ನೀತಿಸಂಹಿತೆ ಚುನಾವಣೆಗಷ್ಟೇ ಸೀಮಿತವಲ್ಲ
ಜೀವನದಲ್ಲಿ ಸದಾ ಅನುಸರಿಸಬೇಕಾದ ಧರ್ಮವೇ ನೀತಿಸಂಹಿತೆ: ತರಳಬಾಳು ಸ್ವಾಮೀಜಿ
Team Udayavani, Apr 14, 2019, 4:17 PM IST
ಸಿರಿಗೆರೆ: ಶ್ರದ್ಧಾಂಜಲಿ ಸಮಾರಂಭದ ಅಂಗವಾಗಿ ಕಾಶಿ ಮಹಾಲಿಂಗ ಸ್ವಾಮಿಗಳ ಭಾವಚಿತ್ರ ಮೆರವಣಿಗೆ ನಡೆಯಿತು.
ಸಿರಿಗೆರೆ: ನೀತಿಸಂಹಿತೆ ಒಂದು ಧರ್ಮ ಮತ್ತು ಕರ್ತವ್ಯವಾಗಿದ್ದು, ಎಲ್ಲರೂ ಅದನ್ನು ಪಾಲಿಸಬೇಕು ಎಂದು ತರಳಬಾಳು ಜಗದ್ಗುರು
ಡಾ| ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ತರಳಬಾಳು ಜಗದ್ಗುರು ಬೃಹನ್ಮಠದ ಐಕ್ಯಮಂಟಪದಲ್ಲಿ ಅಣ್ಣನ ಬಳಗದ ವತಿಯಿಂದ ಹಮ್ಮಿಕೊಂಡಿದ್ದ ಕಾಶಿ ಮಹಾಲಿಂಗ ಸ್ವಾಮಿಗಳ 48ನೇ ಶ್ರದ್ಧಾಂಜಲಿ ಸಮಾರಂಭದ ಸಾನ್ನಿಧ್ಯ
ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು.
ನೀತಿಸಂಹಿತೆ ಚುನಾವಣೆ ಅವಧಿಗಷ್ಟೇ ಸೀಮಿತವಾಗಬಾರದು. ಹಾಗೇನಾದರೂ ಚುನಾವಣೆ ಅವ ಧಿಯಲ್ಲಿ ಮಾತ್ರ ಚುನಾವಣಾ
ನೀತಿಸಂಹಿತೆ ಪಾಲಿಸಿ ಉಳಿದ ಅವಧಿಯಲ್ಲಿ ನೀತಿಸಂಹಿತೆಯನ್ನು ಪಾಲಿಸುವಂತಿಲ್ಲ ಎಂಬರ್ಥ ಬರುತ್ತದೆ. ನೀತಿಸಂಹಿತೆ ಕೇವಲ ರಾಜಕಾರಣಿಗಳಿಗೆ ಮಾತ್ರ ಸೀಮಿತವಲ್ಲ. ಅದು ಎಲ್ಲರಿಗೂ ಅನ್ವಯಿಸುವ ಧರ್ಮ, ಕರ್ತವ್ಯವಾಗಿದ್ದು, ಸದಾ ಅನುಸರಿಸಬೇಕಾದುದು ಎಂದರು.
ಚುನಾವಣೆಯಲ್ಲಿ ಯಾರಿಗೆ ಮತ ಚಲಾಯಿಸಬೇಕು ಎಂಬ ಪ್ರಶ್ನೆ
ಸಂಕೀರ್ಣವಾದುದು. ಯಾರು ಒಳ್ಳೆಯವರು, ಕೆಟ್ಟವರು ಎಂದು ನಿರ್ಧರಿಸುವುದು ಕಷ್ಟ. ವ್ಯಕ್ತಿಯನ್ನು ನೋಡಿ ಮತ ಹಾಕಬೇಕೆ, ಪಕ್ಷವನ್ನು ನೋಡಿ ಮತಹಾಕಬೇಕೆ, ಎಂಬ ಸಂದಿಗ್ಧತೆ ಮತದಾರರನ್ನು ಕಾಡುತ್ತಿದೆ. ಮುಂಬರುವ ದಿನಗಳಲ್ಲಿ ಭ್ರಷ್ಟಾಚಾರ ರಹಿತ ಚುನಾವಣೆ ಶುದ್ಧ ರಾಜಕಾರಣ ಬರಬಹುದೆಂಬ ಆಶಾಭಾವನೆ ಹೊಂದೋಣ ಎಂದು ಆಶಿಸಿದರು.
