ಹುಂಚದಲ್ಲಿ ಕಲ್ಲು ಗಣಿಗಾರಿಕೆ ಬೇಡ
ಗಣಿಗಾರಿಕೆಯಿಂದ ಅಪಾರ ಜೀವಜಲ ನಾಶ ವೃಕ್ಷಲಕ್ಷ ಆಂದೋಲನ ಆತಂಕ
Team Udayavani, Apr 10, 2019, 5:03 PM IST
ಶಿವಮೊಗ್ಗ: ಹುಂಚ ಹಸಿರುಬೆಟ್ಟದಲ್ಲಿ ಕಲ್ಲು ಗಣಿಗಾರಿಕೆಗೆ ಅವಕಾಶ ಕೊಡಬಾರದು ಎಂದು ಆಗ್ರಹಿಸಿ ವೃಕ್ಷಲಕ್ಷ ಆಂದೋಲನ ವತಿಯಿಂದ ಮಂಗಳವಾರ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.
ಹುಂಚ ಗ್ರಾಮದ ಹಸಿರುಬೆಟ್ಟದಲ್ಲಿ ಖಾಸಗಿಯವರಿಗೆ ಜಿಲ್ಲಾ ಗಣಿ ಇಲಾಖೆ ಕಲ್ಲು ಗಣಿಗಾರಿಕೆ ನಡೆಸಲು ಪರವಾನಗಿ ನೀಡಿದೆ. ಹುಂಚ ಸುತ್ತಮುತ್ತಲಿನ ಹಳ್ಳಿಗಳ ರೈತರು ಇದರಿಂದ ಅಪಾಯಕ್ಕೆ ಒಳಗಾಗಲಿದ್ದಾರೆ. ಕೃಷಿ, ನೆಲ, ಜಲ ಆಪತ್ತಿಗೆ ಒಳಗಾಗಿದ್ದಾರೆ. ಕಲ್ಲು ಗಣಿಗಾರಿಕೆಗೆ ನೀಡಿರುವ ಅನುಮತಿಯನ್ನು ತಕ್ಷಣ ರದ್ದುಪಡಿಸಬೇಕೆಂದು ವೃಕ್ಷಲಕ್ಷ ಆಂದೋಲನದ ಅನಂತ ಹೆಗಡೆ ಆಶೀಸರ ಒತ್ತಾಯಿಸಿದ್ದಾರೆ.
ವೃಕ್ಷಲಕ್ಷ ಆಂದೋಲನ ಈಗಾಗಲೇ ತಜ್ಞರ ತಂಡದೊಂದಿಗೆ ಈ ಪ್ರದೇಶಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದೆ. ಅಧ್ಯಯನಕಾರರು, ಪರಿಸರ ತಜ್ಞರು ಯಾವುದೇ ಕಾರಣಕ್ಕೂ ಇಲ್ಲಿ ಗಣಿಗಾರಿಕೆ ನಡೆಯಬಾರದು ಎಂದು ಹೇಳಿದ್ದಾರೆ. ಕುಮದ್ವತಿ,
ಶರಾವತಿ ಹಾಗೂ ಹರಿದ್ರಾವತಿ ನದಿಗಳ ಉಗಮ ಸ್ಥಾನ ಇದಾಗಿದ್ದು, ಗಣಿಗಾರಿಕೆಯಿಂದ ಈ ಎಲ್ಲಾ
ನದಿಗಳು ಬತ್ತಿ ಹೋಗಲಿವೆ. ಇದರ ಜೊತೆಗೆ ನೂರಾರು ಕೆರೆಗಳ ಜಲ ಸೆಲೆಗಳು ಇಲ್ಲ. ಹಲವು
ಹಳ್ಳಿಗಳು ನೀರಿನ ಕೊರತೆಯನ್ನು ಅನುಭವಿಸಲಿವೆ.
ಬಸದಿಗಳು ದೇವಾಲಯಗಳು ಇವೆಲ್ಲವೂ ಇಲ್ಲಿವೆ.
ಗಣಿಗಾರಿಕೆಯ ದುಷ್ಪರಿಣಾಮ ಇಲ್ಲೆಲ್ಲಾ ಬೀರಲಿದೆ
ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಗಣಿಗಾರಿಕೆಯಿಂದ ಹಸಿರುಬೆಟ್ಟ, ಹಳ್ಳಕೊಳ್ಳಗಳು, ಸಿಹಿನೀರಿನ ಝರಿಗಳು, ಬತ್ತಿ ಜನ ಜಾನುವಾರುಗಳು ಬಳಕೆಗೆ ನೀರೇ ಇಲ್ಲವಾಗುತ್ತದೆ. ಭೂಕುಸಿತವಾಗುತ್ತದೆ. ಭೂಕಂಪ ಸಂಭವಿಸುತ್ತದೆ. ಆದ್ದರಿಂದ ತಕ್ಷಣ ಪರವಾನಗಿ ರದ್ದು ಮಾಡಬೇಕು. ಅಲ್ಲದೇ, ಪರಿಸರ ಕಾಯ್ದೆಗೂ ಇದು ವಿರೋಧವಾಗಿದೆ ಎಂದಿರುವ ಅವರು, ಸರ್ಕಾರ ಈ ಎಲ್ಲಾ ಅಪಾಯಗಳನ್ನು ಗಮನಿಸಿ ಈ ಭಾಗದ ರೈತರ ಮತ್ತು ಸಾರ್ವಜನಿಕರ ನೆಮ್ಮದಿಗಾಗಿ ತಕ್ಷಣ ಗಣಿಗಾರಿಕೆ ನಿಲ್ಲಿಸಬೇಕೆಂದು ಒತ್ತಾಯಿಸಿದ್ದಾರೆ. ಈ ಸಂದರ್ಭದಲ್ಲಿ ಪ್ರೊ| ಬಿ.ಎಂ. ಕುಮಾರಸ್ವಾಮಿ ಮತ್ತಿತರರು ಇದ್ದರು.