ಚುನಾವಣಾ ಫಲಿತಾಂಶಕ್ಕೂ ಮೊದಲೇ ರಾಜ್ಯ ಸರ್ಕಾರ ಪತನ
Team Udayavani, Apr 25, 2019, 5:04 PM IST
ಶಿಕಾರಿಪುರ: ಕಾರ್ಯಕರ್ತರನ್ನುದ್ದೇಶಿಸಿ ಬಿ.ಎಸ್.ಯಡಿಯೂರಪ್ಪ ಮಾತನಾಡಿದರು.
ಶಿಕಾರಿಪುರ: ರಾಜ್ಯಾದ್ಯಂತ ಲೋಕಸಭಾ ಚುನಾವಣೆಯ ಅಬ್ಬರದ ಪ್ರಚಾರದ ನಂತರ ಸ್ವ- ಕ್ಷೇತ್ರ ಶಿಕಾರಿಪುರದಲ್ಲಿ ಎರಡು ದಿನಗಳಿಂದ ವಾಸ್ತವ್ಯ ಹೂಡಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಚುನಾವಣೆಯ ಮತದಾನದ ನಂತರ ತಾಲೂಕಿನ ಅಂಬಾರಗೊಪ್ಪ ಗ್ರಾಮದ ಮಲ್ಲೇಶಪ್ಪನವರ ಮನೆಗೆ ಭೇಟಿ ನೀಡಿ ಅವರ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳುವ ಮೂಲಕ ಬಿಜೆಪಿ ಕಾರ್ಯಕರ್ತರನ್ನು ಹುರಿದುಂಬಿಸಿದರು.
ಮತದಾನದ ದಿನ ಬೆಳಗ್ಗೆ ಎದ್ದು ಎಂದಿನಂತೆ ತಮ್ಮ ವ್ಯಾಯುವಿಹಾರ ನಡೆಸಿದ ಅವರು ಅವರು ಇಷ್ಟದೇವತೆ, ಕ್ಷೇತ್ರಾಧಿಪತಿ ಶ್ರೀ ಹುಚ್ಚರಾಯಸ್ವಾಮಿ ದೇವಸ್ಥಾನ ಮತ್ತು ಶ್ರೀ ರಾಘವೇಂದ್ರ ಸ್ವಾಮಿ ಮಠಕ್ಕೆ ಕುಟುಂಬ ಸಮೇತರಾಗಿ ಆಗಮಿಸಿ ಪ್ರಾರ್ಥನೆ ಸಲ್ಲಿಸಿದರು. ಹಲವು ಕಾರ್ಯಕರ್ತರ ಜೊತೆಗೂಡಿ ಮತದಾನ ಕೇಂದ್ರಕ್ಕೆ ಆಗಮಿಸಿ ಮತ ಚಲಾವಣೆ ಮಾಡಿದರು. ನಂತರ ಮನೆಯಲ್ಲಿ ಸಲ್ಪ ವಿಶ್ರಾಂತಿ ಪಡೆದ ಅವರು ಎಂದಿನಂತೆ ಪಕ್ಷದ ಕಾರ್ಯಕರ್ತರನ್ನು ಮಾತನಾಡಿಸಿದರು. ಸಂಜೆ ಮತದಾನ ಮುಗಿದ ಬಳಿಕ ಪಕ್ಷದ ಕಚೇರಿಗೆ ಆಗಮಿಸಿದ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿ, ಜಿಲ್ಲೆಯಲ್ಲಿ ಶಾಂತಿಯುತವಾಗಿ ಮತದಾನ ನಡೆದಿದ್ದು ಎಲ್ಲಿಯೂ ಅನಾಹುತ ಆಗದಂತೆ ನಮ್ಮ ಕಾರ್ಯಕರ್ತರು ಸಹಕರಿಸಿದ್ದಕ್ಕೆ ಮೊದಲು ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಬಿಜೆಪಿಯನ್ನು ಮಣಿಸಲು ಇಡೀ ಸರ್ಕಾರವೇ ಬಂದು ಶಿವಮೊಗ್ಗದಲ್ಲಿ ಎರಡು- ಮೂರು ದಿನ ಕುತಂತ್ರ ರಾಜಕಾರಣ ಮಾಡಿದರು. ಆದರೆ ಜಿಲ್ಲೆಯ ಜನ ಪ್ರಜ್ಞಾವಂತ ಮತದಾರರು ಈ ಬಾರಿ ಬಿಜೆಪಿಯ ಕೈ ಹಿಡಿಯಲಿದ್ದು 1.50,000 ಅಧಿಕ ಮತಗಳಿಂದ ಬಿ.ವೈ. ರಾಘವೇಂದ್ರ ರೋಚಕ ಜಯ ಗಳಿಸಲಿದ್ದಾರೆ ಎಂದರು.
ಮೈತ್ರಿ ಸರ್ಕಾರದಲ್ಲಿ ಯಾವುದೂ ಸರಿಯಿಲ್ಲ. ಪರಸ್ವರ ಭಿನ್ನಾಭಿಪ್ರಾಯಗಳು, ಆಂತರಿಕ ಕಚ್ಚಾಟ ಪ್ರಾರಂಭವಾಗಿದೆ. ಲೋಕಸಭೆ ಚುನಾವಣೆ ಫಲಿತಾಂಶ ಬರುವ ಮೊದಲೇ ಸರ್ಕಾರ ಪತನವಾಗಬಹುದು. ಸಿದ್ದರಾಮಯ್ಯನವರು ಹೋದ ಕಡೆಗಳಲ್ಲಿ ನಾನೇ ಮುಂದಿನ ಮುಖ್ಯಮಂತ್ರಿ ಎಂದು ಹೇಳಿಕೊಳ್ಳುತ್ತಿರುವುದು ಇದಕ್ಕೆ ಸಾಕ್ಷಿಯಾಗಿದೆ. ಅಧಿಕಾರದ ಕಚ್ಚಾಟದಿಂದ ಮೈತ್ರಿ ಸರ್ಕಾರದ ಶಾಸಕರು ಆಸಮಾಧಾನಗೊಂಡಿದ್ದು ಕುಮಾರ ಸ್ವಾಮಿ ಅವರನ್ನು ಮುಖ್ಯಮಂತ್ರಿ ಎಂದು ಒಪ್ಪಿಕೊಳ್ಳುತ್ತಿಲ್ಲ ನಾವು ಆಪರೇಷನ್ ಕಮಲ ಮಾಡುವ ಅಗತ್ಯವಿಲ್ಲ. ಸರ್ಕಾರ ತನ್ನಿಂದ ತಾನೇ ಬಿದ್ದು ಹೋಗುತ್ತದೆ. ನಮ್ಮ ಸಮೀಕ್ಷೆ ಪ್ರಕಾರ ಪಕ್ಷ ಶಿವಮೊಗ್ಗ ಸೇರಿದಂತೆ 22ಕ್ಕೂ ಹೆಚ್ಚು ಸ್ಥಾನ ಗೆಲ್ಲಲಿದೆ ಎಂದರು.