ನಕಲಿ ಹತ್ತಿ ಬೀಜಗಳ ಮಾರಾಟ ಜಾಲಕ್ಕೆ ಸಿಕ್ಕಿರೀ ಜೋಕೆ!
ಇಳುವರಿ ಹೆಚ್ಚಿಸುವ ಬೀಜ-ರಸಗೊಬ್ಬರ ಕಾಯ್ದಿರಿಸಲು ಸಲಹೆ
Team Udayavani, Jun 7, 2019, 11:43 AM IST
ಬಸವರೆಡ್ಡಿ
ಸಿರುಗುಪ್ಪ: ಇನ್ನೇನು ಮುಂಗಾರು ಶುರುವಾಗುತ್ತಿದ್ದು, ತಾಲೂಕಿನೆಲ್ಲೆಡೆ ರೈತಾಪಿ ವರ್ಗ ಕೃಷಿ ಚಟುವಟಿಕೆಗೆ ಸಿದ್ಧತೆ ಮಾಡುತ್ತಿದೆ. ಇದರ ಜತೆಗೆ ಕೆಲ ಖಾಸಗಿ ಬಿತ್ತನೆ ಬೀಜ ಮಾರಾಟ ಕಂಪನಿಗಳು ತಾಲೂಕಿನ ಹಳ್ಳಿಗಳಲ್ಲಿ ಭರ್ಜರಿ ಪ್ರಚಾರ ನಡೆಸುತ್ತಿವೆ. ಆದರೆ ಅಂತಹ ಕಡೆ ಖರೀದಿಸಿದ ಬೀಜಗಳು ಕೆಲವೊಮ್ಮೆ ವಿಫಲಗೊಳ್ಳುತ್ತಿದ್ದು, ರೈತರು ಕೈ ಸುಟ್ಟುಕೊಳ್ಳುವ ಸಾಧ್ಯತೆ ಇದೆ. ಇಂತಹ ಕಡೆ ಬೀಜಗಳನ್ನು ಖರೀದಿಸದಂತೆ ಅನೇಕ ಬಾರಿ ಎಚ್ಚರಿಕೆ ನೀಡಿದೆಯಾದರೂ ಗಡಿಭಾಗದ ಸೀಮಾಂದ್ರ ಮತ್ತು ತೆಲಂಗಾಣದ ಕೆಲವು ಖಾಸಗಿ ಕಂಪನಿಗಳು ಗಡಿಭಾಗದ ಪ್ರದೇಶಗಳಲ್ಲಿ ಪ್ರಚಾರ ಮಾಡುತ್ತಿವೆ.
ತಾಲೂಕಿನಲ್ಲಿ ಮುಂಗಾರು ಹಂಗಾಮಿನಲ್ಲಿ ಮಳೆಯಾಶ್ರಿತ ಪ್ರದೇಶ, ಬೋರ್ವೆಲ್ ನೀರಿನ ಸೌಲಭ್ಯ ಹೊಂದಿದ ರೈತರು ಸುಮಾರು 22 ರಿಂದ 25ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಹತ್ತಿ ಬೆಳೆ ಬೆಳೆಯುತ್ತಾರೆ. ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಹತ್ತಿಯನ್ನು ಬೆಳೆಯುವ ರೈತರು ತಾಲೂಕಿನಲ್ಲಿರುವುದರಿದಂದ ಹತ್ತಿ ಬೀಜ ಮಾರಾಟಗಾರರು, ರೈತರ ಹತ್ತಿರ ಬೀಜ ಮಾರಾಟ ಮಾಡಲು ಹಳ್ಳಿಗಳಿಗೆ ಬರುವುದು ಸಾಮಾನ್ಯವಾಗಿದೆ.
ಎಕರೆಗೆ 10ರಿಂದ 20 ಕ್ವಿಂಟಲ್ ಹತ್ತಿ ಇಳುವರಿ ಬರಲಿದೆ. ಕ್ರಿಮಿನಾಶಕದ ಹೆಚ್ಚಿನ ಅಗತ್ಯವಿಲ್ಲ, ರೋಗ, ರುಜಿನಗಳು ಕಡಿಮೆ, ದೊಡ್ಡ ಕಾಯಿಗಳು ಬಿಡುತ್ತವೆ. ಇದರಿಂದ ಇಳುವರಿ ಹೆಚ್ಚು ಬರುತ್ತದೆ ಎಂದೆಲ್ಲ ಹೇಳಿ ರೈತರ ಮನವೊಲಿಸುವ ಯತ್ನ ನಡೆಯುತ್ತಿದೆ. ಗ್ರಾಮಾಂತರ ಪ್ರದೇಶದಲ್ಲಿ ಖಾಸಗಿ ವಾಹನಗಳಲ್ಲಿ ಮೈಕ್ ಅಳವಡಿಸಿ ಭರ್ಜರಿ ಪ್ರಚಾರ ನಡೆಸುತ್ತಿವೆ. ಅಲ್ಲದೆ ಅಂಗಡಿಗಳಲ್ಲಿ ದೊರೆಯುವುದಕ್ಕಿಂತ ಕಡಿಮೆ ದರದಲ್ಲಿ ಬೀಜ ಸಿಗುತ್ತವೆ ಎಂದೆಲ್ಲಾ ಪ್ರಚಾರ ನಡೆಸಲಾಗುತ್ತಿದೆ.
