಹಿಳೆಯರು ಸೇರಿ 154801 (ಶೇ..80.64) ಮಂದಿ ಮತ ಚಲಾಯಿಸಿದ್ದಾರೆ. ಹೊಸೂರು ಹೋಬಳಿಯಲ್ಲಿ ಹೆಚ್ಚು ಮತದಾನವಾಗಿದ್ದು ಇದು ಬಿಜೆಪಿಗೆ ಅನುಕೂಲವಾಗಲಿದೆ ಎಂಬ ಲೆಕ್ಕಾಚಾರ ಇದೆ. ಅದೇ ರೀತಿ ಅಂಜನಾಪುರ ಹೋಬಳಿಯಲ್ಲೂ ಹೆಚ್ಚು ಮತದಾನವಾಗಿದ್ದು ಇದು ಜೆಡಿಎಸ್ಗೆ ಲಾಭವಾಗುವ ನಿರೀಕ್ಷೆಯಲ್ಲಿದ್ದಾರೆ.
ಅಂತರಕ್ಕೆ ಬೆಟ್ಟಿಂಗ್ ತಾಲೂಕಿನಲ್ಲಿ ಬೆಟ್ಟಿಂಗ್ ವ್ಯಾಪಕವಾಗಿಲ್ಲದಿದ್ದರೂ ಕೆಲ ಹೋಬಳಿಗಳಲ್ಲಿ ಸಣ್ಣಪುಟ್ಟ ಪ್ರಮಾಣದಲ್ಲಿ ನಡೆಯುತ್ತಿದೆ. 5 ಸಾವಿರ 1 ಲಕ್ಷದವರೆಗೂ ಗೆಲುವಿನ ಅಂತರ ಎಷ್ಟಿರಲಿದೆ ಎಂಬ ವಿಚಾರಕ್ಕೆ ಬೆಟ್ಟಿಂಗ್ ಕಟ್ಟಿದ್ದಾರೆ. ಮೈತ್ರಿಕೂಟ ಮತ್ತು ಬಿಜೆಪಿ ಭರ್ಜರಿ ಪ್ರಚಾರ ಮಾಡಿರುವುದರಿಂದ ಜನರಲ್ಲಿ ತೀವ್ರ ಕುತೂಹಲ ಮನೆ ಮಾಡಿದೆ.
ಶರತ್ ಭದ್ರಾವತಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kushtagi:ವಿದ್ಯುತ್ದೀಪದ ಕಂಬಗಳಿಗೆ ಬಲ್ಬ್ ಅಳವಡಿಸುವ ವೇಳೆ ಅವಘಡ; ಪುರಸಭೆ ಸಿಬ್ಬಂದಿಗೆ ಗಾಯ
Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್ರಿಂದ ಪರಿಶೀಲನೆ
Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ
Lok Sabha Election: ‘ಬಿವೈಆರ್ಗೆ 3 ಲಕ್ಷ ಮತ ಅಂತರದ ಗೆಲುವು ಖಚಿತ’
ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