ಕೊಠಡಿ ಕೊರತೆ: ಶೈಕ್ಷಣಿಕ ಪ್ರಗತಿ ಕುಂಠಿತ
ಒಂದೇ ಕೊಠಡಿಯಲ್ಲಿ ಬಾಲಕಿಯರ ಪ್ರೌಢಶಾಲಾ ವಿಭಾಗ-ಕಾಲೇಜು ತರಗತಿ ಕೊಠಡಿಗಳ ನಿರ್ಮಾಣಕ್ಕೆ ಆಗ್ರಹ
Team Udayavani, Nov 21, 2019, 6:05 PM IST
ಶ್ರೀನಿವಾಸಪುರ: ನಿಯಮಾನುಸಾರ ಬೆಳಗ್ಗೆ 8ಗಂಟೆ ಯಿಂದ ಮಧ್ಯಾಹ್ನ 2ಗಂಟೆವರೆಗೆ ಕಾಲೇಜು ನಡೆಸಬೇಕೆಂಬ ನಿಯಮವಿದ್ದರೂ ಪಟ್ಟಣದ ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜಿಗೆ ಕಟ್ಟಡದ ಕೊರತೆಯಿಂದ ಇದನ್ನು ಪಾಲಿಸಲಾಗುತ್ತಿಲ್ಲ.
ವಿದ್ಯಾರ್ಥಿಗಳಿಗೆ ಕೊಠಡಿಗಳ ಅಭಾವದ ಜೊತೆಗೆ ಸಮಯದ ಸಮಸ್ಯೆ ಕಾಡುತ್ತಿದೆ. ಈ ಮಧ್ಯೆ ಬಾಲಕಿಯರ ಪ್ರೌಢಶಾಲಾ ವಿಭಾಗ, ಕಾಲೇಜು ಹೊಂದಾ ಣಿಕೆಯಿಂದ ಹೊಸ ಕೊಠಡಿ ಹಾಗೂ ಹಳೇ ಕೊಠಡಿಗಳ ನಡುವೆ ತರಗತಿ ನಡೆಸುವ ಸ್ಥಿತಿಯಿದೆ. ಹೀಗಾಗಿ ವಿದ್ಯಾರ್ಥಿ ಗಳ ಶೈಕ್ಷಣಿಕ ಗುಣಮಟ್ಟ ಪ್ರಗತಿ ಸಾಧಿಸಲು ಸಾಧ್ಯವೇ ಎನ್ನುವಂತಾಗಿದೆ.
ಶ್ರೀನಿವಾಸಪುರ ಹೃದಯ ಭಾಗದಲ್ಲಿನ ಕೆಎಸ್ಆರ್ ಟಿಸಿ ಬಸ್ ನಿಲ್ದಾಣಕ್ಕೆ ಕೂಗಳತೆಯಲ್ಲಿ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ಇದೇ ಸ್ಥಳದಲ್ಲಿ ಬಾಲಕಿಯರ ಪ್ರೌಢಶಾಲಾ ವಿಭಾಗವು ಸೇರಿ ಒಂದೇ ಕಟ್ಟಡದ ಕೊಠಡಿಗಳಲ್ಲಿ ಹೊಂದಾಣಿಕೆಯಿಂದ ತರಗತಿಗಳು ನಡೆಯುತ್ತಿವೆ.