ಇಂತದ್ದೇ ಬೀಜಗಳನ್ನು ಖರೀದಿಸಿ ಈ ಹಿಂದೆ ತಾಲೂಕಿನ ಸಾಕಷ್ಟು ರೈತರು ಮೋಸ ಹೋಗಿರುವ ಉದಾಹರಣೆಗಳು ಸಾಕಷ್ಟಿವೆ. ಮೊಳಕೆ ಬಾರದೆ ಬೆಳೆಯನ್ನು ರೈತರು ಕೆಡಿಸಿದ ನಿದರ್ಶನಗಳಿವೆ. ಕೆಲ ನಕಲಿ ಬೀಜ ಬಿತ್ತನೆ ಕಂಪನಿಗಳು ರೈತರನ್ನು ವಂಚಿಸುತ್ತಿವೆ. ಕೆಜಿಗೆ ರೂ.500 ರಿಂದ 600 ಮಾತ್ರ ಎಂದು ಪುಸಲಾಯಿಸಿ ಮಾರಾಟ ಮಾಡುವವರು ಕಾಣುವುದೇ ಇಲ್ಲ. ಆದರೆ ಅಂತಹ ಬೀಜ ಖರೀದಿಸಿದ ರೈತರು ಅತ್ತ ಹಣವು ಉಳಿಯದೆ ಇತ್ತ ಇಳುವರಿಯೂ ಬಾರದೆ ಸಂಕಷ್ಟ ಅನುಭವಿಸಿದ್ದಾರೆ.
ಕೃಷಿ ಇಲಾಖೆ ಅಧಿಕಾರಿಗಳು ತಿಳಿಸುವಂತೆ ಬಿತ್ತನೆ ಬೀಜಗಳನ್ನು ಎಲ್ಲಿ ಬೇಕಾದಲ್ಲಿ ಖರೀದಿಸಬಾರದು. ಪ್ರಮಾಣಿತ ಕಂಪನಿಗಳ ಬೀಜಗಳನ್ನೇ ಖರೀದಿಸುವುದು ಸೂಕ್ತ. ಅದರಲ್ಲೂ ಅಂಗಡಿಗಳಿಗೆ ತೆರಳಿ, ರೈತ ಸಂಪರ್ಕ ಕೇಂದ್ರಗಳಿಂದ ಮಾಹಿತಿ ಪಡೆದು ಖರೀದಿಸಬೇಕು ಎನ್ನುತ್ತಾರೆ.
ರೈತರು ಯಾವುದೇ ಕಾರಣಕ್ಕೂ ಅನಧಿಕೃತ ಕಂಪನಿಗಳ ಬಿತ್ತನೆ ಬೀಜ ಖರೀದಿಸಬಾರದು. ಒಂದು ವೇಳೆ ಖರೀದಿಸಿದರೆ ಕಡ್ಡಾಯವಾಗಿ ಬಿಲ್ ಪಡೆಯಬೇಕು. ಇಳುವರಿ ಕೈ ಸೇರುವವರೆಗೆ ಪ್ಯಾಕೆಟ್ಗಳನ್ನು ಕಾಯ್ದಿರಿಸಿಕೊಳ್ಳಬೇಕು. ಒಂದು ವೇಳೆ ನಕಲಿಯಾಗಿದ್ದರೆ ಅಂತಹ ಕಂಪನಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ನಮಗೆ ದಾಖಲೆ ಬೇಕಾಗುತ್ತದೆ. ಆದ್ದರಿಂದ ರೈತರು ಅಧಿಕೃತ ಅಂಗಡಿಗಳಲ್ಲಿ ಬಿತ್ತನೆ ಬೀಜ ಖರೀದಿಸುವುದು ಸೂಕ್ತ.
• ಬಿ.ಆರ್.ಪಾಲಾಕ್ಷಿಗೌಡ,
ತಾಲೂಕು ಸಹಾಯಕ ಕೃಷಿ ಅಧಿಕಾರಿ
ಕೆಲ ಖಾಸಗಿ ಕಂಪನಿಗಳು ಇತ್ತೀಚೆಗೆ ಗ್ರಾಮೀಣ ಭಾಗದಲ್ಲಿ ಹೆಚ್ಚಿನ ಪ್ರಚಾರ ಮಾಡುತ್ತಿವೆ. ಕಡಿಮೆ ದರ, ಹೆಚ್ಚು ಇಳುವರಿ ಎಂದೆಲ್ಲಾ ಹೇಳಿ ರೈತರ ಮನವೊಲಿಸುತ್ತಿವೆ. ಅಂತಹ ಕಂಪನಿಗಳ ಮೇಲೆ ಕೃಷಿ ಅಧಿಕಾರಿಗಳು ವಿಶೇಷ ನಿಗಾ ವಹಿಸಬೇಕು.
• ವಾ.ಹುಲುಗಯ್ಯ,
ರೈತ ಮುಖಂಡರು.