ಮಲೆನಾಡ ಜೀವನದಿ ಉಳಿಸಿ
ಶರಾವತಿ ನೀರು ಬೆಂಗಳೂರಿಗೆ ಹರಿಸುವುದಕ್ಕೆ ವ್ಯಾಪಕ ವಿರೋಧ
Team Udayavani, Jun 29, 2019, 12:48 PM IST
ಶಿವಮೊಗ್ಗ: ಶರಾವತಿ ನದಿ ನೀರು ಕೊಂಡೊಯ್ಯುವುದನ್ನು ವಿರೋಧಿಸಿ ವಕೀಲರ ಸಂಘ ಮನವಿ ಸಲ್ಲಿಸಿತು.
ಶಿವಮೊಗ್ಗ: ಶರಾವತಿ ನದಿ ನೀರನ್ನು ಕೊಂಡೊಯ್ಯುವ ಸರ್ಕಾರದ ನಿರ್ಧಾರ ಖಂಡಿಸಿ ವಕೀಲರ ಸಂಘ ಶುಕ್ರವಾರ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿತು.
ಶರಾವತಿ ಮಲೆನಾಡಿನ ಜೀವ ನದಿ. ಇಲ್ಲಿನ ಜನತೆಗೆ ಕುಡಿಯಲು ನೀರಿಲ್ಲ, ಆದರೆ ಬೆಂಗಳೂರಿಗೆ ತೆಗೆದುಕೊಂಡು ಹೋಗುವ ಸರ್ಕಾರದ ನಿರ್ಧಾರ ಅವೈಜ್ಞಾನಿಕವಾಗಿದೆ. ಇದೊಂದು ಪರಿಸರ ವಿರೋಧಿ ಯೋಜನೆ. ಈಗಾಗಲೇ ಬೃಹತ್ ನೀರಾವರಿ ಯೋಜನೆಗಳ ಹೆಸರಿನಲ್ಲಿ ಇಲ್ಲಿನ ಜನರು ನಿರಾಶ್ರಿತರಾಗಿದ್ದಾರೆ. ಅವರಿಗೇ ಇನ್ನೂ ಆಶ್ರಯ ಸಿಕ್ಕಿಲ್ಲ. ವಿದ್ಯುತ್ ಸಂಪರ್ಕ ಇಲ್ಲದ ಹಳ್ಳಿಗಳು ನೂರಾರು ಇವೆ. ಜನ ಕತ್ತಲೆಯಲ್ಲಿದ್ದಾರೆ. ಇಂತಹ ಸಮಯದಲ್ಲಿ 400 ಕಿಮೀ ದೂರವಿರುವ ಅಡ್ಡಾದಿಡ್ಡಿಯಾಗಿ ಬೆಳೆಯುತ್ತಿರುವ ಬೆಂಗಳೂರಿಗೆ ನೀರು ಕೊಡುವುದು ಯಾವ ನ್ಯಾಯ ಎಂದು ಪ್ರತಿಭಟನಾಕಾರರು ಪ್ರಶ್ನಿಸಿದರು.
ಈ ಯೋಜನೆಯಿಂದ ನೂರಾರು ಎಕರೆ ಅರಣ್ಯ ಭೂಮಿ ಮತ್ತಷ್ಟು ನಾಶವಾಗುತ್ತದೆ. ವಿದ್ಯುತ್ ಉತ್ಪಾದನೆ ಕಡಿಮೆಯಾಗುತ್ತದೆ. ಲಾಭಕ್ಕಿಂತ ನಷ್ಟವೇ ಹೆಚ್ಚಾಗುತ್ತದೆ. ಮತ್ತಷ್ಟು ಜನರು ಆಸ್ತಿ-ಮನೆಗಳನ್ನು ಕಳೆದುಕೊಳ್ಳುತ್ತಾರೆ. ಕೆಲವು ರಾಜಕಾರಣಿಗಳ ಸ್ವಾರ್ಥ ಯೋಜನೆ ಇದಾಗಿದೆ. ಇದರ ಹಿಂದೆ ಬೆಂಗಳೂರು ಜನರು ಮೇಲಿನ ವಿಶ್ವಾಸವೂ ಇಲ್ಲ. ಮಲೆನಾಡಿನ ಜನರ ಬಗ್ಗೆ ಪ್ರೀತಿಯೂ ಇಲ್ಲ. ಸರ್ಕಾರ ಕೂಡಲೇ ಈ ಆದೇಶ ಹಿಂಪಡೆಯಬೇಕು ಎಂದು ಆಗ್ರಹಿಸಲಾಗಿದೆ.
ವಕೀಲರ ಸಂಘದ ಅಧ್ಯಕ್ಷ ಜಿ. ಮಧು, ಪ್ರಮುಖರಾದ ದೇವೇಂದ್ರಪ್ಪ, ರವಿಕುಮಾರ್, ಕೆ.ಪಿ. ಶ್ರೀಪಾಲ್, ಮಂಜು, ನಂದಿನಿದೇವಿ ಮತ್ತಿತರರು ಇದ್ದರು.