ಸಾಂಸ್ಕೃತಿಕ ಚಟುವಟಿಕೆಗೆ ಆದ್ಯತೆ
•ಮಕ್ಕಲ್ಲಿರುವ ಕಲೆ ಗುರುತಿಸಿ ಪ್ರೋತ್ಸಾಹ ನೀಡಿ: ಮದನಗೋಪಾಲ
Team Udayavani, Aug 12, 2019, 11:02 AM IST
ಸುರಪುರ: ಗರುಡಾದ್ರಿ ಮಂದಿರದಲ್ಲಿ ಜರುಗಿದ ತಾಲೂಕು ಮಟ್ಟದ ಗೀತ ಗಾಯನ ಸ್ಪರ್ಧೆಯಲ್ಲಿ ಮಾಜಿ ಸಚಿವ ರಾಜಾ ಮದನಗೋಪಾಲ ನಾಯಕ ಮಾತನಾಡಿದರು.
ಸುರಪುರ: ಮಕ್ಕಳಲ್ಲಿ ಶೈಕ್ಷಣಿಕ ಚಟುವಟಿಕೆಗಳ ಜತೆ ಸಾಂಸ್ಕೃತಿಕ ಚಟುವಟಿಕೆಗಳಾದ ಗೀತ, ಗಾಯನ ಸಂಗೀತ, ನೃತ್ಯ ಮತ್ತು ಕಲೆಗಳು ಮಕ್ಕಳ ದೈಹಿಕ, ಮಾನಸಿಕ ಮತ್ತು ಆರೋಗ್ಯಕ್ಕೆ ಸಹಕಾರಿಯಾಗಿವೆ ಎಂದು ಮಾಜಿ ಸಚಿವ ಮತ್ತು ಸ್ಕೌಟ್ಸ್-ಗೈಡ್ಸ್ ಜಿಲ್ಲಾಧ್ಯಕ್ಷ ರಾಜಾ ಮದನಗೋಪಾಲ ನಾಯಕ ಅಭಿಪ್ರಾಯಪಟ್ಟರು.
ಇಲ್ಲಿಯ ಗರುಡಾದ್ರಿ ಕಲಾ ಮಂದಿರದಲ್ಲಿ ಶುಕ್ರವಾರ ಭಾರತ ಸ್ಕೌಟ್ಸ್-ಗೈಡ್ಸ್ನ ಕರ್ನಾಟಕ ಸ್ಥಳೀಯ ಸಂಸ್ಥೆ ವತಿಯಿಂದ ಏರ್ಪಡಿಸಿದ್ದ ತಾಲೂಕು ಮಟ್ಟದ ಗೀತ, ಗಾಯನ ಸ್ಪರ್ಧಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಶಿಕ್ಷಕರು ಶಿಕ್ಷಣದ ಜತೆಯಲ್ಲಿ ಸಾಂಸ್ಕೃತಿಕ ಚಟುವಟಿಕೆಗಳಿಗೂ ಸಹ ಆದ್ಯತೆ ನೀಡಬೇಕು. ಮಕ್ಕಲ್ಲಿರುವ ಇಂತಹ ಕಲೆಗಳನ್ನು ಗುರುತಿಸಿ ಅವರಿಗೆ ಪ್ರೋತ್ಸಾಹ ನೀಡಬೇಕು ಎಂದು ಸಲಹೆ ನೀಡಿದರು.
ನ್ಯಾಯವಾದಿ ಜಯಲಲಿತಾ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ಬಸವರಾಜ ಜಮದ್ರಖಾನಿ, ಎಪಿಎಫ್ನ ಅನ್ವರ್ ಜಮಾದಾರ್ ವೇದಿಕೆಯಲ್ಲಿದ್ದರು. ನರಸಿಂಹ ಕುಲಕರ್ಣಿ ಬಾಡಿಹಾಳ ಮತ್ತು ಶ್ರೀಪಾದ ಗಡ್ಡದ ಅವರು ಗೀತ, ಗಾಯನ ಸ್ಪರ್ಧೆಯ ನಿರ್ಣಾಯಕರಾಗಿದ್ದರು. ತಾಲೂಕಿನ ನಾನಾ ಶಾಲೆಗಳ ಮಕ್ಕಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಪ್ರೇರಣಾ ಪ್ರೌಢಶಾಲೆ ಮಕ್ಕಳು (ಪ್ರಥಮ), ಆಲ್ದಾಳ ಗ್ರಾಮದ ಸಹಿಪ್ರಾ ಶಾಲೆ ಮಕ್ಕಳು (ದ್ವಿತೀಯ), ಶ್ರೀಮತಿ ರಾಣಿ ಜಾನಕೀದೇವಿ ಪ್ರೌಢಶಾಲೆ ಮತ್ತು ಡಾ| ಬಿ.ಆರ್. ಅಂಬೇಡ್ಕರ್ ಪ್ರೌಢಶಾಲೆ ಮಕ್ಕಳು (ತೃತೀಯ) ಸ್ಥಾನ ಪಡೆದು ಬಹುಮಾನ ಗಿಟ್ಟಿಸಿಕೊಂಡರು. ಶಿಕ್ಷಕಿ ಗೀತಾರಾಣಿ ಪ್ರಾಸ್ತಾವಿಕ ಮಾತನಾಡಿದರು. ರಾಜಶೇಖರ ದೇಸಾಯಿ ನಿರೂಪಿಸಿ, ವಂದಿಸಿದರು.