ಕಾಲೇಜು ವಿದ್ಯಾರ್ಥಿಗಳ ಸಂಖ್ಯೆ 318 ಇದ್ದರೆ, ಪ್ರೌಢ ಶಾಲಾ ವಿಭಾಗದಲ್ಲಿ 278 ಮಂದಿ ವಿದ್ಯಾರ್ಥಿನಿಯರು ವ್ಯಾಸಂಗ ಮಾಡುತ್ತಿದ್ದಾರೆ. ಈ ಹಿಂದಿನ ಕಟ್ಟಡದ ಬಹುತೇಕ ಕೊಠಡಿಗಳು ಮಳೆಯಿಂದಾಗಿ ನೀರು ಸೋರುವುದು, ಮೈದಾನದಲ್ಲಿ ಮಳೆ ನೀರು ಶೇಖರಣೆಯಾಗಿ ಕೆರೆಯಂತೆ ಕಾಣುವುದು, ಗೋಡೆಗಳ ಬಿರುಕು, ನೆಲಹಾಸಿಗೆ ಕಿತ್ತು ಶಿಥಿಲಾ ವಸ್ಥೆಯಲ್ಲಿ ಕಂಡು ಬಂದಿತ್ತು. ಅಲ್ಲದೇ, ಚಾವಣಿ ಸಿಮೆಂಟ್ ಪದರಗಳು ಉದುರಿ ವಿದ್ಯಾರ್ಥಿನಿಯರ ಮೇಲೆ ಬಿದ್ದು ಆಸ್ಪತ್ರೆಗಳಿಗೆ ಚಿಕಿತ್ಸೆಗೆ ದಾಖಲಾಗಿದ್ದಾರೆ. ಈ ಕಾರಣದಿಂದ 4 ವರ್ಷಗಳ ಹಿಂದೆ ಜಿಲ್ಲಾಧಿಕಾರಿ ವಿದ್ಯಾರ್ಥಿ ನಿಯರ ಹಿತ ದೃಷ್ಟಿಯಿಂದ ಅವರ ಆದೇಶದ ಮೇರೆಗೆ ಇಲ್ಲಿನ ತಹಶೀಲ್ದಾರರು ಅಂದೇ ಶಿಥಿಲಗೊಂಡ ಕೊಠಡಿ ಗಳಿಗೆ ಬೀಗ ಹಾಕಿದ್ದರು.
ಅಂದಿನಿಂದ ಇರುವ ಕೊಠಡಿಗಳಲ್ಲಿ ಹಾಗೂ ಮರಗಳ ಕೆಳಗೆ ಪಾಠ ಮಾಡಬೇಕಾಗಿತ್ತು. ಇದರಿಂದ ಶಾಸಕ ಕೆ.ಆರ್.ರಮೇಶ್ಕುಮಾರ್ ಅವರು 1.90 ಕೋಟಿ ರೂ. ವೆಚ್ಚದಲ್ಲಿ ನೂತನ ಕೊಠಡಿ ಕಟ್ಟಿಸಿಕೊಟ್ಟಿದ್ದಾರೆ. ಇದರಲ್ಲಿ ಭೋಧನಾ ಕೊಠಡಿ 6, ಪ್ರಾಂಶುಪಾಲರ ಕೊಠಡಿ, ಗುಮಾ ಸ್ಥರು, ದಾಸ್ತಾನು ಕೊಠಡಿ ಶೌಚಾಲಯ ಕೊಠಡಿ ಒಳಗೊಂಡಿದೆ.
ಕಾಲೇಜು-ಪ್ರೌಢಶಾಲೆಗೆ ಪ್ರತ್ಯೇಕ ಕೊಠಡಿಗಳು ಆಗಿದ್ದಲ್ಲಿ ಶೈಕ್ಷಣಿಕ ಗುಣ ಮಟ್ಟ ಸಾಧಿಸಬಹುದು ಎಂಬುದು ಶಿಕ್ಷಣ ತಜ್ಞರ ಅನಿಸಿಕೆ. ಕಾಲೇಜು- ಪ್ರೌಢಶಾಲೆಯಲ್ಲಿ ಬಹಳಷ್ಟು ಮಂದಿ ಎಸ್ಸಿ, ಎಸ್ಟಿ, ಅಲ್ಪಸಂಖ್ಯಾತರು, ಹಿಂದುಳಿದ ವರ್ಗಗಳ ವಿದ್ಯಾರ್ಥಿನಿಯರು ಅಭ್ಯಾಸ ಮಾಡುತ್ತಿದ್ದಾರೆ. ಈಗ ಕಟ್ಟಿಸಿಕೊಟ್ಟಿರುವ ಕೊಠಡಿಗಳ ಜೊತೆ ಉಳಿ ದಿದ್ದನ್ನು ಸಹ ಹಳೇ ಕಟ್ಟಡ ಕೆಡವಿ ನೂತನ ಕೊಠಡಿಗಳ ನಿರ್ಮಾಣಕ್ಕೆ ಶಾಸಕರು ಈ ಬಗ್ಗೆ ಗಮನ ಹರಿಸಬೇಕಾಗಿದೆ.