ಡಾ| ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ತರಬೇತುದಾರನಿದ್ದಂತೆ ಕುದುರೆ ಇರುತ್ತದೆ ತರಬೇತುದಾರ ಕುಂಟುತ್ತಾ ನಡೆಯುತ್ತಿದ್ದರೆ ಸರಿಯಾಗಿ ನಡೆಯುತ್ತಿರುವ ಕುದುರೆಯೂ ಕುಂಟುತ್ತಾ ನಡೆಯುತ್ತದೆ. ಆದ್ದರಿಂದ ಧಾರ್ಮಿಕ ಕ್ಷೇತ್ರದಲ್ಲಿ ಧರ್ಮಾಧಿಕಾರಿಗಳು ರಾಜಕೀಯ ನೇತಾರರು, ವಾಣಿಜ್ಯ
ಕ್ಷೇತ್ರದಲ್ಲಿನ ಶಿಕ್ಷಕರು ಹಾಗೂ ಇತರರಿಗೆ ಮಾರ್ಗದರ್ಶನ ಮಾಡುವ ನಾಯಕರು ಸರಿಯಾಗಿ ನಡೆದರೆ ಜನಸಾಮಾನ್ಯರೂ ಸರಿಯಾಗಿಯೇ ನಡೆಯುತ್ತಾರೆ. ನಾಯಕರು ಮತ್ತು ಮಾರ್ಗದರ್ಶಕರ ನಡೆ-ನುಡಿಗಳು ತಪ್ಪಾಗಿದ್ದರೆ ಜನರ ತಪ್ಪನ್ನು ತಿದ್ದಲು ಸಾಧ್ಯವಾಗುವುದಿಲ್ಲ ಎಂದು ಎಚ್ಚರಿಸಿದರು.
ಅಣ್ಣನ ಬಳಗದ ಅಧ್ಯಕ್ಷರಾದ ಐ.ಜಿ. ಚಂದ್ರಶೇಖರಯ್ಯ ಸ್ವಾಗತಿಸಿದರು. ಬೆಳಿಗ್ಗೆ ಕರ್ತೃ ಗದ್ದುಗೆಯಲ್ಲಿ ಕಾಶಿ ಮಹಾಲಿಂಗ ಸ್ವಾಮಿಗಳ ಪ್ರತಿಮೆಗೆ ಪಂಚಾಭಿಷೇಕ, ಶೋಡಶೋಪಚಾರ ಪೂಜೆ, ಶತಾಷ್ಟೋತ್ತರ ಪೂಜೆ ಹಾಗೂ ಮಹಾಮಂಗಳಾರತಿ ನೆರವೇರಿಸಲಾಯಿತು.
ಬೃಹನ್ಮಠದ ಬಿರುದಾವಳಿ, ವೀರಗಾಸೆ ನೃತ್ಯ ಹಾಗೂ ವಾದ್ಯ ಗೋಷ್ಠಿಯೊಂದಿಗೆ ಕಾಶಿ ಮಹಾಲಿಂಗ ಸ್ವಾಮಿಗಳ ಭಾವಚಿತ್ರ ಮೆರವಣಿಗೆ ಮಾಡಲಾಯಿತು.
ಕಾಶಿ ಮಹಾಲಿಂಗಸ್ವಾಮಿಗಳು ವಿರಕ್ತ ಗುರುಗಳಾಗಿ ಆಚಾರ-ವಿಚಾರ ಪರಿಶುದ್ಧರಾಗಿ ತಮ್ಮ ಶಿಷ್ಯರ ಓರೆ ಕೋರೆಗಳನ್ನು ತಿದ್ದಿದರು. ಅಲ್ಲದೆ ವ್ಯಕ್ತಿ ಮತ್ತು ಸಮಾಜವನ್ನು ತಿದ್ದಿದ ಮಹಾಗುರುಗಳಾಗಿದ್ದರು.
.ಡಾ| ಪಂಡಿತಾರಾಧ್ಯ ಶಿವಾಚಾರ್ಯ
ಸ್ವಾಮೀಜಿ.